ಕೊಪ್ಪಳ(ಜನವರಿ . 01): ನಿನ್ನೆ ರಾತ್ರಿಯಿಡಿ ಬಂದೋಬಸ್ತ್ನಿಂದ ಬಸವಳಿದಿದ್ದರೂ ಸಹ ಬೆಳಗಾಗುತ್ತಲೇ ಕೊಪ್ಪಳ ಜಿಲ್ಲೆಯ ಪೋಲಿಸರು ಸಂಭ್ರಮದಿಂದ ಹೊಸ ವರ್ಷಾಚರಣೆಯಲ್ಲಿ ತೊಡಗಿದ್ದಾರೆ. ಬಹಳ ವರ್ಷಗಳಿಂದ ಕೊಪ್ಪಳದ ಜನತೆಯ ಬೇಡಿಕೆಯಾಗಿದ್ದ ಟ್ರಾಫಿಕ್ ಲೈಟ್, ಸಿಗ್ನಲ್ , ಕ್ಯಾಮೆರಾ ಅಳವಡಿಕೆ ಮತ್ತು ಪೋಲಿಸರಿಗೆ ಶೆಲ್ಟರ್ ವ್ಯವಸ್ಥೆಯನ್ನು ಇಂದು ಅಧಿಕೃತವಾಗಿ ಉದ್ಘಾಟಿಸಲಾಯಿತು. ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಇಂದು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮದುವೆ ಮನೆ ಸಿಂಗರಿಸಿದಂತೆ ವೃತ್ತಗಳಲ್ಲಿರುವ ಟ್ರಾಫಿಕ್ ಪೊಲೀಸರ ಶೆಲ್ಟರ್ಗಳನ್ನು ಸಿಂಗಾರ ಮಾಡಲಾಗಿತ್ತು. ಮದುವೆಗೆ ಸಿದ್ದರಾದ ಮದು ಮಕ್ಕಳಂತೆ ಪೋಲಿಸ್ ಅಧಿಕಾರಿಗಳು ಡ್ರೆಸ್ಸಿಂಗ್ ಮಾಡಿಕೊಂಡಿದ್ದ ಎಲ್ಲರನ್ನು ಸೆಳಯಿತು. ರೇಷ್ಮೆಯ ಲುಂಗಿ, ರೇಷ್ಮೆಯ ಶರ್ಟ್ ಮೇಲೊಂದು ರೇಷ್ಮೆಯ ಶಲ್ಯ ಹೊದ್ದುಕೊಂಡು ಭರ್ಜರಿ ಸಂಭ್ರಮದಿಂದ ಪೋಲಿಸರು ಭಾಗವಹಿಸಿದ್ದರು. ಕೊಪ್ಪಳ ಡಿವಿಜನ್ನ ಎಲ್ಲ ಸಿಪಿಐಗಳು, ಪಿಎಸ್ಐ ಗಳು, ಇನ್ಸಪೆಕ್ಟರ್ಗಳು ಎಲ್ಲರೂ ಒಂದೇ ಡ್ರೆಸ್ ಕೋಡ್ನಲ್ಲಿದ್ದದ್ದು ಕಂಡು ಬಂತು.
ಇದೇ ಧರಿಸಿನಲ್ಲಿ ಗಣ್ಯರ ಮನೆಗೆ ಭೇಟಿ ನೀಡಿ ಹೊಸ ವರ್ಷಕ್ಕೆ ಶುಭ ಕೋರಿದರು. ಸಂಸದ ಕರಡಿ ಸಂಗಣ್ಣನವರ ಮನೆಗೆ ಭೇಟಿ ನೀಡಿ ಹೂಗೂಚ್ಛ ನೀಡಿ ಕೇಕ್ ಕತ್ತರಿಸಿ ಶುಭಕೋರಿ ಬಿಜೆಪಿ ಮುಖಂಡ ಅಮರೇಶ ಕರಡಿಯವರ ಜೊತೆ ಗ್ರೂಪ್ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದರು.
ಕೊಪ್ಪಳ ಡಿವೈಎಸ್ಪಿ ವೆಂಕಟಪ್ಪ ನೇತೃತ್ವದಲ್ಲಿ ಕೊಪ್ಪಳ ಪೊಲೀಸರ ತಂಡ ಸಾಂಪ್ರದಾಯಿಕ ಉಡುಗೆಯಲ್ಲಿ ಹಾಗೂ ಗಂಗಾವತಿ ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ ನೇತೃತ್ವದಲ್ಲಿ ಸಹಜ ಧರಿಸಿನಲ್ಲಿ ಗಂಗಾವತಿ ಪೊಲೀಸರ ತಂಡ ಗಣ್ಯರನ್ನು ಭೇಟಿ ಮಾಡಿ ಹೊಸ ವರ್ಷದ ಶುಭಾಶಯ ಕೋರಿದ ಫೋಟೋಗಳು ವೈರಲ್ ಆಗಿವೆ.
ಕಳೆಗಟ್ಟಿದ ವೃತ್ತಗಳು
ಇದುವರೆಗೂ ಬೇಕಾ ಬಿಟ್ಟಿ ವಾಹನ ಸಂಚಾರದಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿತ್ತು. ಕಳೆದ ಎರಡು ತಿಂಗಳಿನಿಂದ ಜಿಲ್ಲೆಯ ಪೊಲೀಸ್ ಇಲಾಖೆ ಕ್ರಿಯಾಶೀಲವಾಗಿದ್ದು, ವಿವಿಧ ಪ್ರಗತಿ ಕೆಲಸಗಳನ್ನು ನಡೆಸುತ್ತಿದೆ. ಎಸ್ಪಿ ಟಿ.ಶ್ರೀಧರ್ ಜಿಡ್ಡುಗಟ್ಟಿದ್ದ ಇಲಾಖೆಗೆ ಜೀವ ತುಂಬಿದ್ದಾರೆ.
ಜಿಲ್ಲೆಗೆ ಬಂದಾಕ್ಷಣವೇ ದುರಸ್ತಿಯಲ್ಲಿದ್ದ ಟ್ರಾಫಿಕ್ ಸಿಗ್ನಲ್ಗಳನ್ನು ಸರಿಪಡಿಸಿದರು. ಆನಂತರ ಸಂಚಾರಿ ಠಾಣೆಯ ಪಿಎಸ್ಐ ಅಮರೇಶ ಹುಬ್ಬಳ್ಳಿ ನೇತೃತ್ವದಲ್ಲಿ ನಗರದ ವಿವಿಧ ಪ್ರಮುಖ ವೃತ್ತಗಳಲ್ಲಿ ಪೊಲೀಸ್ ಚೌಕಿ, ಮೈಕ್, ಸಂಚಾರಿ ರೇಖೆ ಹಾಕಿ ಶಿಸ್ತು ತಂದಿದ್ದಾರೆ.
ಕೊಪ್ಪಳ ನಗರದ ಪ್ರಮುಖ ವೃತ್ತಗಳು ಈಗ ಹೇಗಾಗಿವೆ ಎಂದರೆ ಮಹಾ ನಗರಪಾಲಿಕೆಯಲ್ಲಿ ಇರುವ ರಸ್ತೆ ಸಂಚಾರವನ್ನು ನೆನಪಿಸುತ್ತವೆ.
ಇದನ್ನೂ ಓದಿ : Ramesh Jarkiholi: ಸ್ನೇಹಿತರೊಂದಿಗೆ ಕಾಮಾಕ್ಯ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಸಚಿವ ರಮೇಶ್ ಜಾರಕಿಹೊಳಿ
ಒಟ್ಟಾರೆ ಜಿಲ್ಲೆಯ ಪೊಲೀಸ್ ಇಲಾಖೆ ಸಾರ್ವಜನಿಕರ ಹಿತಕ್ಕಾಗಿ ಸಾಕಷ್ಟು ಶ್ರಮಿಸುತ್ತಿದ್ದು, ಅತ್ಯುತ್ತಮ ತಂಡವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದೇ ಮಾದರಿಯಲ್ಲಿ ಜಿಲ್ಲೆಯ ಇನ್ನುಳಿದ ಪೊಲೀಸ್ ಅಧಿಕಾರಿಗಳು ಕಾರ್ಯ ನಿರ್ವಹಿಸಿದರೆ ಸಾರ್ವಜನಿಕರಿಗೆ ಪೊಲೀಸರೆಂದರೆ ಭೀತಿಯ ಬದಲಾಗಿ ಗೌರವ ಭಾವ ಮೂಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ