ಕೋಲಾರ: ಮಾಜಿ ಸಚಿವ ರಮೇಶ್ ಹೊಳಿ ಸಿಡಿ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಆ ಬಗ್ಗೆ ನನ್ನೇನು ಕೇಳಬೇಡಿ. ಈ ವಿಚಾರದಲ್ಲಿ ಹೆಚ್ಚು ಆಸಕ್ತಿ ನನಗಿಲ್ಲ. ಅದರಿಂದ ನನ್ನ ಯೋಗ್ಯತೆ, ಗೌರವಕ್ಕೆ ಒಳ್ಳೆಯದಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ. ಕೋಲಾರದ ನಿರ್ಮಿತಿ ಕೆಂದ್ರದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಂತ್ರಸ್ತೆ ರಕ್ಷಣೆ ಕೇಳಿದಾಗ ಬೆಂಬಲ ನೀಡಿದ್ದೇನೆ. ನನ್ನ ಬಳಿ ಅವರಿಗೆ ರಕ್ಷಣೆ ನೀಡಲು ಯಾವುದೇ ಪಡೆಯಿಲ್ಲ. ಆದರೂ ನೈತಿಕವಾಗಿ ಬೆಂಬಲ ನೀಡಿದ್ದೇನೆ ಅಷ್ಟೇ. ಈಗ ಸಂತ್ರಸ್ತೆ ನ್ಯಾಯಾಲಯದ ಮುಂದೆ ಬಂದಿದ್ದಾರೆ. ರಮೇಶ್ ಜಾರಕಿಹೊಳಿ ರಾಜಿನಾಮೆಗೆ ಯಾರು ಬೇಕಾದರೂ ಆಗ್ರಹ ಮಾಡಬಹುದು. ಈಗ ಕಾಂಗ್ರೆಸ್ ಪಕ್ಷ ಆಗ್ರಹ ಮಾಡಿದೆ. ಅದು ಅವರಿಗೆ ಬಿಟ್ಟದ್ದು. ಇದರಲ್ಲಿ ರಾಜಕೀಯ ಇಲ್ಲ. ಇನ್ನು ಮೊನ್ನೆಯ ವಿಧಾನಸಭೆ ಅಧಿವೇಶನದಲ್ಲಿ ಸಿಡಿ ಪ್ರಕರಣ ಚರ್ಚೆ ಆದಾಗ ನ್ಯಾಯದ ಪರವಾಗಿ ಮಾತನಾಡಿದ್ದೇನೆ ಅಷ್ಟೇ, ಈಗ ಪ್ರಕರಣ ಕೋರ್ಟ್ ಮುಂದೆ ಬಂದಿದೆ, ಇನ್ನು ಕೋರ್ಟ್ ಆಯಿತು, ಅವರಾಯಿತು. ಸಾರ್ವಜನಿಕವಾಗಿ ಚರ್ಚೆ ಅನವಶ್ಯಕ ಎಂದು ತಿಳಿಸಿದರು.
ಇನ್ನು ಎಸ್ ಐಟಿ ತನಿಖೆಯ ಮೇಲೆ ಅನುಮಾನ ಇದೆ ಎಂಬ ಸಂತ್ರಸ್ತೆ ಹೇಳಿಕೆಗೆ, ಪ್ರತಿಕ್ರಿಯೆ ನೀಡಿದ ರಮೇಶ್ ಕುಮಾರ್, ಈಗಲೇ ತನಿಖೆಯ ಮೇಲೆ ನಂಬಿಕೆ ಇಲ್ಲವೆಂದು ಹೇಳೋಕೆ ಆಗಲ್ಲ. ನ್ಯಾಯಾಂಗವೇ ಸಂತ್ರಸ್ತೆಗೆ ಖುದ್ದು ಹೇಳಿಕೆ ನೀಡಲು ಅವಕಾಶ ನೀಡಿದೆ. ಜೊತೆಗೆ ಮಹಿಳಾ ಭದ್ರತೆಯನ್ನು ನೀಡಲಾಗಿದೆ. ಹಾಗಾಗಿ ಸರ್ಕಾರದ ವ್ಯವಸ್ತೆಯ ಮೇಲೆ ನಂಬಿಕೆ ಇಡಬೇಕು. ರಾಜ್ಯ ರಾಜಕಾರಣದಲ್ಲಿ ಸಿಡಿ ಪ್ರಕರಣ ಉಪಚುನಾವಣೆ ಮೇಲೆ ಪರಿಣಾಮ ಬೀರಲ್ಲ. ಜನರು ಬಹಳ ಬುದ್ದಿವಂತರು. ಇಂತಹ ವಿಚಾರಗಳನ್ನು ಜನರು ನೋಡೋದೆ ಇಲ್ಲ ಎಂದರು.
ಇದನ್ನು ಓದಿ: Rahul Gandhi: 24/7 ಸುಳ್ಳು ಹೇಳಲು ನಾನು ನರೇಂದ್ರ ಮೋದಿಯಲ್ಲ; ಚುನಾವಣಾ ಪ್ರಚಾರದಲ್ಲಿ ರಾಹುಲ್ ಗಾಂಧಿ ವ್ಯಂಗ್ಯ
ಇನ್ನು ಸಿಡಿ ಕೇಸ್ ರಾಜಕೀಯ ಪಕ್ಷಗಳ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿದ್ದು, ಈ ಬಗ್ಗೆ ಮಾತನಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೊಚ್ಚೆ ನೀರಲ್ಲಿ ಸಂಪಿಗೆ ವಾಸನೆ ಬರಲ್ಲ. ಮನುಷ್ಯ ಅಂದ ಮೇಲೆ ಚಪಲ ಇದ್ದೇ ಇರತ್ತೆ. ಪಂಚೇದ್ರಿಯಗಳು ಕೆಲಸ ಮಾಡುತ್ತೆ, ಇದೆಲ್ಲಾ ಕಾಮನ್ ಆಗಿದೆ. ಸಮಾಜದಲ್ಲಿ ಇದೆಲ್ಲ ದೊಡ್ಡ ವಿಚಾರವೇ ಅಲ್ಲ. ಜನರ ಕಷ್ಟ ಯಾರೂ ಮಾತಾಡಲ್ಲ. ಇವತ್ತು ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದೆ. ರೈತರ ಕೃಷಿ ಉಪಕರಣಗಳ ಬೆಲೆ, ಗೊಬ್ಬರ, ಬೆಳೆಗಳ ಬೀಜ ನಾರಿನ ಬೆಲೆಯೂ ಗಗನಕ್ಕೇರಿದೆ. ಸಾರ್ವಜನಿಕ ಜೀವನದಲ್ಲಿ ಅಸಹ್ಯವಾಗಿ ನಡೆದುಕೊಂಡಾಗ ಸಂವಿಧಾನವೇ ಅಂತಹವರಿಗೆ ಶಿಕ್ಷೆ ಕೊಡುತ್ತೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ