ಹಾಸನ; ಲೂಟಿ ಮಾಡುವುದಕ್ಕಾಗಿ ಹಾಸನದ ಭೂ ಸ್ವಾಧೀನಾಧಿಕಾರಿ ಇಲಾಖೆಗೆ ಒಬ್ಬ ಭ್ರಷ್ಟ ಅಧಿಕಾರಿಯನ್ನು ನೇಮಿಸಲಾಗಿದೆ. ಆ ಅಧಿಕಾರಿ ದಾಖಲೆಗಳನ್ನು ತಿದ್ದುವುದರಲ್ಲಿ ಪರಿಣಿತನಾಗಿದ್ದಾನೆ. ಮತ್ತು ದಾಖಲೆ ನಾಶ ಮಾಡುವುದರಲ್ಲೂ ನಿಪುಣನಾಗಿದ್ದಾನೆ ಎಂದು ರೇವಣ್ಣ ಗಂಭೀರ ಆರೋಪ ಮಾಡಿದರು.
ನಗರದ ಸಂಸದರ ನಿವಾಸದಲ್ಲಿ ಮಾತನಾಡಿದ ರೇವಣ್ಣ ಅವರು, ಭೂ ಸ್ವಾಧೀನಾಧಿಕಾರಿಯ ಕಚೇರಿ ಕಡತ ತಿದ್ದಲು ಆತನನ್ನು ನೇಮಿಸಲಾದೆ. ಈ ಕಚೇರಿಯ ಎಲ್ಲಾ ಕಡತವನ್ನು ಡಿಸಿ ಕಚೇರಿಯಲ್ಲಿ ಇಡಬೇಕು. ಈ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೇನೆ. ಹಿಂದೆಯೂ ಸಹ ಆ ಅಧಿಕಾರಿ ಹಲವು ಭ್ರಷ್ಟ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಇಂತಹ ಕಳ್ಳ ಲೂಟಿಕೋರ ಅಧಿಕಾರಿಯನ್ನು ಈಗ ಇಲ್ಲಿಗೆ ನೇಮಿಸಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಹಾಗೂ ವಿಧಾನಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಿದ್ದೇನೆ ಎಂದು ತಿಳಿಸಿದರು.
ಇದನ್ನು ಓದಿ: Karnataka Bandh: ಕನ್ನಡಕ್ಕೆ ಎಲ್ಲಾ ಆದ್ಯತೆ ಕೊಡುತ್ತೇನೆ, ಬಂದ್ ಮಾಡಬೇಡಿ: ಸಿಎಂ ಮನವಿ
ದೇಶದ ಬೆನ್ನೆಲುಬಾದ ಅನ್ನದಾತ ರೈತರನ್ನು ಹೇಡಿಗಳು ಎಂದು ಜರಿದಿರುವ ಕೃಷಿ ಮಂತ್ರಿ ಬಿ.ಸಿ. ಪಾಟೀಲ್ ಅವರು ರೈತರ ಕ್ಷಮೆ ಕೇಳಬೇಕು. ಅವರು ಓರ್ವ ಮಂತ್ರಿಯಾಗಿ ಆ ರೀತಿಯಾಗಿ ಹೇಳಿಕೆ ನೀಡುವುದು ಸರಿಯಲ್ಲ. ಅಧಿಕಾರದ ದರ್ಪದಿಂದ ಇಂಥ ಹೇಳಿಕೆಯನ್ನು ನೀಡಿರುವ ಅವರು ಕೂಡಲೇ ರೈತರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ದೇಶದ ಬೆನ್ನೆಲುಬಾದ ಅನ್ನದಾತರಾದ ರೈತರನ್ನು ಈ ರೀತಿ ಜರಿಯುವುದು ಸರಿಯಲ್ಲ. ಆತ ಮಂತ್ರಿಯಾಗಿರುವುದು ಒಂದು ದುರಂತ. ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಬಲ ಬೆಲೆ ಘೋಷಣೆ ಮಾಡಿ
ಮೆಕ್ಕೆಜೋಳಕ್ಕೆ ಕೂಡಲೇ ಸರ್ಕಾರ 1500 ರೂ. ಬೆಂಬಲ ಬೆಲೆ ಘೋಷಣೆ ಮಾಡಬೇಕು. ಈಗಾಗಲೇ ಮಧ್ಯವರ್ತಿಗಳು 900 ರಿಂದ ಸಾವಿರ ರೂ. ಗೆ ರೈತರಿಂದ ಖರೀದಿಸಿ ಕೆಎಂಎಫ್ ಹಾಗೂ ಇತರೆಡೆಗೆ ಹೆಚ್ಚಿನ ಬೆಲೆಗೆ ಜೋಳವನ್ನು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಬೆವರು ಸುರಿಸಿ ಬೆಳೆದ ರೈತರಿಗೆ ಅರ್ಹ ಬೆಲೆ ಸಿಗುತ್ತಿಲ್ಲ ಎಂದು ಅವರು ಹೇಳಿದರು.
ವರದಿ - ಡಿಎಂಜಿಹಳ್ಳಿಅಶೋಕ್ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ