ಶಾಂಭವಿ ನದಿಯಲ್ಲಿ ಮುಳುಗಿ ನಾಲ್ವರ ಸಾವು: ಮದುವೆಗೆ ಬಂದವರು ಮಸಣ ಸೇರಿದರು

ನಾಲ್ವರ ಶವಗಳನ್ನು ಹೊರ ತೆಗೆದ ಸ್ಥಳೀಯ ಈಜುಗಾರರು

ನಾಲ್ವರ ಶವಗಳನ್ನು ಹೊರ ತೆಗೆದ ಸ್ಥಳೀಯ ಈಜುಗಾರರು

ಈ ದುರ್ಘಟನೆಯಿಂದಾಗಿ ಇಡೀ ಮದುವೆ ಮನೆಯಲ್ಲಿ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ. ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ

  • Share this:

ಮಂಗಳೂರು(ನವೆಂಬರ್​. 24): ನದಿಯಲ್ಲಿ ಈಜಲು ಹೋಗಿ ನಾಲ್ವರು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಪಾಲಾಡ್ಕ ಗ್ರಾಮದ ಶಾಂಭವಿ ನದಿಯ ಪಟ್ಲಗುಂಡಿ ಎಂಬ ಪ್ರದೇಶದಲ್ಲಿ ನಡೆದಿದೆ. ಮೃತರನ್ನು ಮೂಡುಶೆಡ್ಡೆ ನಿವಾಸಿ 18 ವರ್ಷದ ನಿಖಿಲ್, 20 ವರ್ಷದ ಹರ್ಷಿತಾ, ವೇಣೂರು ನಿವಾಸಿ 19 ವರ್ಷದ ಸುಭಾಷ್ ಮತ್ತು ಬಜ್ಪೆ ನಿವಾಸಿ 30 ವರ್ಷದ ರವಿ ಎಂದು ಗುರುತಿಸಲಾಗಿದೆ. ಗ್ರಾಮದ ಕಡಂದಲೆ ಶ್ರೀಧರ ಆಚಾರ್ಯ ಎಂಬುವವರ ಮನೆಯಲ್ಲಿ ಮದುವೆಯ ಸಂಭ್ರಮವಿತ್ತು. ನಿನ್ನಯೇ ಎಲ್ಲಾ ಸಂಬಂಧಿಕರು ಮನೆಗೆ ಆಗಮಿಸಿದ್ದರು. ಶಾಂಭವಿ ನದಿಯ ಪಟ್ಲಗುಂಡಿ ಬಳಿ ನಿನ್ನೆ ಸಂಜೆ ಆಟವಾಡಲು ಹೋಗಿದ್ದರು. ಈಜು ಬರದಿದ್ದರು ಕೂಡ ನಿನ್ನೆ ಆಟವಾಡಿ ಮದುವೆ ಮನೆಗೆ ವಾಪಾಸ್ ಆಗಿದ್ದರು.


ಇಂದು ಕೂಡ ಈ ನಾಲ್ವರು ನೀರಿನಲ್ಲಿ ಆಟವಾಡುತ್ತಾ ಈಜಾಡಲು ಅಲ್ಲಿಗೆ ಹೋಗಿದ್ದಾರೆ. ಆದರೆ, ನಾಲ್ವರದಲ್ಲಿ ಹರ್ಷಿತಾ ಆಟವಾಡುತ್ತಾ ನೀರಿನಲ್ಲಿ ಮುಳುಗಿದ್ದಾಳೆ. ಅವಳನ್ನು ರಕ್ಷಿಸಲು ಹೋದ ಒಬ್ಬಬ್ಬರೂ ಕೂಡ ಮುಳುಗುತ್ತಾ ಸಾವನ್ನಪ್ಪಿದ್ದಾರೆ.


ಇದನ್ನೂ ಓದಿ :  ಸಾಮಾಜಿಕ ಜಾಲತಾಣಗಳಲ್ಲಿ ಗೋ ಬ್ಯಾಕ್ ಸಿಎಂ ಅಭಿಯಾನ: ಚಾಮರಾಜನಗರಕ್ಕೆ ಭೇಟಿ ನೀಡದ ಬಗ್ಗೆ ಆಕ್ರೋಶ


ಇದನ್ನು ನೋಡಿದ ಸ್ಥಳೀಯರೊಬ್ಬರು ಮಾಹಿತಿ ನೀಡಿ ಇಡೀ ಗ್ರಾಮವೇ ಅಲ್ಲಿ ಜಾಮಾಯಿಸಿತ್ತು. ಇನ್ನು ಅಗ್ನಿಶಾಮಕದಳ ಸಿಬ್ಬಂದಿಗಳು, ಈಜುಗಾರರು ಮತ್ತು ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಅಗ್ನಿಶಾಮಕದಳ ಸಿಬ್ಬಂದಿ ಮತ್ತು ಸ್ಥಳೀಯ ಈಜುಗಾರರು ನಾಲ್ವರ ಶವಗಳನ್ನು ಕೂಡ ಹೊರತೆಗೆದರು.


ಇನ್ನು ಈ ದುರ್ಘಟನೆಯಿಂದಾಗಿ ಇಡೀ ಮದುವೆ ಮನೆಯಲ್ಲಿ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ.
ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಮೂಡುಬಿದಿರೆ ಆಸ್ಪತ್ರೆಗೆ ರವಾನಿಸಲಾಗಿದೆ. ಮದುವೆಯ ಸಂಭ್ರಮಕ್ಕೆ ಬಂದವರು ಮಸಣ ಸೇರಿದ್ದು ನಿಜಕ್ಕೂ ದುರಂತ.

Published by:G Hareeshkumar
First published: