ಚಿತ್ರದುರ್ಗ(ಸೆಪ್ಟೆಂಬರ್. 25): ಗಾನ ಗಂಧರ್ವ ಎಸ್ ಪಿ ಬಾಲಸುಬ್ರಹ್ಮಣ್ಯಂ ನಿಧನದ ಹಿನ್ನಲೆ. ಚಿತ್ರದುರ್ಗದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರು ಸಂತಾಪ ಸೂಚಿಸಿ, ಎಸ್ಪಿಬಿಯವರು ಮುರುಘಾ ಮಠದ ಜೊತೆಗಿನ ಒಡನಾಟ ನೆನಪಿಸಿಕೊಂಡರು. ಮುರುಘಾ ಮಠದಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಸಂತಾಪ ಸೂಚಿಸಿ ಮಾತನಾಡಿದ ಅವರು, ಸ್ವರ ಸಾಮ್ರಾಟ ಎಸ್.ಪಿ. ಬಾಲಸುಬ್ರಹ್ಮಣ್ಯಂ ಗುಣಮುಖರಾಗಿ ಬರುತ್ತಾರೆಂದು ಜನರು ಪೂಜೆ, ಪ್ರಾರ್ಥನೆಗಳನ್ನು ಮಾಡಿದ್ದರು. ಆದರೆ, ಇಂದು ಅವರು ನಮ್ಮನ್ನ ಅಗಲಿದ್ದಾರೆ. ಅಂತಹ ಶ್ರೇಷ್ಠ ಗಾಯಕ, ಕಲಾವಿದ, ನಟರನ್ನ ಭಾರತ ಕಳೆದುಕೊಂಡಿದೆ. ಅವರು ಸಾಂಸ್ಕೃತಿಕ ಲೋಕದ ರಾಯಭಾರಿಯಾಗಿ ಕಂಗೊಳಿಸಿದ್ದಾರೆ. ಹಾಗಾಗಿ ಅವರ ಅದ್ಬುತ ಪ್ರತಿಭೆಯನ್ನ ಕಳೆದುಕೊಂಡ ನಮಗೆ ಸಹಜವಾಗಿಯೇ ನೋವಾಗುತ್ತದೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಗಾಯನ ಕುರಿತು ಮಾತನಾಡಿರುವ ಅವರು ಎಸ್.ಪಿ.ಬಿ ಯವರು ನಮ್ಮನ್ನ ಅಗಲಿರಬಹುದು, ಅವರ ಪ್ರತಿಭೆ ನಮ್ಮನ್ನ ಬಿಟ್ಟು ಅಗಲಲಿಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. ಅಷ್ಟೆ ಅಲ್ಲ ಅವರು ಮಠಕ್ಕೆ ಭೇಟಿ ನೀಡಿದನ್ನು ನೆನಪು ಮಾಡಿಕೊಂಡಿದ್ದರು
2006-07 ರಲ್ಲಿ ಶರಣ ಸಂಸ್ಕೃತಿ ಉತ್ಸವದ ಕಾರ್ಯಕ್ರಮದ ಪ್ರಯುಕ್ತ ಚಿತ್ರದುರ್ಗ ನಗರದಲ್ಲಿ ಡಾ.ಶಿವಮೂರ್ತಿ ಮುರುಘಾ ಶ್ರೀಗಳ ಆಶಯದಂತೆ ಹಂಸಲೇಖ ಅವರ ರಾಗ ಸಂಯೋಜನೆಗೆ ವಚನಗಳನ್ನ ಹಾಡಿದ್ದರು. ಬಳಿಕ ಹಿಮೋಫೀಲಿಯ ರೋಗಗಕ್ಕೆ ತುತ್ತಾಗಿ ಬಳಲುತ್ತಿದ್ದ ಅನೇಕ ಮಕ್ಕಳು ಶ್ರೀ ಮಠದ ಆಶ್ರಯದಲ್ಲಿ ಬೆಳೆಯುತ್ತಿವೆ ಎಂಬ ಮಾಹಿತಿ ತಿಳಿದ ಬಳಿಕ ಮಕ್ಕಳಿಗಾಗಿಯೇ ಒಂದು ಸಂಗೀತ ಕಾರ್ಯಕ್ರಮ ನಡೆಸಿ ಕೊಟ್ಟಿದ್ದರು.
ಇದನ್ನೂ ಓದಿ : ಹಿಮಾಲಯ ಕರಗಲ್ಲಾ ಅಂದುಕೊಂಡಿದ್ವಿ ಆದರೆ ಕರಗಿಯೇ ಬಿಟ್ಟಿತು ; ಎಸ್.ಪಿ.ಬಿ ನೆನೆಸಿಕೊಂಡು ಭಾವುಕರಾದ ಹಂಸಲೇಖ
2015 ರಲ್ಲಿ ಬಸವೇಶ್ವರ ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ದಾವಣಗೆರೆ ಹಿಮೋಫೀಲಿಯಾ ಟ್ರಸ್ಟ್ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಸ್ವಂತ ಖರ್ಚಿನಲ್ಲಿಯೇ ಆಗಮಿಸಿದ್ದರು. ಆ ಕಾರ್ಯಕ್ರಮದಿಂದ ಬಂದಂತ ಅಷ್ಟು ಹಣವನ್ನ ಮಾರಕ ಖಾಯಿಲೆಯಿಂದ ಬಳಲುತ್ತಿದ್ದ ಮಕ್ಕಳ ಚಿಕಿತ್ಸೆಗೆ ಬಳಸಿ ಅಂತ ದಾನ ಮಾಡಿದ್ದರು ಎಂದು ಸ್ವತಃ ಡಾ.ಶಿವಮೂರ್ತಿ ಮುರುಘಾ ಶರಣರು ಎಸ್ಪಿಬಿಯವರ ಸಾರ್ಥಕ ಬದುಕಿನ ಘಟನೆ ಹಾಗೂ ಮಠದ ಜೊತೆಗಿನ ಒಡನಾಟವನ್ನ ಸ್ಮರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ