ರಾಯಚೂರು; ಓದಿ ಸರ್ಕಾರಿ ನೌಕರಿ ಪಡೆಯಬೇಕು ಎಂಬ ಆಸೆ ಇಟ್ಟುಕೊಂಡವರಿಗೆ ಸರಕಾರ ಬಿಗ್ ಶಾಕ್ ನೀಡಿದೆ. ಈ ವರ್ಷ ನೇರ, ವೃಂದ ಹಾಗೂ ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿ ತಡೆ ಹಿಡಿದಿದೆ. ಇದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಇನ್ನಷ್ಟು ಸರಕಾರಿ ಕಚೇರಿಗಳು ಖಾಲಿಯಾಗಲಿವೆ.
ಕೊರೋನಾ ಸಂದರ್ಭದಲ್ಲಿ ಸರಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಕೊರತೆ ಇದೆ. ಈ ಮಧ್ಯೆ ರಾಜ್ಯ ಸರಕಾರ ನಿನ್ನೆ ಕಲ್ಯಾಣ ಕರ್ನಾಟಕ ಸೇರಿದಂತೆ ವೃಂದ, ಬ್ಯಾಕ್ ಲಾಗ್ ಹಾಗೂ ನೇರ ನೇಮಕಾತಿಗಳನ್ನು ತಡೆಹಿಡಿಯುವಂತೆ ರಾಜ್ಯ ಸರಕಾರದ ಅಪರಮುಖ್ಯಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿದ್ದಾರೆ. ಕೊರೋನಾ ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸಲು ಆರ್ಥಿಕ ಸ್ಥಿತಿಗತಿ ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ಸಂಪನ್ಮೂಲ ಕ್ರೋಢಿಕರಣದ ಉದ್ದೇಶದಿಂದ ನೇಮಕಾತಿಗಳನ್ನು ತಡೆ ಹಿಡಿಯಲು ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಈಗ 2 ಲಕ್ಷಕ್ಕೂ ಅಧಿಕ ಸರಕಾರಿ ಹುದ್ದೆಗಳು ಖಾಲಿ ಇವೆ. ಅದರಲ್ಲಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ 40 ಸಾವಿರದಷ್ಟು ಹುದ್ದೆಗಳು ಖಾಲಿ ಇವೆ. ಈಗಾಗಲೇ ಶಿಕ್ಷಕರ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಹುದ್ದೆಗಳು ಈ ವರ್ಷದಲ್ಲಿ ನೇಮಕಾತಿ ನಡೆಸಿ ನೇಮಕ ಮಾಡಿಕೊಳ್ಳುತ್ತಾರೆ. ತಾವು ಸರಕಾರಿ ನೌಕರರಾಗುತ್ತೇವೆ ಎಂದುಕೊಂಡಿದ್ದ ಕಲ್ಯಾಣ ಕರ್ನಾಟಕ ಭಾಗದ ನಿರುದ್ಯೋಗ ಯುವಕರಿಗೆ ಈಗ ನಿರಾಸೆಯಾಗಿದೆ. ಸರಕಾರ ಈಗ ಹೊರಡಿಸಿರುವ ಸುತ್ತೋಲೆ ಅವೈಜ್ಞಾನಿಕವಾಗಿದೆ. ಸಾಮಾನ್ಯವಾಗಿ ಈ ವರ್ಷದಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸಿದರೆ, ಆ ಪ್ರಕ್ರಿಯೆ ಪೂರ್ಣಗೊಳ್ಳಲು ಒಂದು ಅಥವಾ ಎರಡು ವರ್ಷ ಬೇಕಾಗುತ್ತದೆ. ಆದರೆ ಈ ನೇಮಕಾತಿ ತಡೆದರೆ ಮತ್ತೆ 2-3 ಕಾಯಬೇಕಾಗುತ್ತಿದೆ. ಇದರಿಂದ ಹಲವು ನಿರುದ್ಯೋಗಿಗಳ ವಯೋಮಿತಿ ಮೀರಿ ಹೋಗುತ್ತದೆ. ಸರಕಾರ ಈ ಆದೇಶ ಹೊರಡಿಸಬಾರದಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
![]()
ಸರ್ಕಾರ ಹೊರಡಿಸಿರುವ ಸುತ್ತೋಲೆ.
ಇನ್ನೊಂದು ಕಡೆ ಸರಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಕೊವೀಡ್ ನಿಯಂತ್ರಣ ಸಂದರ್ಭದಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಸಾಕಷ್ಟು ತೊಂದರೆಗಳಾಗುತ್ತಿವೆ. ಈ ಸಂದರ್ಭದಲ್ಲಿ ಸರಕಾರಿ ಕಚೇರಿಗಳಲ್ಲಿ ಸಿಬ್ಬಂದಿಗಳಿದ್ದರೆ ಕೆಲಸಗಳಾಗುತ್ತವೆ. ಆದರೆ ಸರಕಾರವು ಕುಂಟು ನೆಪ ತೆಗೆದು ನೇಮಕಾತಿ ತಡೆ ಹಿಡಿದಿದೆ. ನೇಮಕಾತಿ ಪ್ರಕ್ರಿಯೆಗಳನ್ನು ಮುಂದುವರಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.
ಇದನ್ನು ಓದಿ: ಲಾಕ್ಡೌನ್ ಪರಿಣಾಮ ವಿದೇಶಗಳಿಂದ ಆಮದು ಸ್ಥಗಿತ; ದೇಶೀಯ ಅಡಿಕೆಗೆ ಭಾರೀ ಬೇಡಿಕೆ!
ಸರಕಾರಿ ಯಂತ್ರ ಸುವ್ಯವಸ್ಥಿತವಾಗಿ ನಡೆಯಬೇಕಾದರೆ ಅಗತ್ಯ ಸಿಬ್ಬಂದಿಗಳು ಅವಶ್ಯ. ಆದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೇ.30 ಕ್ಕಿಂತ ಅಧಿಕ ಹುದ್ದೆಗಳು ಖಾಲಿ ಇವೆ. ಸರಕಾರ ನೇಮಕಾತಿ ಪ್ರಕ್ರಿಯೆ ತಡೆ ಹಿಡಯಬಾರದಿತ್ತು ಎಂಬ ಅಭಿಪ್ರಾಯ ಈ ಭಾಗದವರಿಂದ ವ್ಯಕ್ತವಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ