ಹಾವೇರಿ: 2023ರ ಚುನಾವಣೆ (Election) ನನ್ನ ಜೀವನದ ಕೊನೆಯ ಹೋರಾಟ. ಕೋವಿಡ್ ಕಡಿಮೆ ಆದ ಮೇಲೆ ಜನರ ನಡುವೆ ಬರ್ತೀನಿ ಅಂತ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (H D Kumaraswamy) ಹೇಳಿದ್ದಾರೆ. ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣಕ್ಕೆ ಸೋಮವಾರ ಭೇಟಿ ನೀಡಿದ್ದ ಅವರು, ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾದ ಉದ್ಯಮಿ ಜಯಾನಂದ ಜಾವಣ್ಣವರನ್ನ ಪಕ್ಷಕ್ಕೆ ಬರಮಾಡಿಕೊಂಡು ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಹಲವಾರು ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ಕೊಡ್ತಿಲ್ಲ. ರಾಜ್ಯ ಸರ್ಕಾರದವರು ಕೇವಲ ಘೋಷಣೆ ಮಾಡ್ತಿದ್ದಾರೆ. ಮಳೆ ಅನಾಹುತಗಳಿಂದ ಮನೆ ಕಳೆದುಕೊಂಡವರಿಗೆ 5 ಲಕ್ಷ ಕೊಡ್ತೀವಿ ಅಂತಾ ಹೇಳಿದರು. ಒಂದು ಕಂತು ಹಣ ನೀಡಿ ಮುಂದೆ ಹಣವನ್ನೆ ನೀಡಿಲ್ಲ. ಬೆಳೆ ಹಾನಿ ಪರಿಹಾರವೂ ಸಿಕ್ಕಿಲ್ಲ.ಸಾಲಮನ್ನಾ ಆಗೇ ಇಲ್ಲ ಎಂದು ಕೆಲವು ರೈತರು ನನಗೆ ಈಗ ಮನವಿ ಕೊಟ್ಟಿದ್ದಾರೆ. ಸಾಲಮನ್ನಾ ಮಾಡಿದಾಗ ಬಿಜೆಪಿ- ಕಾಂಗ್ರೆಸ್ ನವರು ನನ್ನನ್ನು ಅಪಹಾಸ್ಯ ಮಾಡಿದರು. ನನಗೆ ಕಳೆದ ಚುನಾವಣೆಯಲ್ಲಿ ಬಹುಮತ ಕೊಡಲೇ ಇಲ್ಲ.
ನನಗೆ ಯಾರ ಜೊತೆಗೂ ಸರ್ಕಾರ ಮಾಡೋ ಮನಸ್ಸಿರಲಿಲ್ಲ. ಆದರೆ ಕಾಂಗ್ರೆಸ್ ನವರೆ ನಮ್ಮ ಮನೆಗೆ ಬಂದರು. ಅಂದು ದೇವೆಗೌಡರು ನಮ್ಮ ಪಕ್ಷಕ್ಕೆ ಸಿಎಂ ಹುದ್ದೆ ಬೇಡವೇ ಬೇಡ ಅಂದಿದ್ದರು.ಆದರೆ ರೈತರಿಗೆ ಸಾಲಮನ್ನಾ ಮಾತು ಕೊಟ್ಟ ಹಿನ್ನೆಲೆಯಲ್ಲಿ ಸಿಎಂ ಆಗಲು ಒಪ್ಪಿಕೊಂಡೆ ಎಂದರು.
ಇನ್ನು ಇದೇ ವೇಳೆ ಮಾತನಾಡಿ, ಕರ್ನಾಟಕದ ಆಡಳಿತ ಕನ್ನಡಿಗರಿಂದಲೆ ಎಂಬ ಹೊಸ ಅಧ್ಯಾಯ ಪ್ರಾರಂಭ ಮಾಡೋಣ. ಮುಖ್ಯಮಂತ್ರಿ ಮಾಡಿ ಅಂತಾ ನಾನು ಕೇಳಲ್ಲ. ನಿಮ್ಮ ಬದುಕು ಸರಿಪಡಿಸಲು ಪೂರ್ಣ ಸರ್ಕಾರ ಕೊಡಿ. ಯಾರ ಹಂಗಿನಲ್ಲೂ ಇರದ ಸರ್ಕಾರ ಕೊಡಿ. ಕೇಂದ್ರದ ಮುಂದೆ ನಾನೇನು ಅರ್ಜಿ ಹಿಡಿದುಕೊಂಡು ಹೋಗಲ್ಲ. ಕಮಿಷನ್ ತಿನ್ನೋದು ಈಗ ನಡಿತಿರೋದು, ಎಲ್ಲದನ್ನೂ ಕಟ್ ಮಾಡ್ತೀನಿ.ಹಾವೇರಿ ಜಿಲ್ಲೆಯವರೆ ಈಗ ಸಿಎಂ ಆಗಿದ್ದಾರೆ.ಮುಂದಿನ ಎರಡು ವರ್ಷ ಏನ್ ಮಾಡ್ತಾರೆ ನೋಡೋಣ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಇದನ್ನೂ ಓದಿ: H D Kumaraswamy: ನನಗೆ 20 ವರ್ಷ ಅಧಿಕಾರ ಬೇಡ, ಬರೀ 5 ವರ್ಷ ಅವಕಾಶ ಕೊಟ್ಟು ನೋಡಿ
ನನ್ನ ಜೀವನದ ಕೊನೆಯ ಹೋರಾಟ 2023ರ ಚುನಾವಣೆ: ನನ್ನ ಜೀವನದ ಕೊನೆಯ ಹೋರಾಟ 2023ರ ಚುನಾವಣೆ. ಕೋವಿಡ್ ಕಡಿಮೆ ಆದ ಮೇಲೆ ಜನರ ನಡುವೆ ಬರ್ತೀನಿ. ಹಿರೇಕೇರೂರು ಮಹಾನ್ ಅಭಿವೃದ್ಧಿ ಆಗಿ ಬಿಡ್ತಾ? ರಾಜೀನಾಮೆ ಕೊಟ್ಟು ನನ್ನ ಸರ್ಕಾರ ತೆಗೆದ್ರಲ್ಲಾ? ಹೊಸದಾಗಿ ಏನೂ ಅಭಿವೃದ್ದಿ ಆಗಿಲ್ಲ. ನಾನಿದ್ದಾಗ ಕೊಟ್ಟ ಅನುದಾನವೆ ಈಗಲೂ ನಡೆದಿದೆ ಎಂದು ಸಚಿವ ಬಿ.ಸಿ ಪಾಟೀಲ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. 25000 ಕೋಟಿ ಸಾಲಮನ್ನಾ ಮಾಡಿದ್ದಕ್ಕೆ ನನಗೇನು ಫಲ ಕೊಟ್ಟಿದ್ದೀರಿ? ಮುಂದೆ ಏನು ಅನಾಹುತ ಆಗುತ್ತೆ ನೋಡಿ.
ಕೊರೊನಾ ಸಂದರ್ಭದಲ್ಲಿ ಶವ ಇಟ್ಟಕೊಂಡು ಜನ ಕಣ್ಣೀರು ಹಾಕ್ತಿದ್ದಾರೆ. ಜನತೆ ಜೊತೆ ಚೆಲ್ಲಾಟ ಆಡೋ ಸರ್ಕಾರ ತರಬೇಡಿ. ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸ್ತೀರಿ, ಆದರೆ ಫೀಸ್ ಕೊಟ್ಟೋಕೆ ದುಡ್ಡಿಲ್ಲ. ಯೋಜನೆಗಳ ಹೆಸರಿನಲ್ಲಿ ಕಾಂಟ್ರ್ಯಾಕ್ಟರ್ ಗಳ ಬಳಿ ಕಮೀಷನ್ ತಗೊಳ್ತಾರೆ. ಅದನ್ನೇ ತಂದು ನಿಮಗೆ ಹಂಚುತ್ತಾರೆ. ನಾನು 25000 ಕೋಟಿ ಸಾಲಮನ್ನಾ ಮಾಡೋಕೆ 10% ಕಮಿಷನ್ ತಗೊಂಡಿದ್ರೆ ಏನಾಗ್ತಿತ್ತು? ನಾನು ಓಟಿಗೆ 2000, 3000 ಹಂಚಬಹುದಿತ್ತಲ್ಲಾ? ನಿಮ್ಮ ಬದುಕು ಹಸನು ಮಾಡೋ ಸರ್ಕಾರ ಬೇಕಾ ಬೇಡವಾ? ಕೇಂದ್ರ ಸರ್ಕಾರ ನಂಬಿದರೆ ನಿಮಗೆ ಗೌರವ ಇಲ್ಲ.
ಇದನ್ನೂ ಓದಿ: ಎಚ್ಡಿಕೆ ಸತ್ಯ ಹರಿಶ್ಚಂದ್ರನ 2ನೆ ಕುಡಿ, ಇಂಥ ಪ್ರಾಮಾಣಿಕರನ್ನು ನಾನು ನೋಡಿಯೇ ಇಲ್ಲ!; ಸಚಿವ ಬಿಸಿ ಪಾಟೀಲ್ ವ್ಯಂಗ್ಯ
ಪಕ್ಕದ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸಿ ಜನ ಪ್ರಯೋಜನ ಪಡೆಯುತ್ತಿದ್ದಾರೆ. ಯುವಕರಿಗೆ ಮುಂದಿನ ಚುನಾವಣೆಯಲ್ಲಿ ಅವಕಾಶ ನೀಡುತ್ತೇವೆ.ಎಸಿ, ಡಿಸಿ ಪೋಸ್ಟಿಂಗ್ ಗೆ ಎಷ್ಟೆಷ್ಟು ಲಕ್ಷ ಕೊಟ್ಟು ಬರಬೇಕು ಅಧಿಕಾರಿಗಳು?ಇದರ ಬಗ್ಗೆ ಚರ್ಚೆ ಮಾಡ್ತೀರಾ ನೀವು?ಕೆಲವು ಭಾಗದಲ್ಲಿ ಕಾರ್ಯಕರ್ತರು ನಾನು ಬಂದಾಗ ಬರ್ತಾರೆ. ಆದರೆ ಕುಮಾರಸ್ವಾಮಿ ಹೋದ ಮೇಲೆ ಕಾರ್ಯಕರ್ತರು ಮನೇಲಿ ಮಲಗ್ತಾರೆ.ಈ ಬಗ್ಗೆ ಕಾರ್ಯಕರ್ತರಿಗೆ ಹೇಳಿದರೆಅದನ್ನು ಅಪಹಾಸ್ಯ ಮಾಡಲಾಗ್ತಿದೆ ಎಂದರು.
(ವರದಿ: ಮಂಜುನಾಥ್ ತಳವಾರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ