ಈ ದೇಶದ ಅತ್ಯಂತ ಗೌರವಯುವ ಸಂಘಟನೆಯಾದ ಆರ್ಎಸ್ಎಸ್ ಅನ್ನು ತಾಲಿಬಾನಿಗೆ ಹೋಲಿಸಿ ಕಾಂಗ್ರೆಸ್ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಬಹಳ ಕೀಳಾಗಿ ಮಾತನಾಡಿದ್ದಾರೆ. ಇದು ಅವರ ಸಂಸ್ಕೃತಿ ತೋರಿಸುತ್ತದೆ. ಇದನ್ನ ನಾವು ಖಂಡಿಸುತ್ತೇವೆ, ಇಂತಹ ಹೇಳಿಕೆಗಳನ್ನು ಕಾಂಗ್ರೆಸ್ ಅರ್ಥಮಾಡಿಕೊಳ್ಳಬೇಕು ಎಂದು ಬಿಜೆಪಿ ವಕ್ತಾರ ಛಲವಾದಿ ನಾರಾಯಣ ಸ್ವಾಮಿ ಕಿಡಿಕಾರಿದ್ದಾರೆ.
ನಮ್ಮ ದೇಶದಲ್ಲಿ ತಾಲಿಬಾನಿನ ಪರ ಮಾತನಾಡುವವರು ಹಾಗೂ ಅವರನ್ನು ಓಲೈಸುವವರೇ ಕಾಂಗ್ರೆಸ್ ಪಕ್ಷದವರು, ಆರ್ಎಸ್ಎಸ್ನವರೂ ಎಂದಿಗೂ ತಾಲಿಬಾನ್ ಕಡೆಗೆ ಹೋಗಿಲ್ಲ, ಆ ಬಗ್ಗೆ ವಿಚಾರದ ಬಗ್ಗೆ ಯೋಚಿಸಿಲ್ಲ ಎಂದು ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಈ ದೇಶದ ಒಂದು ಅಸ್ಮಿತೆ. ಇಂದು ಅಫ್ಘಾನಿಸ್ತಾನದ ಪರಿಸ್ಥಿತಿ ಹೇಗಾಗಿದೆ ಎಂಬುದನ್ನು ಕಣ್ಣಾರೆ ನೋಡುತ್ತಿದ್ದೇವೆ. ನೀಚ ತಾಲಿಬಾನಿಗಳು ತಮ್ಮ ಜನರನ್ನೇ ಕೊಲ್ಲುತ್ತಿದ್ದಾರೆ. ತಮ್ಮ ದೇಶವನ್ನು ಪ್ರೀತಿಸುವವರು ಎಂದಾದರೂ ತಮ್ಮ ಜನರನ್ನು ಕೊಲ್ಲಲು ಸಾಧ್ಯವೇ, ಎಂದು ಪ್ರಶ್ನಿಸಿದರು.
ಆದರೆ ನಮ್ಮ ಆರ್ಎಸ್ಎಸ್ ಎಂಥಹ ಕಷ್ಟದ ಸಂದರ್ಭ ಬಂದರೂ ದೇಶದ ರಕ್ಷಣೆಗೆ ನಿಲ್ಲುತ್ತದೆ. ತಮ್ಮ ಜನರನ್ನೇ ಕೊಲ್ಲುವ ತಾಲಿಬಾನ್ ಪರ ನಿಲ್ಲುವ ಕಾಂಗ್ರೆಸ್ಸಿನ ಕೆಟ್ಟ ಸಂಸ್ಕೃತಿ ತೋರಿಸುತ್ತದೆ ಎಂದರು.
ಧ್ರುವನಾರಾಯಣ್ ಹಿರಿಯರಾಗಿದ್ದು, ಅವಿವೇಕಿತನದ ಹೇಳಿಕೆ ನೀಡಬಾರದು. ಇಂದು ಕಾಂಗ್ರೆಸ್ ಪರಿಸ್ಥಿತಿ ಹೇಗಾಗಿದೆ ಅನ್ನುವುದು ನಿಮಗೆ ಗೊತ್ತಿರಲಿ. ಧ್ರುವನಾರಾಯಣ್ ಅವರೇ ನೀವೊಬ್ಬರು ಅವಕಾಶವಾದಿ.ಈ ಹಿಂದೆ ಬಿಜೆಪಿಯ ಬಾಗಿಲು ಬಡಿದು ಹೋದವರು ನೀವು. ನಿಮ್ಮ ಅತಿರೇಕದ ಹೇಳಿಕೆಗೆ ಜನ ಮತ್ತೊಮ್ಮೆ ಬುದ್ದಿ ಕಲಿಸುತ್ತಾರೆ ಎಂದು ವ್ಯಂಗ್ಯವಾಡಿದರು.
ಲಕ್ಷಣ್ ಅನ್ನುವ ಕಾಂಗ್ರೆಸ್ ವಕ್ತಾರ ಕೂಡ ಸಿ.ಟಿ ರವಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಸಿ.ಟಿ ರವಿ ಬಿಜೆಪಿಯ ರಾಷ್ಟ್ರೀಯ ನಾಯಕರು. ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಿ, ಅನ್ನಪೂರ್ಣೇಶ್ವರಿ ಹೆಸರು ಇಡಬಹುದು ಎಂದಷ್ಟೇ ಹೇಳಿದ್ದಾರೆ, ಅನ್ನ ಕೊಡುವ ದೇವತೆಗೆ ಹೋಲಿಸಿದ್ದಾರೆ. ಇಂತಹ ಮನುಷ್ಯನನ್ನು ಸಿ.ಟಿ ರವಿ ಕುಡುಕ ಅಂತ ಹೇಳಿರುವುದು ಖಂಡನೀಯ. ಅವರ ಈ ಹೇಳಿಕೆ ಸರಿಯಿಲ್ಲ ಎಂದರು.
ಇದನ್ನೂ ಓದಿ: Afghanistan Crisis| "ಶೂಗಳನ್ನು ಧರಿಸಲೂ ಸಾಧ್ಯವಾಗಲಿಲ್ಲ": ಪಲಾಯನದ ವಿವರ ಬಿಚ್ಚಿಟ್ಟ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕೂಡ ತಮ್ಮ ಹೇಳಿಕೆ ಮೂಲಕ ಗೌರವಯುತವಾಗಿ ನಡೆದುಕೊಂಡಿದ್ದಾರೆ. ಕ್ಯಾಂಟೀನ್ನಲ್ಲಿ ಹೆಚ್ಚಾಗಿ ತಳ ಸಮುದಾಯದ ಜನರೇ ಊಟ ಮಾಡುತ್ತಿದ್ದು, ಹೀಗಾಗಿ ಕ್ಯಾಂಟೀನಿಗೆ ಇಂದಿರಾ ಹೆಸರಿನ ಬದಲು ಅಂಬೇಡ್ಕರ್ ಹೆಸರಿಡಲು ಸೂಚಿಸಿದ್ದಾರೆ. ಆದರೆ ಅಂತಿಮವಾಗಿ ಸಿಎಂ ಅವರು ಯಾವ ಹೆಸರು ಅಂತ ನಿರ್ಧಾರ ಮಾಡಲಿದ್ದಾರೋ ತಿಳಿಯದು. ಇದೆಲ್ಲವೂ ಪಕ್ಷದ ಹಿರಿಯ ನಾಯಕರಿಗೆ ಬಿಟ್ಟ ವಿಚಾರ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ