ಹಾಸನ; ಮಾಜಿ ಪ್ರಧಾನಿ ಹೆಚ್,ಡಿ,ದೇವೇಗೌಡರು ಇಂದು ಕುಟುಂಬ ಸಮೇತ ಹಾಸನಾಂಬ ದೇವಿಯ ದರ್ಶನ ಪಡೆದರು. ಇಂದು ಶುಕ್ರವಾರವಾದ ಹಿನ್ನೆಲೆ ಶಕ್ತಿ ದೇವತೆ ಹಾಸನಾಂಬ ದೇವಿಯ ದರ್ಶನ ಪಡೆದರು. ಪತ್ನಿ ಚೆನ್ನಮ್ಮ, ಪುತ್ರಿಯರು, ಮೊಮ್ಮಕ್ಕಳೊಂದಿಗೆ ಆಗಮಿಸಿದ ದೇವೇಗೌಡರು ಪ್ರತೀವರ್ಷದಂತೆ ಈ ಬಾರಿಯೂ ದೇವಿಯ ದರ್ಶನ ಪಡೆದರು.
ದೇವಿಯ ದರ್ಶನದ ಬಳಿಕ ಮಾತನಾಡಿದ ದೇವೇಗೌಡ ಅವರು, ಪ್ರತಿ ವರ್ಷ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡುತ್ತೇವೆ. ಕುಟುಂಬ ಸಮೇತರಾಗಿ ಬಂದು ಪ್ರಾರ್ಥನೆ ಸಲ್ಲಿಸುತ್ತೇವೆ. ಈ ಬಾರಿ ಕೊರೋನಾ ಇರುವುದರಿಂದ ಸಂದರ್ಭ ಕ್ಲಿಷ್ಟಕರವಾಗಿದೆ. ಜಿಲ್ಲಾಡಳಿತ ಕೊರೋನಾದ ನಡುವೆಯೂ ಈ ಆಚರಣೆ ಮುಂದುವರಿಸಿದೆ. ಕಳೆದ ವರ್ಷ ಲಕ್ಷಾಂತರ ಜನ ದೇವಿಯ ದರ್ಶನಕ್ಕೆ ಬಂದಿದ್ದರು. ದೀಪಾವಳಿಯ ದಿನದಂದು ದೇವಾಲಯದಲ್ಲಿ ದೀಪ ಹಚ್ಚಿ ಬಾಗಿಲು ಹಾಕಲಾಗುತ್ತದೆ. ಒಂದು ವರ್ಷವಾದರೂ ದೇವಿಯ ದೀಪ ಉರಿಯುತ್ತಿರುತ್ತದೆ ಎಂಬ ಪ್ರತೀತಿ ಇದೆ. ಜನಸಾಮಾನ್ಯರೂ ದೇವಿಯ ಬಗ್ಗೆ ನಂಬಿಕೆ, ವಿಶ್ವಾಸ ಇಟ್ಟುಕೊಂಡಿದ್ದಾರೆ, ಜಿಲ್ಲಾಡಳಿತ ಕೂಡ ಅಚ್ಚುಕಟ್ಟಾಗಿ ಕಾರ್ಯಕ್ರಮ ರೂಪಿಸಿದೆ. ಹಾಸನ ಜಿಲ್ಲಾಡಳಿತಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲರಿಗೂ ಹಾಸನಾಂಬೆ ಆರೋಗ್ಯ, ಆಯುಷ್ಯ ನೀಡಲಿ ಎಂದು ಬೇಡಿದ್ದೇನೆ ಎಂದರು.
ಇದನ್ನು ಓದಿ: ಆನ್ಲೈನ್ ಮೂಲಕ ಶಬರಿಮಲೆ ಅಯ್ಯಪ್ಪಸ್ವಾಮಿ ಪ್ರಸಾದ ಬುಕ್ಕಿಂಗ್; 3 ದಿನದಲ್ಲಿ ಡಿಲಿವರಿ!
ಕೊನೆಗಾಲದಲ್ಲಿ ರಾಜ್ಯಸಭಾ ಸದಸ್ಯನಾಗಿದ್ದೇನೆ. ನನ್ನ ಕೈಲಾದಷ್ಟು ಜನರ ಕೆಲಸ ಮಾಡುತ್ತೇನೆ. ಕಾರ್ತಿಕ ಮಾಸದಲ್ಲಿ ನನ್ನ ಹುಟ್ಟೂರಿನಲ್ಲಿ ಪೂಜೆ ಸಲ್ಲಿಸುವ ಪದ್ದತಿ ರೂಡಿಸಿಕೊಂಡಿದ್ದೇನೆ ಎಂದು ದೇವೇಗೌಡರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ