ಮೈಸೂರು; ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಹುಣಸೂರು ಶಾಸಕ ಮಂಜುನಾಥ್ ನಡುವಿನ ಟಾಕ್ ವಾರ್ ತಾರಕಕ್ಕೇರಿದೆ. ನಿನ್ನೆಯಷ್ಟೇ ಡಿಸಿ ವಿರುದ್ಧ ಶಾಸಕ ಮಂಜುನಾಥ್ ಕೆಡಿಪಿ ಸಭೆಯಲ್ಲಿ ಕಿಡಿ ಕಾರಿದ್ರು. ಇದೀಗ ಅದಕ್ಕೆ ಪತ್ರದ ಮೂಲಕ ಉತ್ತರ ನೀಡಿರುವ ರೋಹಿಣಿ ಸಿಂಧೂರಿ ಸಖತ್ ನೇರವಾಗಿಯೇ ಶಾಸಕರಿಗೆ ಟಾಂಗ್ ನೀಡಿದ್ದಾರೆ. ಮೈಸೂರಿನ ಹುಣಸೂರು ಶಾಸಕ ಹೆಚ್.ಪಿ ಮಂಜುನಾಥ್ ನ.24 ರಂದು ಮೈಸೂರಿನ ಜಿಲ್ಲಾಪಂಚಾಯಿತಿ ನಡೆದ ಕೆಡಿಪಿ ಸಭೆಯಲ್ಲಿ ಕೆಂಡಾಮಂಡಲರಾಗಿ ಮೈಸೂರು ಡಿಸಿ ರೋಹಿಣಿ ಸಿಂಧೂರಿ ವಿರುದ್ದ ಆಕ್ರೋಶ ಹೊರಹಾಕಿದ್ದರು. ಹುಣಸೂರು ಕ್ಷೇತ್ರವನ್ನ ಕಡೆಗಣಿಸಿದ್ದಾರೆ, ಶಿಷ್ಟಾಚಾರ ಉಲ್ಲಂಘನೆ ಆಗಿದೆ ಅಂತ ಆರೋಪ ಮಾಡಿದ್ದರು.
ಹೌದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ನೇತೃತ್ವದಲ್ಲಿ ಜಿಲ್ಲಾ ತ್ರೈ ಮಾಸಿಕ ಸಭೆ ನಡೆಸಲಾಗಿತ್ತು. ಸಂಸದ ಪ್ರತಾಪ್ಸಿಂಹ ಶಾಸಕರಾದ ಹೆಚ್.ಪಿ ಮಂಜುನಾಥ್ ಹರ್ಷವರ್ಧನ್ ನಾಗೇಂದ್ರ ಜಿ.ಟಿ. ದೇವೇಗೌಡ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಎಸ್.ಪಿ ರಿಷ್ಯಂತ್ ಸೇರಿ ಹಲವು ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಈ ವೇಳೆ ಹುಣಸೂರು ಶಾಸಕ ಎಚ್ ಪಿ ಮಂಜುನಾಥ್ ಡಿಸಿ ವಿರುದ್ಧ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರ ಹಾಕಿದ್ದರು.
ಅಲ್ಲದೆ ಡಿಸಿ ರೋಹಿಣಿ ಸಿಂಧೂರಿ ವಿರುದ್ದ ಸಚಿವರಿಗೆ ನೇರವಾಗಿ ಮಂಜುನಾಥ್ ದೂರುಗಳ ಸುರಿಮಳೆಯನ್ನೇ ಸುರಿಸಿದ್ದರು. ಸಚಿವ ಎಸ್.ಟಿ.ಸೋಮಶೇಖರ್ ಎದುರು ಜಿಲ್ಲಾಧಿಕಾರಿ ದಸರಾ ಗಜಪಯಣ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಅಭಿವೃದ್ಧಿ ವಿಚಾರವಾಗಿ ಪತ್ರ ಬರೆದರು ಯಾವುದೇ ಸ್ಪಂದನೆ ಇಲ್ಲ ಅಂತ ದೂರು ಹೇಳಿದ್ರು. ಸಭೆಯಿಂದ ಹೊರಬಂದು ಡಿಸಿ ವಿರುದ್ಧ ಕೆಂಡಾಮಂಡಲರಾಗಿದ್ದರು.
ನಮ್ಮ ಕೆಲಸ ಏನು ಆಗ್ತಿಲ್ಲ. ನಮ್ಮನ್ನ ಸಂಪೂರ್ಣ ಕಡೆಗಣಿಸಿ' ಮಹಾರಾಣಿಯಂತೆ ವರ್ತಿಸುತ್ತಿದ್ದಾರೆ. ನಮಗೆ ತ್ರಿಷಿಕಾ ಹಾಗೂ ಪ್ರಮೋದಾ ದೇವಿ ಅವರೇ ಮಹಾರಾಣಿಯರು' ಮೈಸೂರಿಗೆ ಮೂರನೇ ಮಹಾರಾಣಿ ಬೇಡ ಎಂದು ಜರಿದಿದ್ದರು.
ಹುಣಸೂರು ಕ್ಷೇತ್ರದ ಶಾಸಕರ ಆರೋಪಕ್ಕೆ ಡಿಸಿ ರೋಹಿಣಿ ಸಿಂಧೂರಿ ಪತ್ರದ ಮೂಲಕ ಉತ್ತರ ನೀಡಿದ್ದು, ಶಾಸಕರಿಗೆ ತಿರುಗೇಟು ಕೊಟ್ಟಿದ್ದಾರೆ. ಡಿಸಿಗೆ ಶಿಷ್ಟಾಚಾರದ ಪಾಠ ಹೇಳಿದ್ದ ಶಾಸಕರಿಗೆ ಅವರ ವೈಯುಕ್ತಿಕ ವಿಚಾರಗಳನ್ನ ಹೊರತೆಗೆದು ಸಾರ್ವಜನಿಕವಾಗಿ ಮುಜುಗರಕ್ಕಿಡು ಮಾಡಿದ್ದಾರೆ.ನೀವು ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನನಗೆ ಪತ್ರ ಬರೆದಿಲ್ಲ ಬದಲಿಗೆ ನಿಮ್ಮ ಭೂ ಪರಿವರ್ತನಾ ಅರ್ಜಿಗಳು ಮಾತ್ರ ನನ್ನ ಕಚೇರಿಯಲ್ಲಿವೆ ಅನ್ನೋ ಮೂಲಕ ವೈಯುಕ್ತಿಕ ಅರ್ಜಿಗಳ ಮನ್ನಣೆ ನೀಡುವುದಿಲ್ಲ ಎಂದು ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪತ್ರದ ಪ್ರಮುಖ ಅಂಶಗಳು ಹೀಗಿವೆ.
1- ಕ್ಷೇತ್ರದ ಅಭಿವೃದ್ಧಿ ಕಾರ್ಯ ಕುರಿತ ಯಾವ ಪತ್ರಗಳು ತಮ್ಮಿಂದ ಬಂದಿಲ್ಲ.
2- ನಿಮ್ಮ ವೈಯಕ್ತಿಕ ಹೆಸರಿನಲ್ಲಿ ಹಲವು ಅರ್ಜಿ ಗಳಿವೆ.
3- ಅವು ಮೈಸೂರು ತಾಲೂಕಿನಲ್ಲಿ ಕೇರ್ಗಳಿ ಗ್ರಾಮದ ಹಲವು ಸರ್ವೆ ನಂಬರ್ ಗಳ ಭೂ ಪರಿವರ್ತನೆ ಅರ್ಜಿಗಳು.
4- ಆ ಅರ್ಜಿಗಳ ವಿಲೇವಾರಿ ಕಾನೂನು ಪ್ರಕಾರ ಮಾಡುತ್ತೇವೆ.
5- ಗಜಪಯಣದಲ್ಲಿ ಯಾವುದೇ ಶಿಷ್ಟಚಾರ ಉಲ್ಲಂಘನೆ ಆಗಿಲ್ಲ.
6- ದಸರಾ ಉನ್ನತ ಸಮಿತಿ ಸಭೆ ತೀರ್ಮಾನದಂತೆ ನಡೆದು ಕೊಳ್ಳಲಾಗಿದೆ.
7- ಹುಣಸೂರಿಗೆ ಪ್ರಗತಿ ಪರಿಶೀಲನೆಗೆ ಭೇಟಿ ನೀಡಿದ್ದಾಗ ತಾವು ಅನಾರೋಗ್ಯದಿಂದ ಇದ್ದ ಕಾರಣ ನಿಮ್ಮ ಜೊತೆ ಚರ್ಚೆ ಸಾಧ್ಯವಾಗಿಲ್ಲ.
8- ಕೆಡಿಪಿ ಸಭೆಯಲ್ಲಿ ನೀವು ನೀಡಿರುವ ಹೇಳಿಕೆ ಯಾರಿಗೂ ಶೋಭೆ ತರುವುದಿಲ್ಲ.
9- ಹೇಳಿಕೆ ನೀಡುವ ಮುನ್ನ ವಾಸ್ತವಾಂಶ ಗಮನಿಸಿ ಹೇಳಿಕೆ ನೀಡಿ.
ಇದನ್ನೂ ಓದಿ : ಒಂದು ರಾಷ್ಟ್ರ, ಒಂದು ಚುನಾವಣೆ; ಮತ್ತೊಮ್ಮೆ ತಮ್ಮ ಮನದ ಇಂಗಿತವನ್ನು ಹೊರಹಾಕಿದ ಪ್ರಧಾನಿ ಮೋದಿ
ಈಗಂತ ಡಿಸಿ ರೋಹಿಣಿ ಸಿಂಧೂರಿ ಶಾಸಕ ಹೆಚ್.ಪಿ ಮಂಜುನಾಥ್ ಅವರಿಗೆ ನೇರವಾಗಿ ಪತ್ರ ಬರೆದಿದ್ದಾರೆ. ಈ ಹಿಂದೆ ಶಾಸಕ ಸಾ.ರಾ ಮಹೇಶ್ ಸಹಾ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ದ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು. ಆಗಲೂ ರೋಹಿಣಿ ಸಿಂಧೂರಿ ಪತ್ರಿಕಾ ಪ್ರಕಟಣೆಯ ಮೂಲಕ ಉತ್ತರ ನೀಡಿದ್ದರು. ಈಗ ಒಂದು ಹೆಜ್ಜೆ ಮುಂದೆ ಹೋಗಿ ನೇರವಾಗಿ ಶಾಸಕರಿಗೆ ಪತ್ರ ಬರೆದು ಅವರ ಭೂ ಪರಿವರ್ತನಾ ಅರ್ಜಿಗಳ ವಿಚಾರವನ್ನ ಸಾರ್ವಜನಿಕವಾಗಿ ಚರ್ಚೆಗೆ ಈಡಾಗುವಂತೆ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ