ಹಾಸನ ; ಬೇರೆ ಎಲ್ಲಾ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿ ಸರಕಾರಿ ಶಾಲಾ-ಕಾಲೇಜುಗಳಿಗೆ ಮೌಲಭೂತ ಸೌಕರ್ಯವನ್ನು ಕಲ್ಪಿಸಬೇಕೆಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಹಾಸನದಲ್ಲಿ ಮಾತನಾಡಿದ ಅವರು, ಅನೇಕ ಕಾಲೇಜುಗಳಲ್ಲಿ ಉಪನ್ಯಾಸಕರೆ ಇಲ್ಲದಿರುವುದನ್ನು ನೋಡಿದರೇ ಸರಕಾರವು ಖಾಸಗಿಯವರ ಹಿಡಿತದಲ್ಲಿ ಇದಿಯೇನೊ ಎನ್ನುವ ಅನುಮಾನಗಳು ಬರುತ್ತಿದೆ. ಕಳೆದ ಹತ್ತು ವರ್ಷಗಳಿಂದ ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಪ್ರಾಥಮಿಕ ಶಾಲೆಗಳು ಖಾಸಗಿಯವರ ಹೊಡೆತಕ್ಕೆ ಸಿಲುಕಿ ಬಾಗಿಲು ಮುಚ್ಚುವ ಪರಿಸ್ಥಿತಿಗೆ ಬಂದಿದೆ. ಇನ್ನು ಮುಂದೆ ಕಾಲೇಜುಗಳನ್ನು ಮುಚ್ಚುವ ಸಂದರ್ಭ ಬಂದೊದಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯ ಶಿಕ್ಷಣ ಇಲಾಖೆಗೆ ಸಲಹೆಗಾರರಾಗಿ ದೊರೆಸ್ವಾಮಿಯವರನ್ನು ನೇಮಕ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಬೇರೆ ಯಾವ ಶಿಕ್ಷಣ ತಜ್ಞರು ಸಿಗಲಿಲ್ಲವೇ? ಈ ಗಿರಾಕಿ ಯಾರು? ಬಡವರ ಲೂಟಿ ಮಾಡುವವರು ಶಿಕ್ಷಣ ಸಲಹೆಗಾರರಾದರೇ ಏನು ಗತಿ, ಇವರು ಶಿಕ್ಷಣ ಇಲಾಖೆಯ ಬಾಗಿಲು ಮುಚ್ಚಿಸುತ್ತಾರೆ ಎಂದು ಎಚ್ಚರಿಸಿದರು. ಮುಖ್ಯಮಂತ್ರಿಗಳು ಎಲ್ಲಾ ಕಾರ್ಯಕ್ರಮವನ್ನು ನಿಲ್ಲಿಸಿ ಸರಕಾರಿ ಶಾಲಾ ಕಾಲೇಜುಗಳಿಗೆ ಮೂಲಭೂತ ಸೌಲಭ್ಯ ನೀಡಲು ಮುಂದಾಗಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿ ಸಿ.ಎಸ್.ಆರ್. ಫಂಡ್ ಅನ್ನು ಶಾಲಾ- ಕಾಲೇಜು ಅಭಿವೃದ್ಧಿ ಬಳಸುವಂತೆ ಮನವಿ ಮಾಡಿದರು.
ಇನ್ನು ಶಾಲಾ-ಕಾಲೇಜು ಆರಂಭಕ್ಕೂ ಮೊದಲು ಅಗತ್ಯ ಸೌಕರ್ಯ ಕಲ್ಪಿಸಿ ಎಲ್ಲಾ ವಿದ್ಯಾರ್ಥಿಗಳಿಗೂ ಮಾಸ್ಕ್ ಹಾಗೂ ಸ್ಯಾನಿಟೈಸರ್ ಅನ್ನು ಉಚಿತವಾಗಿ ನೀಡಬೇಕು. 1 ರಿಂದ 9ನೇ ತರಗತಿಯವರೆಗೂ ಶಾಲೆ ಪ್ರಾರಂಭಿಸುವುದು ಬೇಡ. ಆಂಧ್ರ ರಾಜ್ಯದಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಿದಂತೆ ಇಲ್ಲಿಯೂ ಅನುಸರಿಸಲಿ ಎಂದು ಒತ್ತಾಯಿಸಿದರು.
ಶಿರಾ ಮತ್ತು ಆರ್.ಆರ್. ನಗರದಲ್ಲಿ ನೂರಕ್ಕೆ ನೂರರಷ್ಟು ಜೆಡಿಎಸ್ ಅಭ್ಯರ್ಥಿ ಗೆಲುವು ಪಡೆಯಲಿದ್ದಾರೆ. ಚುನಾವಣೆ ಪ್ರಚಾರದ ವೇಳೆ ಮುಖ್ಯಮಂತ್ರಿ ಸಭೆಗಿಂತ ಹೆಚ್ಚು ಜನರು ನಮ್ಮ ಸಭೆಯಲ್ಲಿದ್ದರು. ಶಿರಾದಲ್ಲಿ ಎಷ್ಟೆ ಹಣ ಖರ್ಚು ಮಾಡಿದರೂ ಬಿಜೆಪಿ ಸೋಲುತ್ತದೆ. ಶಿರಾದಲ್ಲಿ ನೀರಾವರಿ ಯೋಜನೆ ತಡೆ ಹಿಡಿಯಿರಿ ಎಂದು ಬಿಜೆಪಿ ಶಾಸಕರೇ ಬರೆದ ಪತ್ರ ಪ್ರತಿ ನನ್ನ ಬಳಿ ಇದೆ ಎಂದು ಟಾಂಗ್ ನೀಡಿದರು.
ಇದನ್ನು ಓದಿ: ಪಶು ಸಂಗೋಪನಾ ಸಚಿವರ ತವರಲ್ಲೇ ಪಶುಗಳಿಗೆ ಔಷಧಿ ಕೊರತೆ, ಇಲಾಖೆಯ 156 ಹುದ್ದೆ ಖಾಲಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ