ಗದಗ: ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಅಂತಾರೆ. ಅದರಂತಾಗಿದೆ ಗದಗ ಎಪಿಎಂಸಿ ಕಚೇರಿ ಕಥೆ. ಹೌದು, ಗದಗ ನಗರದ ಎಪಿಎಂಸಿ ಕಚೇರಿಯನ್ನು ಇಂದು ಜಪ್ತಿ ಮಾಡಲಾಗಿದೆ. ಕಾರಣ ಆರ್.ಆರ್. ಹೇಮಂತನವರ ಎಂಬುವರು 4 ಎಕರೆ 35 ಗುಂಟೆ ಜಾಗವನ್ನು 40 ವರ್ಷಗಳ ಹಿಂದೆ ಎಪಿಎಂಸಿಗಾಗಿ ಸ್ವಾಧೀನಪಡಿಸಿಕೊಂಡಿತ್ತು. ಆಗ ಸುಮಾರು 76 ಲಕ್ಷ ರೂಪಾಯಿ ಪರಿಹಾರ ಹಣ ಬಿಡುಗಡೆ ಮಾಡಿದ ಎಪಿಎಂಸಿ, ಇನ್ನುಳಿದ 16.50 ಲಕ್ಷ ರೂಪಾಯಿ ಪಾವತಿಸಲು ವಿಳಂಬ ಮಾಡಿದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ, ಅಧಿಕಾರಿಗಳು ಸ್ಪಂದಿಸಲಿಲ್ಲ. ಹಲವು ಬಾರಿ ಎಪಿಎಂಸಿ ಅಧಿಕಾರಿಗಳಿಗೆ ಕೋರ್ಟ್ ನೋಟಿಸ್ನ ಬಿಸಿ ಮುಟ್ಟಿಸಿದರು. ಅದಕ್ಕೂ ಡೋಂಟ್ಕೇರ್ ಅನ್ನುವ ಅಧಿಕಾರಿಗಳ ಮೂಗುದಾರಕ್ಕೆ ಕೈ ಹಾಕಿದ್ದಾರೆ. ಈ ಹಿಂದೆ ಭೂ ಸ್ವಾಧೀನ ಅಧಿಕಾರಿ, ಎಪಿಎಂಸಿ ಉಪವಿಭಾಗಾಧಿಕಾರಿಯನ್ನು ಹೊಣೆಯಾಗಿಸಿ, ಅವರ ಕಚೇರಿಯನ್ನು ಜಪ್ತಿಗೆ ಮುಂದಾಯಿತು. ಗದಗ ಜಿಲ್ಲಾ ಪ್ರಧಾನ ದಿವಾನಿ ನ್ಯಾಯಾಲಯ ಆದೇಶ ಹೊರಡಿಸಿದೆ. ಹೀಗಾಗಿ ನ್ಯಾಯಾಲಯದ ಆದೇಶದ ಮೇರೆಗೆ ಜಪ್ತಿ ವಾರೆಂಟ್ ಆಧರಿಸಿ, ಕಚೇರಿಯ 1 ಸ್ಕಾರ್ಪಿಯೋ ಕಾರು ಮತ್ತು ನಾಲ್ಕು ಕಂಪ್ಯೂಟರ್, ಕುರ್ಚಿಗಳನ್ನು ವಶಕ್ಕೆ ಪಡೆದಿದೆ.
ಸುಮಾರು 40 ವರ್ಷಗಳ ಹಳೆಯ ಪ್ರಕರಣ...!
ಇನ್ನು ಈ ಪ್ರಕರಣ ಇಂದು ನಿನ್ನೆಯದಲ್ಲ. ಸುಮಾರು 40 ವರ್ಷಗಳ ಹಳೆಯ ಪ್ರಕರಣ. ಗದಗಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರಚನೆಗಾಗಿ 1977 ರಲ್ಲಿ ಭೂ ಸ್ವಾಧೀನ ಅಧಿಸೂಚನೆ ಹೊರಡಿಸಿತ್ತು. 1982 ರಲ್ಲಿ ಆರ್.ಆರ್.ಹೇಮಂತನವರ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಎಪಿಎಂಸಿಯಿಂದ ಬರಬೇಕಿದ್ದ ಬಾಕಿ ಪರಿಹಾರ ಹಣಕ್ಕಾಗಿ ಸುಪ್ರೀಂ ಕೋರ್ಟ್ವರೆಗೆ ಹೋಗಿತ್ತು. ಪ್ರಕರಣ ಪುನಃ ಜಿಲ್ಲಾ ಪ್ರಧಾನ ಹಿರಿಯ ದಿವಾಣಿ ನ್ಯಾಯಾಲಯಕ್ಕೆ ಜ್ಞಾಪನಾ ಆದೇಶ ಆಗಿದ್ದರಿಂದ ಸದರಿ ಪ್ರಕರಣದಲ್ಲಿ ರೈತರಿಗೆ ಪ್ರತಿ ಚದುರ ಅಡಿಗೆ 8.50 ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿತ್ತು. ಅಧಿಕಾರಿಗಳು ಅಂದಿನಿಂದ ಇಂದಿನವರೆಗೂ ವಿನಾಕಾರಣ ವಿಳಂಬ ಮಾಡುತ್ತಲೇ ಬಂದಿದ್ದರು. ಕೋರ್ಟ್ ಆದೇಶದಂತೆ ಕಚೇರಿ ಜಪ್ತಿಮಾಡಿ ಮುಖಭಂಗ ಮಾಡಿದೆ. ಇತ್ತ ಜಪ್ತಿ ಕಾರ್ಯ ನಡೆಯುತ್ತಿದ್ದಂತೆ ಎಪಿಎಂಸಿ ಅಧಿಕಾರಿಗಳು ಪಲಾಯಣಗೊಂಡರು.
ಇದನ್ನು ಓದಿ: ರಾಜ್ಯದಲ್ಲಿ ಟ್ರೈಟನ್ ವಿದ್ಯುತ್ ವಾಹನ ಸಂಸ್ಥೆ ಹೂಡಿಕೆಗೆ ಬೆಂಬಲ: ಬಿ.ಎಸ್.ಯಡಿಯೂರಪ್ಪ
ರೈತರನ್ನು ಕಡೆಗಣಿಸುವ ಅಧಿಕಾರಿಗಳಿಗೆ ಇದು ತಕ್ಕಪಾಠವಾಗಿದೆ. ಮಾಡಿದ್ದುನ್ನೋ ಮಾರಾಯ ಅನ್ನುವಂತೆ, ಎಪಿಎಂಸಿ ಅಧಿಕಾರಿ ಓಡಾಡುವ ಸ್ಕಾರ್ಪಿಯೋ ವಾಹನ, ಕಚೇರಿಯಲ್ಲಿ ಇದ್ದ ಕಂಪ್ಯೂಟರ್, ಕುರ್ಚಿ ಜಪ್ತಿ ಮಾಡಿದ್ದರಿಂದ ಎಪಿಎಂಸಿ ನೌಕರರು ಪರದಾಡುವಂತಾಯಿತು. ರೈತರಿಗೆ ನೀಡಬೇಕಾದ ಪರಿಹಾರ ನೀಡುವಲ್ಲಿ ನಾಲ್ಕು ದಶಕಗಳ ಕಾಲ ವಿಳಂಬ ಮಾಡಿರುವುದು ವಿಪರ್ಯಾಸ ಸರಿ.
ವರದಿ: ಸಂತೋಷ ಕೊಣ್ಣೂರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ