ಗದಗ: ಗದಗ ಜಿಲ್ಲೆಯಾದ್ಯಂತ ಸಾಯಂಕಾಲ ಸುರಿದ ಅಕಾಲಿಕ ಮಳೆಗೆ ಜನ ಜೀವನ ತತ್ತರಿಸಿ ಹೋಗಿದೆ. ಗದಗ ಜಿಲ್ಲೆಯ ವಿವಿಧೆಡೆ ಗುಡುಗು ಸಿಡಿಲು ಸಹಿತ ವರುಣ ಅಬ್ಬರಿಸಿದ್ದಾನೆ. ಪರಿಣಾಮ ಜನ ಜಾನುವಾರ ಅಸ್ತವ್ಯಸ್ತವಾಗಿದೆ. ಮಳೆರಾಯನ ಅಬ್ಬರಕ್ಕೆ ಹಲವು ಕಡೆ ನೀರು ಮನೆಗೆ ನುಗ್ಗಿ ಜನರು ಪರದಾಡುವಂತಾಗಿದೆ. ಗದಗ ತಾಲೂಕಿನ ಕೊಟುಮಚಗಿ ಗ್ರಾಮದಲ್ಲಿ ಸಂಜೆ ವೇಳೆಗೆ ಸುರಿದ ಭಾರಿ ಮಳೆ ಗ್ರಾಮದ ತಗ್ಗು ಪ್ರದೇಶಗಳಲ್ಲಿನ ಹಲವು ಮನೆಗಳಿಗೆ ನೀರು ನುಗ್ಗಿದೆ. ಮೊಣಕಾಲುವರೆಗೂ ಮನೆಯೊಳಗೆ ನೀರು ನುಗ್ಗಿದೆ. ಮನೆಗೆ ನುಗ್ಗಿದ ನೀರನ್ನ ಹೊರ ಹಾಕಲು ಮನೆ ಮಂದಿಯಲ್ಲ ಹರಸಾಹಸ ಪಡಬೇಕಾಯಿತು. ಇನ್ನೂ ಕೆಲವು ಕಡೆ ಮಳೆ ಗಾಳಿಗೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ.
ಸಿಡಿಲು ಬಡಿದು ಹೊತ್ತಿಉರಿದ ತೆಂಗಿನ ಮರ
ಇನ್ನು ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದ ಘಟನೆ, ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ರಾಜೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಗಂಗಾ ನಗರದ ಮನೆ ಮುಂದಿನ ತೆಂಗಿನ ಮರ ಸಿಡಿಲಿನ ಬೆಂಕಿಗೆ ಆಹುತಿಯಾಗಿದೆ. ಇನ್ನು ಜಿಲ್ಲೆಯ ಹಲವೆಡೆ ಗುಡುಗು, ಸಿಡಿಲು ಸಹಿತ ಬಾರಿ ಮಳೆಯಾಗಿದೆ. ತೆಂಗಿನ ಮರದ ಸಿಡಿಲು, ಬೆಂಕಿ ಕಂಡು ಸ್ಥಳೀಯರು ಕೆಲಕಾಲ ಭಯಭೀತಗೊಂಡಿದ್ದರು. ಗದಗ, ಗಜೇಂದ್ರಗಡ, ರೋಣ ಶಿರಹಟ್ಟಿ ತಾಲೂಕಿನ ಹಲವೆಡೆ ಬಿರುಗಾಳಿ ಮಳೆಯಾಗಿದೆ. ಅನೇಕ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ. ಬಿಸಿಲಿನಿಂದ ಬೆಂದ ಜಿಲ್ಲೆಯ ಜನರಿಗೆ ಮಳೆರಾಯ ತಂಪೆರೆಯುವಂತೆ ಮಾಡಿದ್ದಾನೆ.
ಇದನ್ನು ಓದಿ: ಜಕ್ಕೂರು ವೈಮಾನಿಕ ತರಬೇತಿ ಶಾಲೆ, ಏರೋಡ್ರಮ್ ಪಿಪಿಪಿ ಮಾದರಿಯಲ್ಲಿ ಅಭಿವೃದ್ದಿ
ಗದಗ ಜಿಲ್ಲೆಯಲ್ಲಿ ಸಿಡಿಲು ಬಡಿದು 16 ಕುರಿಗಳು ಸಾವು
ಗದಗ ಜಿಲ್ಲೆಯಲ್ಲಿ ತಡರಾತ್ರಿ ಸುರಿದ ಗುಡುಗು ಸಿಡಿಲು ಸಹಿತ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ನಿನ್ನೆ ತಡ ರಾತ್ರಿ ಸಿಡಿಲು ಬಡಿದು ಓರ್ವ ರೈತನ 16 ಕುರಿಗಳು ಸಾವನ್ನಪಿದ ಘಟನೆ ನಡೆದಿದೆ. ಗದಗ ತಾಲೂಕಿನ ಲಿಂಗಧಾಳ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಕುರಿಗಾಯಿ ಹನುಮಂತ ಬ್ಯಾಡಗಿ ಎಂಬುವವರಿಗೆ ಸೇರಿದ ಕುರಿಗಳಾಗಿದ್ದು ಸುಮಾರು 1 ಲಕ್ಷ ರೂ. ವರೆಗೆ ನಷ್ಟವಾಗಿದೆ ಅಂತ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.
ವರದಿ: ಸಂತೋಷ ಕೊಣ್ಣೂರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ