ಚಿಕ್ಕೋಡಿ(ಜು.13): ಕಳೆದ ಮೂರು ವರ್ಷಗಳ ಹಿಂದೆ ಚಿಕ್ಕೋಡಿ ಉಪವಿಭಾಗದ ವ್ಯಾಪ್ತಿಗೆ ವಿಭಾಗೀಯ ಕಚೇರಿಯೊಂದು ಮಂಜೂರಾಗಿದ್ದರೂ, ಇಲ್ಲಿಯವರೆಗೆ ಬೀಗ ಹಾಕಿಕೊಂಡು ಯಾವುದೇ ಅಧಿಕಾರಿಗಳಿಲ್ಲದೇ ಬೀಕೋ ಎನ್ನುತ್ತಿದೆ. ಚಿಕ್ಕೋಡಿ, ಅಥಣಿ, ರಾಯಬಾಗ, ಹಾರೂಗೇರಿ ವ್ಯಾಪ್ತಿಗೆ ಬರುವ ವಿಭಾಗೀಯ ಕಾರ್ಯನಿರ್ವಾಹಕ ಇಂಜಿನಿಯರ್ ಕಾಡಾ, ಮಲಪ್ರಭಾ ಮತ್ತು ಘಟಪ್ರಭಾ ಯೋಜನೆಗಳ ವಿಭಾಗ ನಂ- 3 ಕಚೇರಿ ಇಂದಿಗೂ ಇಲ್ಲಿನ ಪಿಡಬ್ಲುಡಿ ವಸತಿಗೃಹದಲ್ಲಿ ಕೇವಲ ಕಾಟಾಚಾರಕ್ಕೆ ಎಂಬಂತೆ ಪ್ರಾರಂಭಿಸಲಾಗಿದೆ.
ಹೌದು, ಬೆಳಗಾವಿ ರಾಜ್ಯದಲ್ಲೇ ದೊಡ್ಡ ಜಿಲ್ಲೆ. ಸುಗಮ ಆಡಳಿತಕ್ಕಾಗಿ ಬಹುತೇಕ ಎಲ್ಲಾ ವಿಭಾಗದ ಕಛೇರಿಗಳು ಬೆಳಗಾವಿ ಹಾಗೆಯೇ ಚಿಕ್ಕೋಡಿಯಲ್ಲಿ ವಿಭಾಗಿಯ ಜಿಲ್ಲಾ ಮಟ್ಟದ ಕಛೇರಿಗಳು ಇದ್ದು ಕಾರ್ಯನಿರ್ವಾಹಿಸುತ್ತಿವೆ. ಅದರಂತೆ ವಿಭಾಗಿಯ ಕಾಡಾ ಕಛೇರಿ ಕೂಡ ಮಂಜೂರಾತಿ ಹೊಂದಿ ಮೂರು ವರ್ಷ ಕಳೆದರೂ ಸರ್ಕಾರ ಮಾತ್ರ ಇದುವರೆಗೂ ಒಂದೇ ಒಂದು ಸಿಬ್ಬಂದಿಯಾಗಲಿ ಅಥವಾ ಓರ್ವ ಇಂಜಿನಿಯರ್ ಆಗಲಿ ನೇಮಕ ಮಾಡಿಲ್ಲ. ಬದಲಾಗಿ ಹೆಸರಿಗೆ ಮಾತ್ರ ಅನ್ನುವ ಹಾಗೇ ಕಛೇರಿ ತೆಗೆದು ಬೋರ್ಡ್ ಹಾಕಿ ಕೈ ತೊಳೆದುಕೊಂಡಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಗುರುತಿನ ಚೀಟಿ ನೀಡುವ ಯುಐಡಿ ಯೋಜನೆ ವಿಳಂಬ
ಇನ್ನು, ಈ ಕಚೇರಿಯ ಪ್ರಭಾರಿ ಉಸ್ತುವಾರಿ ವಹಿಸಿಕೊಂಡಿರುವ ಚಿಕ್ಕೋಡಿಯ ಕರ್ನಾಟಕ ನೀರಾವರಿ ನಿಗಮ ನಿಯಮಿತ ಜಿಎಲ್ಬಿಸಿಸಿ ನಂ 4 ರ ವಿಭಾಗದ ಕಾರ್ಯಕಾರಿ ನಿರ್ವಾಹಕ ಇಂಜಿನಿಯರ್ ಸಿ.ಡಿ.ಪಾಟೀಲ ಒಂದು ನಾಮಫಲಕ ಹಾಕಿ ಕೈತೊಳೆದುಕೊಂಡಂತಿದ್ದಾರೆ. ಕೆಲಸ ಮಾಡದಿದ್ದರೂ ಹೆಸರಿಗೆ ಮಾತ್ರ ಸರ್ಕಾರ ಕಚೇರಿ ನೀಡಿದೆ. ಸರ್ಕಾರ ಅನುದಾನ ನೀಡಿಲ್ಲ ಹಾಗೂ ಅಧಿಕಾರಿಗಳು, ಸಿಬ್ಬಂದಿಗಳನ್ನು ಸಹ ನೇಮಕ ಮಾಡಿಲ್ಲ. ಕಸಗುಡಿಸುವ ಓರ್ವನನ್ನು ನಾನೇ ನೇಮಿಸಿಕೊಂಡಿದ್ದೇನೆ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಆದರೆ ಕಚೇರಿ ಕೆಲಸಕ್ಕೆ ಬೇಕಾದ ಸಿಬ್ಬಂದಿಗಳ ಮಾಹಿತಿ ಅಥವಾ ಅದರ ಅವಶ್ಯಕತೆಯ ಬಗ್ಗೆ ಸರ್ಕಾರದ ಗಮನ ಹರಿಸದೇ ಇರುವುದು ದುರದೃಷ್ಠಕರ ಸಂಗತಿಯಾಗಿದೆ.
ಹೆಸರಿಗೆ ಮಾತ್ರ ಚಿಕ್ಕೋಡಿಗೊಂದು ವಿಭಾಗೀಯ ಕಚೇರಿ ನೀಡಲಾಗಿದೆ ಎಂದು ಸರ್ಕಾರ ಸುಮ್ಮನೇ ಕುಳಿತಿದೆಯೋ ಅಥವಾ ಯಾವುದೇ ಅಧಿಕಾರಿಗಳು ಇಲ್ಲಿ ಬರುತಿಲ್ಲವೋ ಎಂಬುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ