ಬೀದರ್; ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಸುರಿದ ಮಹಾಮಳೆಗೆ ಈ ಭಾಗದ ರೈತರು ಜನರು ಅಕ್ಷರಶಃ ನಲುಗಿ ಹೋಗಿದ್ದರು. ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಅತೀ ಹೆಚ್ಚು ಬೆಳೆ ಹಾನಿಯಾಗಿರುವುದು ಬೀದರ್ ಜಿಲ್ಲೆಯಲ್ಲಿ. ಸರಿಸುಮಾರು ಎರಡೂವರೆ ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಉದ್ದು, ಸೋಯಾ, ತೊಗರಿ, ಕಬ್ಬು ಸೇರಿದಂತೆ ಅಪಾರ ಪ್ರಮಾಣದ ತರಕಾರಿ ತೋಟಗಾರಿಕೆ ಬೆಳೆಯೂ ಸಹ ಹಾಳಾಗಿದೆ. ಇನ್ನು ಜಿಲ್ಲೆಯ ಕೃಷಿ ಅಧಿಕಾರಿಗಳು ಬೆಳೆ ಹಾನಿ ಸಮೀಕ್ಷೆ ನಡೆಯುತ್ತಿದೆ ಎಂದು ಕಾಲಹರಣ ಮಾಡುತ್ತಿದ್ದಾರೆಯೇ ವಿನಃ ರೈತರಿಗೆ ಇದುವರೆಗೂ ಪರಿಹಾರ ನೀಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಒಂದು ಎಕರೆಗೆ ಕನಿಷ್ಠ ಅಂದರೂ 3 ರಿಂದ 4 ಸಾವಿರ ರೂಪಾಯಿಯನ್ನು ಖರ್ಚು ಮಾಡಿ ಉತ್ತಿ ಬಿತ್ತಿದ್ದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ನಮಗೆ ಸರಕಾರದಿಂದ ಸಹಾಯವಾದರೆ ನಮ್ಮ ಬದುಕು ಕಷ್ಟದಿಂದ ಮುಕ್ತವಾಗುತ್ತದೆ ಎಂಬುದು ರೈತರ ಅಳಲು. ಜೊತೆಗೆ ಜಿಲ್ಲೆಯ ಕೃಷಿ ಇಲಾಖೆ ಅಧಿಕಾರಿಗಳಿಂದ ಕೆಲವು ರೈತರ ಹೊಲಗಳಿಗೆ ಹೋಗಿ ಸರ್ವೇ ಕಾರ್ಯವನ್ನೇ ಮಾಡಿಲ್ಲ. ತಮಗೆ ಬೇಕಾದ ರೈತರ ಹೊಲಗಳಿಗಷ್ಟೇ ಹೋಗಿ ಸರ್ವೇ ಮಾಡಲಾಗಿದ್ದು, ಸಾವಿರಾರು ರೈತರಿಗೆ 2 ಸಾವಿರ ಪರಿಹಾರ ಸಹ ಸಿಕ್ಕಿಲ್ಲ. ಹೀಗಾದರೇ ಜಿಲ್ಲೆಯ ಸಣ್ಣ ರೈತರು ಬದುಕುವುದಾದರೂ ಹೇಗೆ? ಎಂದು ಬೀದರ್ ಜಿಲ್ಲೆಯ ರೈತ ಮುಖಂಡರು ಪ್ರಶ್ನಿಸುತ್ತಿದ್ದಾರೆ.
ಇದನ್ನು ಓದಿ: ನಿನಗೆ ಏನು ಬೇಕು ಹೇಳು, ಎಲ್ಲಾ ಮಾಡಿಕೊಡುತ್ತೇನೆ; ಮಾಜಿ ಸಚಿವ ಎಚ್.ಡಿ.ರೇವಣ್ಣಗೆ ಸಿಎಂ ಬಿಎಸ್ವೈ ಅಭಯ
ಬೆಳೆ ಹಾನಿಯಾದಾಗ ಮಾಜಿ ಸಿಎಂ ಸಿದ್ದರಾಮಯ್ಯ, ಕಂದಾಯ ಸಚಿವ ಆರ್.ಅಶೋಕ್ ಸೇರಿದಂತೆ ಕೃಷಿ ಇಲಾಖೆಯ ಉನ್ನತಮಟ್ಟದ ಅಧಿಕಾರಿಗಳ ಅಧ್ಯಯನ ತಂಡವೂ ಬಂದು ಬೀದರ್ ಜಿಲ್ಲೆಯಾದ್ಯಂತ ಬೆಳೆ ನಷ್ಟ ವೀಕ್ಷಣೆ ಮಾಡಿದ್ದರು. ರಾಜಕೀಯ ಮುಂಖಡರು ಹಾಗೂ ಅಧಿಕಾರಿಗಳು ಒಬ್ಬರಿಂದೊಬ್ಬರು ಬಂದು ಬೆಳೆ ಹಾನಿ ವೀಕ್ಷಣೆ ಮಾಡಿದ್ದರಿಂದ ತಕ್ಷಣ ನಮಗೆ ಪರಿಹಾರ ಸಿಗಬಹುದು ಎಂದು ಅಂದುಕೊಂಡಿದ್ದ ರೈತರಿಗೆ ಮೂರು ತಿಂಗಳಾದರೂ ಇನ್ನೂ ಪರಿಹಾರ ಬಾರದಿರುವುದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ