ಧಾರವಾಡ : ಕೊರೊನಾ ಎರಡನೇ ಅಲೆಯಿಂದಾಗಿ ಜನಜೀವನ ಕಂಗೆಟ್ಟು ಹೋಗಿದೆ. ಲಾಕ್ಡೌನ್ ನಿಂದಾಗಿ ಎಲ್ಲ ಕ್ಷೇತ್ರಗಳು ಅಲ್ಲೋಲ ಕಲ್ಲೋಲ ಉಂಟಾಗಿದೆ. ಇದಕ್ಕೆ ಕೃಷಿ ಕ್ಷೇತ್ರವು ಸಹ ಹೊರತಾಗಿಲ್ಲ. ಬೆಳೆದ ಬೆಳೆಗಳು ಸರಿಯಾಗಿ ಮಾರಾಟವಾಗದೇ ಹಾಗೂ ಸೂಕ್ತ ಬೆಲೆ ಸಿಗದೇ ಬೆಳೆಗಳನ್ನು ಜಮೀನಿನಲ್ಲೆ ನಾಶ ಮಾಡಲಾಗುತ್ತಿದೆ. ಇವುಗಳ ಮಧ್ಯೆ ಸಂಕಷ್ಟದ ಸಮಯದಲ್ಲೂ ಧಾರವಾಡದ ರೈತನೊಬ್ಬರು ಅಚ್ಚರಿ ಮೂಡಿಸುವಂಥ ಉತ್ತಮ ಬೆಳೆ ತೆಗೆದು ಮಾರಾಟ ಮಾಡಿದ್ದಾನೆ.
ಎರಡು ಎಕರೆಯಲ್ಲಿ ಜಮೀನಿನಲ್ಲಿ 40 ಟನ್ ಬಾಳೆ ಬೆಳೆದು ಲಕ್ಷಾಂತರ ರೂಪಾಯಿ ಆದಾಯ ಪಡೆದ ರೈತ ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ತಿಪ್ಪಣ್ಣ ತಿರ್ಲಾಪುರ. ಕೊರೊನಾ ಸಂಕಷ್ಟದ ಮಧ್ಯೆಯೂ ರೈತನ ಅದ್ಭುತ ಸಾಧನೆ ಮಾಡುವ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾನೆ. ತಮ್ಮ ಎರಡು ಎಕರೆ ಜಮೀನಿನಲ್ಲಿ ಬಾಳೆಯನ್ನು ಬೆಳೆದಿರೋ ರೈತ, ಸುಮಾರು 40 ಟನ್ ಇಳುವರಿಯನ್ನು ತೆಗೆದಿದ್ದಾರೆ. ಇದರಿಂದಾಗಿ ಬರೋಬ್ಬರಿ 3 ಲಕ್ಷ ರೂಪಾಯಿಗೂ ಅಧಿಕ ಆದಾಯ ಗಳಿಸಿದ್ದಾರೆ.
ಎರಡು ಎಕರೆ ಜಮೀನಿನಲ್ಲಿ ಅಂಗಾಂಶ ಬಾಳೆಯ ತೋಟವಾಗಿ ಅಭಿವೃದ್ಧಿ ಪಡಿಸಲು ತೋಟಗಾರಿಕೆ ಇಲಾಖೆ ಮೂಲಕ ಮಹಾತ್ಮಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2020-21 ನೇ ಸಾಲಿನಲ್ಲಿ ಕೂಲಿ ವೆಚ್ಚವಾಗಿ 78 ಸಾವಿರ ರೂಪಾಯಿ ಹಾಗೂ ಸಾಮಗ್ರಿ ವೆಚ್ಚವಾಗಿ 27 ಸಾವಿರ ರೂಪಾಯಿಗಳ ಅನುದಾನವನ್ನು ಪಡೆದಿದ್ದರು. ಇದರ ಸಹಾಯದಿಂದ ತಿಪ್ಪಣ್ಣ ಕಷ್ಟಪಟ್ಟು ದುಡಿದು, ಇದೀಗ ಲಕ್ಷ ಲಕ್ಷ ರೂಪಾಯಿ ಆದಾಯ ಪಡೆದಿದ್ದಾರೆ.
ಇದನ್ನೂ ಓದಿ: ಮದುವೆಯ ಬಳಿಕವೂ ದೂರವಾದ ಪ್ರೇಮಿಗಳು: ಅಪ್ರಾಪ್ತನೊಂದಿಗೆ 20ರ ಯುವತಿಯ ಮದುವೆಗೆ ಕಾನೂನಿನ ತಡೆ
ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸುವ ಗುರಿ ನಮ್ಮದಾಗಿರುತ್ತದೆ. ಯರ್ಸಾಹಿ ರೈತರು ಕಷ್ಟಪಟ್ಟು ಬೆಳೆ ಬೆಳೆದು ಇತರ ರೈತರಿಗೆ ಮಾದರಿಯಾಗುತ್ತಾರೆ. ಅದರಂತೆ ತಿಪ್ಪಣ್ಣ ಅವರು ಸಹ ತಮ್ಮ ಜಮೀನಿನಲ್ಲಿ ಮಹಾತ್ಮಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಿಂದ ಬಾಳೆ ಬೆಳೆ ನಾಟಿ ಮಾಡಲು ಬೇಕಾದ ಕೆಲಸವನ್ನು ಮಾಡಿಸಿಕೊಂಡಿದ್ದಾರೆ. ಕೊರೋನಾ 2ನೇ ಅಲೆಯಲ್ಲಿ ಅದೆಷ್ಟೋ ರೈತರು ನಷ್ಟ ಅನುಭವಿಸಿದ್ದಾರೆ. ಆದರೆ ತಮ್ಮ ತೋಟದಲ್ಲಿ ಬೆಳೆದ ಬಾಳೆ ಹಣ್ಣು ಮಾರಾಟ ಮಾಡಿ ಉತ್ತಮ ಆದಾಯ ಪಡೆದಿದ್ದಾರೆ ಎನ್ನುತ್ತಾರೆ ಸಹಾಯಕ ತೋಟಗಾರಿಕಾ ಅಧಿಕಾರಿ ಮಹೇಶ ಪಟ್ಟಣಶೆಟ್ಟಿ.
ಕೊರೊನಾ ನಡುವೆ ನಮ್ಮ ಜಮೀನಿನಲ್ಲಿ ಬಾಳೆ ಬೆಳೆದು ನಿವ್ವಳ ಲಾಭ ಪಡೆದಿದ್ದೆನೆ. ಅಲ್ಲದೇ ಸರ್ಕಾರ ಯೋಜನೆಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಬೆಳೆ ಬೆಳೆಯುತ್ತಿದ್ದೇನೆ. ಅದೇ ರೀತಿಯಲಿ ತೋಟಗಾರಿಕೆ ಅಧಿಕಾರಿಗಳು ಸಹ ನಮಗೆ ತುಂಬಾ ಸಹಕಾರ ನೀಡುತ್ತಾರೆ. ಅದರಿಂದಲೇ ನಾನು ಲಾಕ್ ಡೌನ್ ಸಮಯದಲ್ಲಿಯೂ ಸಹ ಬಾಳೆ ಬೆಳೆದು ಲಾಭ ಪಡೆದಿದ್ದೆ ಎನ್ನುತ್ತಾರೆ ರೈತ ತಿಪ್ಪಣ್ಣ.
ಕೊರೊನಾದ ಈ ಸಂಕಷ್ಟದ ದಿನಗಳಲ್ಲಿಯೂ ತೋಟಗಾರಿಕೆ ಬೆಳೆಗಳನ್ನು ಬೆಳೆದು ರೈತರು ಯಶಸ್ಸು ಸಾಧಿಸಿರುವುದು ಮಾದರಿಯಾಗಿದೆ. ಅನೇಕ ರೈತರು ಕೊರೊನಾ ವೇಳೆಯಲ್ಲಿ ತೊಂದರೆಗೆ ಸಿಲುಕಿದ್ದರೆ, ಈ ರೈತ ಮಾತ್ರ ಎಲ್ಲರೂ ಅಚ್ಚರಿಪಡುವಂತೆ ಮಾಡಿರೋದು ಸಂತಸದ ಸಂಗತಿಯೇ ಸರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ