news18-kannada Updated:February 7, 2021, 9:24 AM IST
ಯಾದಗಿರಿಯಲ್ಲಿ ರೈತರ ಪ್ರತಿಭಟನೆ
ಯಾದಗಿರಿ: ದೇಶಾದ್ಯಂತ ರೈತರು ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದು ಯಾದಗಿರಿಯಲ್ಲಿ ಕೂಡ ರೈತರ ಹೋರಾಟಕ್ಕೆ ಬೆಂಬಲಿಸಿ ರೈತರು ಬೃಹತ್ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು. ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದ ತಹಶಿಲ್ದಾರ ಕಚೇರಿ ಮುಂಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ವಿವಿಧ ರೈತ ಸಂಘಟನೆಗಳ ಮುಖಂಡರು ಹಾಗೂ ಸದಸ್ಯರು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ರೈತರ ಪ್ರತಿಭಟನೆ ಬಿಸಿ ಸಾರ್ವಜನಿಕರಿಗೆ ತಟ್ಟಿತು. ಪ್ರತಿಭಟನೆ ನಿರತ ರೈತರು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿ ಪ್ರಧಾನಮಂತ್ರಿ ಮೋದಿ ಅವರು ದೇಶದ ರೈತರ ವಿರೋಧದ ನಡುವೆಯೂ ಕೃಷಿ ಕಾಯ್ದೆ ಜಾರಿಗೆ ತಂದಿದ್ದು ಕೂಡಲೇ ಕೇಂದ್ರ ಸರಕಾರ ರೈತ ವಿರೋಧಿ ಕಾಯ್ದೆ ವಾಪಸ ಪಡೆಯಬೇಕೆಂದು ಒತ್ತಾಯ ಮಾಡಿದರು.
ಟ್ರಾಫಿಕ್ನಲ್ಲಿ ಸಿಕ್ಕಿಹಾಕಿಕೊಂಡ ಅಂಬುಲೆನ್ಸ್...!ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ರೈತರು ಪ್ರತಿಭಟನೆ ನಡೆಸುತ್ತಿರುವ ವೇಳೆ ಟ್ರಾಫಿಕ್ ಜಾಮ್ ಆಗಿತ್ತು. ಕಲಬುರಗಿ, ವಿಜಯಪುರ, ಬೆಂಗಳೂರು, ಯಾದಗಿರಿ ಮೊದಲಾದ ಕಡೆ ತೆರಳಬೇಕಾದ ಪ್ರಯಾಣಿಕರು ಪರದಾಡುವಂತಾಯಿತು. ಈ ವೇಳೆ ಟ್ರಾಫಿಕ್ನಲ್ಲಿಯೇ ಅಂಬುಲೆನ್ಸ್ ಅಂಬುಲೆನ್ಸ್ ಸಿಕ್ಕಿಹಾಕಿಕೊಂಡಿತ್ತು ಇದರಿಂದ ರೋಗಿಗಳು ಪರದಾಡುವಂತಾಯಿತು. ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಟ್ರಾಫಿಕ್ನಲ್ಲಿ ಸಿಕ್ಕಿಕೊಂಡ ಪರಿಣಾಮ ಬಹುತೇಕ ಜನರು ವಾಹನದಿಂದ ಇಳಿದು ನಡೆದುಕೊಂಡು ತೆರಳುವ ದೃಶ್ಯ ಕಂಡುಬಂತು. ಕಿಮೀ ಗಟ್ಟಲೆ ಟ್ರಾಫಿಕ್ ಜಾಮ್ ಆಗಿದ್ದು ದೂರದ ಊರಿಗೆ ತೆರಳುವ ಪ್ರಯಾಣಿಕರು ಪ್ರಯಾಸ ಪಡುವಂತಾಯಿತು.
ಇದನ್ನೂ ಓದಿ: ಪಂ. ಭೀಮಸೇನ್ ಜೋಶಿ ಜನ್ಮಶತಾಬ್ದಿ ಆಚರಣೆ ಆರಂಭ; ಕರುನಾಡ ಪುತ್ರನ ಮರೆತಿತೇ ರಾಜ್ಯ ಸರ್ಕಾರ?
ಈ ವೇಳೆ ನ್ಯೂಸ್ 18 ಕನ್ನಡಕ್ಕೆ ನಾಗರತ್ನ ಯಕ್ಷಿಂತಿ ಮಾತನಾಡಿ, ಕೇಂದ್ರ ಸರಕಾರ ರೈತ ವಿರೋಧಿ ಕಾಯ್ದೆ ಜಾರಿಗೆ ತಂದಿದ್ದು ಈಗಾಗಲೇ ದೇಶಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದ ರೈತರ ಹೋರಾಟಕ್ಕೆ ಬೆಂಬಲಿಸಿ ನಾವು ಹೋರಾಟ ಮಾಡುತ್ತಿದ್ದೇವೆ. ಕೂಡಲೇ ಕೇಂದ್ರ ಸರಕಾರ ರೈತ ವಿರೋಧಿ ಕಾಯ್ದೆ ವಾಪಸು ಪಡೆಯಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂದೆ ಕೂಡ ರೈತರು ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿ ಅಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ವಾಪಸ್ ಪಡೆದ ರೈತರು...!ಶಹಾಪುರ ತಹಶಿಲ್ದಾರ ಜಗನ್ನಾಥರೆಡ್ಡಿ ಅವರು ರೈತರು ನಡೆಸುತ್ತಿರುವ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ರೈತರ ಬೇಡಿಕೆಗಳನ್ನು ಆಲಿಸಿದರು. ಈ ವೇಳೆ ಸಿಪಿಐ ಚನ್ನಯ್ಯ ಹಿರೆಮಠ ರೈತರ ಮನವೊಲಿಸಿ ರಸ್ತೆ ಬಂದ್ ಹೋರಾಟ ಬೇಗ ಮುಗಿಸಲು ಸೂಚಿಸಿದರು. ನಂತರ ರೈತರು ಪ್ರತಿಭಟನೆ ವಾಪಸ್ ಪಡೆದರು.
ವರದಿ: ನಾಗಪ್ಪ ಮಾಲಿಪಾಟೀಲ
Published by:
Vijayasarthy SN
First published:
February 7, 2021, 9:24 AM IST