ವಿಜಯಪುರ(ಅ. 22): ಎಲ್ಲರೂ ಭೀಮಾ ನದಿ ಪ್ರವಾಹದಿಂದಾಗುತ್ತಿರುವ ಸಮಸ್ಯೆ ಕಡೆಗೆ ಗಮನ ಹರಿಸಿದ್ದು ಒಂದೆಡೆಯಾದರೆ, ನಿಮ್ಮ ನೆಚ್ಚಿನ ನ್ಯೂಸ್ 18 ಕನ್ನಡ ಈ ಪ್ರವಾಹದ ಮೂಲ ಕಾರಣಗಳ ಬಗ್ಗೆಯೂ ಸುದ್ದಿಯನ್ನು ಹೆಕ್ಕಿ ಪ್ರಸಾರ ಮಾಡಿತ್ತು. ಈಗ ಅದು ಪರಿಣಾಮ ಬೀರಿದೆ.
ಭೀಮಾ ನದಿ ಪ್ರವಾಹದಿಂದಾಗಿ ವಿಜಯಪುರ, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಉಂಟಾದ ಆಸ್ತಿಪಾಸ್ತಿ, ಜನ, ಜಾನುವಾರುಗಳ ಹಾನಿಯ ಬಗ್ಗೆ ನ್ಯೂಸ್ 18 ಕನ್ನಡ ತಮಗೆಲ್ಲ ಕ್ಷಣಕ್ಷಣದ ಮಾಹಿತಿಯನ್ನು ನೀಡಿತ್ತು. ಈ ಪ್ರವಾಹಕ್ಕೆ ಮಹಾರಾಷ್ಟ್ರದಲ್ಲಿ ಸುರಿದು ಧಾರಾಕಾರ ಮಳೆ ಒಂದು ಕಾರಣವಾದರೆ, ಮತ್ತೆ ಎರಡು ಪ್ರಮುಖ ಕಾರಣಗಳ ಬಗ್ಗೆ ನಮ್ಮ ವಿಜಯಪುರ ಪ್ರತಿನಿಧಿ ಮಹೇಶ ವಿ. ಶಟಗಾರ ಸೋಮವಾರ ವಿವರವಾದ ವರದಿ ಮಾಡಿದ್ದರು. ಅಲ್ಲದೇ, ಈ ಕುರಿತು ಅ. 20 ರಂದು ನ್ಯೂಸ್ 18 ಕನ್ನಡ ವೆಬ್ನಲ್ಲಿಯೂ ಸುದ್ದಿ ಪ್ರಕಟವಾಗಿತ್ತು. ಆ ವರದಿಯ ಇಂಪ್ಯಾಕ್ಟ್ ಈಗ ಆಗಿದೆ. (ಈ ವರದಿಗೆ ಕೆಳಕಾಣಿಸಿರುವ ಲಿಂಕ್ ಕ್ಲಿಕ್ ಮಾಡಿ).
ಬಸವನಾಡಿನಲ್ಲಿ ಭೀಮಾ ಪ್ರವಾಹ ಉಲ್ಬಣಿಸಲು ಕಾರಣವೇನು ಗೊತ್ತಾ? : ಸರಕಾರ ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ಕಷ್ಟ
ಸೊನ್ನ ಬ್ಯಾರೇಜ್ನಲ್ಲಿ ನೀರು ನಿರ್ವಹಣೆಯಲ್ಲಿ ಅಲ್ಲಿನ ಅಧಿಕಾರಿಗಳು ವಿಫಲರಾಗಿದ್ದರು. ಹಲವು ಕ್ರಸ್ಟ್ ಗೇಟ್ಗಳು ನಿರ್ವಹಣೆಯಿಲ್ಲದೇ ಸ್ಟ್ರಕ್ ಆಗಿದ್ದ ಕಾರಣ ಹಿನ್ನೀರು ವಿಜಯಪುರ ಜಿಲ್ಲೆಯ ಚಡಚಣ, ಇಂಡಿ ಮತ್ತು ಸಿಂದಗಿ ತಾಲೂಕಿನ ಗ್ರಾಮಗಳಿಗೆ ನುಗ್ಗಿ ಸರಾಗವಾಗಿ ಹೋಗಬೇಕಿದ್ದ ನೀರಿನ ವೇಗಕ್ಕೆ ತಡೆ ಹಾಕಿ ಅಪಾರ ಆಸ್ತಿಪಾಸ್ತಿ, ಬೆಳೆ ಹಾನಿಗೆ ಕಾರಣವಾಗಿತ್ತು. ಈ ಕುರಿತು ನ್ಯೂಸ್ 18 ಕನ್ನಡ ಸರಕಾರದ ಗಮನ ಸೆಳೆದಿತ್ತು.
ಅಷ್ಟೇ ಅಲ್ಲ, ಕಳೆದ ವರ್ಷ ಕೃಷ್ಣಾದಲ್ಲಿ ಉಂಟಾದ ಪ್ರವಾಹದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿದ್ದ ಕರ್ನಾಟಕ ಸರಕಾರ ಕರ್ನಾಟಕ ಮತ್ತು ಮಹಾರಾಷ್ಟ್ರಗಳ ಮಧ್ಯೆ ಪ್ರವಾಹ ನಿಯಂತ್ರಿಸಲು ಅಧಿಕಾರಿಗಳ ಸಮಿತಿಯೊಂದನ್ನು ರಚಿಸಿದ್ದರಿಂದ ಈ ಬಾರಿ ಕೃಷ್ಣಾ ನದಿ ಪ್ರವಾಹವನ್ನು ಸಮರ್ಥವಾಗಿ ನಿಭಾಯಿಸಲಾಗಿತ್ತು. ಇದೇ ಮಾದರಿ ಸಮಿತಿಯನ್ನು ಭೀಮಾ ನದಿ ಪ್ರವಾಹ ನಿಯಂತ್ರಣದಲ್ಲಿಯೂ ರಚಿಸಬೇಕು ಎಂದು ನ್ಯೂಸ್ 18 ಕನ್ನಡ ಹಕ್ಕೊತ್ತಾಯ ಮಾಡಿತ್ತು. ಈಗ ಈ ಎರಡೂ ವಿಚಾರಗಳಿಗೆ ರಾಜ್ಯ ಸರಕಾರ ಸ್ಪಂದಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಸೊನ್ನ ಬ್ಯಾರೇಜ್ ನೀರು ನಿರ್ವಹಣೆಯಲ್ಲಿ ವೈಫಲ್ಯದ ಕುರಿತು ತನಿಖೆ ನಡೆಸಲಾಗುವುದು ಮತ್ತು ಭೀಮಾ ಪ್ರವಾಹ ನಿಯಂತ್ರಿಸಲು ಕೃಷ್ಣಾ ಮಾದರಿಯಲ್ಲಿ ಸಮಿತಿ ರಚನೆ ಮಾಡಲಾಗುವುದು ಎಂದು ಹೇಳುವ ಮೂಲಕ ನ್ಯೂಸ್ 18 ಕನ್ನಡದ ವರದಿಗೆ ಸರಕಾರ ಸ್ಪಂದಿಸಿರುವುದನ್ನು ತೋರಿಸಿದ್ದಾರೆ.
ಇದು ನ್ಯೂಸ್ 18 ಕನ್ನಡ ಹೇಗೆ ಜನ, ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಪರಿಹಾರ ಒದಗಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಇದು ನ್ಯೂಸ್ 18 ಕನ್ನಡದ ಇಂಫ್ಯಾಕ್ಟ್.
ವರದಿ: ಮಹೇಶ ವಿ. ಶಟಗಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ