ದಾವಣಗೆರೆ: ಕೇಂದ್ರೀಯ ಗೃಹ ಮಂತ್ರಾಲಯದ ಆದೇಶ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿರ್ದೇಶನದನ್ವಯ ಕಂಟೈನ್ಮೆಂಟ್ ವಲಯಗಳಲ್ಲಿ ಲಾಕ್ಡೌನ್ ಅವಧಿಯನ್ನು ವಿಸ್ತರಿಸಲು ಹಾಗೂ ಕಂಟೈನ್ಮೆಂಟ್ ವಲಯಗಳ ಹೊರಗಿನ ಪ್ರದೇಶಗಳಲ್ಲಿ ಹೆಚ್ಚಿನ ಚಟುವಟಿಕೆಗಳನ್ನು ಪುನಃ ಆರಂಭಿಸಲು ತೆರವು-3 ಮಾರ್ಗಸೂಚಿಗಳನ್ನು ಹೊರಡಿಸಿದ್ದು ಈ ಮಾರ್ಗಸೂಚಿ ಆ.31 ರವರೆಗೆ ಜಾರಿಯಲ್ಲಿರುತ್ತದೆ.
ವಿಪತ್ತು ನಿರ್ವಹಣಾ ಕಾಯ್ದೆ 2005 ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧ್ಯಕ್ಷರಾದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಕೆಳಕಂಡಂತೆ ತೆರವು -3ರ ಮಾರ್ಗಸೂಚಿ ಹೊರಡಿಸಿದ್ದು ಇದು ಆ.1 ರಿಂದ ಆ.31 ರವರೆಗೆ ಚಾಲ್ತಿಯಲ್ಲಿರುತ್ತದೆ. ಇದನ್ನು ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಇಲಾಖಾ ಮುಖ್ಯಸ್ಥರುಗಳು ಕಟ್ಟುನಿಟ್ಟಾಗಿ ಅನುಷ್ಟಾನಗೊಳಿಸತಕ್ಕದ್ದು ಎಂದು ಅವರು ಆದೇಶಿಸಿದ್ದಾರೆ.
ಕಂಟೈನ್ಮೆಂಟ್ ವಲಯಗಳನ್ನು ಹೊರತುಪಡಿಸಿದ ಪ್ರದೇಶಗಳಲ್ಲಿ ತೆರವು-3ರ ಅವಧಿಯಲ್ಲಿ ಅನುಮತಿಸಲಾದ ಚಟುವಟಿಕೆಗಳು:
ಕಂಟೈನ್ಮೆಂಟ್ ವಲಯಗಳಲ್ಲದ ಪ್ರದೇಶಗಳಲ್ಲಿ ಏನೇನು ಅನುಮತಿ ಇಲ್ಲ?
ಶಾಲಾ-ಕಾಲೇಜುಗಳು, ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು
ಚಿತ್ರಮಂದಿರ, ಈಜುಕೊಳ, ಮನೋರಂಜನಾ ಪಾರ್ಕ್, ಬಾರ್, ಸಭಾಂಗಣ, ಅಸೆಂಬ್ಲಿ ಹಾಲ್ ಮೊದಲಾದವುಗಳು.
ಆನ್ಲೈನ್ ಮತ್ತು ದೂರ ಶಿಕ್ಷಣ ಕಲಿಕೆಗಳಿಗೆ ಅನುಮತಿ ಮುಂದುವರಿಯುತ್ತದೆ. ಯೋಗಕೇಂದ್ರಗಳು ಮತ್ತು ಜಿಮ್ಗಳನ್ನ ತೆರೆಯಲು ಆ. 5ರಿಂದ ಅನುಮತಿ ಇದೆ. ಇದಕ್ಕೆ ಪ್ರತ್ಯೇಕ ನಿಯಮಗಳನ್ನ ರೂಪಿಸಲಾಗುವುದು ಎಂದು ದಾವಣಗೆರೆ ಜಿಲ್ಲಾಡಳಿತ ತಿಳಿಸಿದೆ.
ಸ್ವಾತಂತ್ರ್ಯ ದಿನಾಚರಣೆ: ಸ್ವಾತಂತ್ರ್ಯ ದಿನಾಚರಣೆಯನ್ನು ಜಿಲ್ಲೆ, ಉಪವಿಭಾಗ, ತಾಲ್ಲೂಕುಗಳು, ಮುನ್ಸಿಪಲ್ ಮತ್ತು ಪಂಚಾಯತ್ ವ್ಯಾಪ್ತಿಯಲ್ಲಿ ಹಾಗೂ ಮನೆಗಳಲ್ಲಿ ಸಾಮಾಜಿಕ ಅಂತರ ಮತ್ತಿತರ ಆರೋಗ್ಯ ಶಿಷ್ಟಾಚಾರ ಪಾಲನೆಯೊಂದಿಗೆ ಆಚರಿಸಬಹುದು.
ಇದನ್ನೂ ಓದಿ: ಕೋಟೆನಾಡಲ್ಲಿ ಗಣೇಶಮೂರ್ತಿ ತಯಾರಕರಿಗೆ ತಟ್ಟಿದ ಕೊರೋನಾ ಬಿಸಿ; ವಿಘ್ನ ನಿವಾರಕನ ಪೂಜೆಗೆ ಸಂಕಷ್ಟ
ಕಂಟೈನ್ಮೆಂಟ್ ವಲಯಗಳಿಗೆ ಸೀಮಿತವಾದ ಲಾಕ್ಡೌನ್:
ಕಂಟೈನ್ಮೆಂಟ್ ವಲಯಗಳಲ್ಲಿನ ಲಾಕ್ ಡೌನ್ ಆ.31 ರವರೆಗೆ ಮುಂದುವರೆಯುತ್ತದೆ. ಸೋಂಕಿನ ಪ್ರಸರಣ ಸರಪಳಿಯನ್ನು ಪರಿಣಾಮಕಾರಿಯಾಗಿ ಮುರಿಯುವ ಉದ್ದೇಶದಿಂದ ಆರೋಗ್ಯ ಕುಟುಂಬ ಕಲ್ಯಾಣ ಮಂತ್ರಾಲಯ ಹಾಗೂ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳು ಹೊರಡಿಸುವ ಮಾರ್ಗಸೂಚಿಯನ್ನು ಪರಿಗಣನೆಗೆ ತೆಗೆದುಕೊಂಡ ನಂತರ ಜಿಲ್ಲಾಧಿಕಾರಿಗಳು/ಸಂಬಂಧಿಸಿದ ಇಲಾಖೆಗಳು ವೆಬ್ಸೈಟ್ನಲ್ಲಿ ಪ್ರಕಟಿಸಿ ಈ ಮಾಹಿತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದೊಂದಿಗೆ ಹಂಚಿಕೊಳ್ಳುವುದು.
ಕೋವಿಡ್ 19 ನಿರ್ವಹಣೆಗೆ ರಾಷ್ಟ್ರೀಯ ನಿರ್ದೇಶನಗಳು :
ಮಾಸ್ಕ್: ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಕೆಲಸದ ಸ್ಥಳಗಳಲ್ಲಿ ಮತ್ತು ಪ್ರಯಾಣದ ಸಮಯದಲ್ಲಿ ಮುಖದ ಹೊದಿಕೆಯನ್ನು ಧರಿಸುವುದು ಕಡ್ಡಾಯವಾಗಿದೆ. ಅಗತ್ಯಾನುಸಾರ ಮಾಸಕ್ ಧರಿಸದಿದ್ದಲ್ಲಿ ನಗರ ಪ್ರದೇಶಗಳಲ್ಲಿ ರೂ.200 ಮತ್ತು ಇನ್ನುಳಿದ ಪ್ರದೇಶಗಳಲ್ಲಿ ರೂ.100 ದಂಡ ವಿಧಿಸತಕ್ಕದ್ದು.
ಸಾಮಾಜಿಕ ಅಂತರ: ಪ್ರತಿಯೊಬ್ಬರೂ ಸಾರ್ವಜನಿಕ ಸ್ಥಳಗಳಲ್ಲಿ ಕನಿಷ್ಟ 6 ಅಡಿ ಅಂತರವನ್ನು (2 ಗಜ ಅಂತರ) ಕಾಯ್ದುಕೊಳ್ಳಬೇಕು. ಗ್ರಾಹಕರಲ್ಲಿ ದೈಹಿಕ ಅಂತರ ಇರುವುದನ್ನು ಅಂಗಡಿಗಳು ಖಚಿತಪಡಿಸಿಕೊಳ್ಳತಕ್ಕದ್ದು. ಮದುವೆ ಸಂಬಂಧಿತ ಕೂಟಗಳಲ್ಲಿ ಅತಿಥಿಗಳ ಸಂಖ್ಯೆ 50 ಕ್ಕೆ ಮೀರಿರಬಾರದು. ಶವ ಸಂಸ್ಕಾರ/ಅಂತಿಮ ವಿಧಿ ಸಂಬಂಧಿತ ಕಾರ್ಯಗಳಲ್ಲಿ ವ್ಯಕ್ತಿಗಳ ಸಂಖ್ಯೆ 20 ಕ್ಕೆ ಮೀರಿರಬಾರದು.
ಸ್ಥಳೀಯ ಪ್ರಾಧಿಕಾರಿಗು ಅದರ ಕಾನೂನು ನಿಯಮ ಮತ್ತು ನಿಬಂಧನೆಗಳಲ್ಲಿ ತಿಳಿಸಿರುವಂತೆ ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದು ದಂಡನಾರ್ಹ ಶಿಕ್ಷೆಯಾಗಿರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಪಾನ್, ಗುಟ್ಕಾ, ತಂಬಾಕು ಇತ್ಯಾದಿಗಳ ಬಳಕೆಯನ್ನು ನಿಷೇಧಿಸಿದೆ.
ಕೆಲಸದ ಸ್ಥಳಗಳಲ್ಲಿ ಹೆಚ್ಚುವರಿ ನಿರ್ದೇಶನಗಳು: ಮನೆಯಿಂದ ಕೆಲಸ ಸಾಧ್ಯವಾದಷ್ಟು ಮಟ್ಟಿಗೆ ಮನೆಯಿಂದಲೇ ಕೆಲಸ ಮಾಡುವ ಪದ್ದತಿಯನ್ನು ಅನುಸರಿಸಬೇಕು.
ಕೆಲಸದಲ್ಲಿ ಪಾಳಿಯ ಪದ್ದತಿ/ವ್ಯವಹಾರ ಸಮಯ: ಕಚೇರಿಗಳಲ್ಲಿ ಕೆಲಸದ ಸ್ಥಳಗಳಲ್ಲಿ ಅಂಗಡಿಗಳಲ್ಲಿ ಮಾರುಕಟ್ಟೆಗಳಲ್ಲಿ ಮತ್ತು ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ/ವ್ಯವಹಾರದ ಸಮಯದಲ್ಲಿ ಪಾಳಿಯ ಪದ್ದತಿಯನ್ನು ಅನುಸರಿಸುವುದು.
ಸ್ಕ್ರೀನಿಂಗ್ ಮತ್ತು ನೈರ್ಮಲ್ಯ: ಎಲ್ಲಾ ಸಾಮಾನ್ಯ ಪ್ರದೇಶಗಳಲ್ಲಿ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್, ಕೈ ತೊಳೆಯುವುದಕ್ಕೆ ಮತ್ತು ಸ್ಯಾನಿಟೈಸರ್ಗೆ ಅವಕಾಶ ಕಲ್ಪಿಸುವುದು.
ನಿಯಮಿತ ಸ್ಯಾನಿಟೈಸೇಷನ್: ಕೆಲಸದ ಸಂಪೂರ್ಣ ಆವರಣ ಸಾಮಾನ್ಯ ಸೌಲಭ್ಯಗಳು ಮತ್ತು ಮಾನವ ಸಂಪರ್ಕಕ್ಕೆ ಬರುವ ಎಲ್ಲಾ ಅಂಶಗಳಿಗೆ ಆಗಾಗ್ಗೆ ನೈರ್ಮಲ್ಯೀಕರಣ ಮಾಡತಕ್ಕದು(ಉದಾ: ಬಾಗಿಲ ಹಿಡಿಕೆಗಳು, ಇತ್ಯಾದಿ) ಇದನ್ನು ಕೆಲಸದ ಪಾಳಿಯ ಮಧ್ಯದಲ್ಲಿ ಸಹ ಖಾತರಿಪಡಿಸಿಕೊಳ್ಳುವುದು.
ಸಾಮಾಜಿಕ ಅಂತರ: ಕೆಲಸದ ಸ್ಥಳದಲ್ಲಿ ವ್ಯಕ್ತಿಗಳ ನಡುವೆ ಪಾಳಿಗಳ ನಡುವೆ, ಊಟದ ವಿರಾಮ ಮೊದಲಾದವುಗಳಲ್ಲಿ ಎಲ್ಲಾ ವ್ಯಕ್ತಿಗಳು ಸಾಕಷ್ಟು ಅಂತರವನ್ನು ಕಾಯ್ದುಕೊಂಡಿರುವ ಬಗ್ಗೆ ಮೇಲ್ವಿಚಾರಕರು ಖಾತರಿಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ದಂಡ: ಕೋವಿಡ್ 19 ನಿರ್ವಹಣೆಯ ಲಾಕ್ಡೌನ್ ಕ್ರಮಗಳನ್ನು ರಾಷ್ಟ್ರೀಯ ನಿರ್ದೇಶನಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯು, ವಿಪತ್ತು ನಿರ್ವಹಣಾ ಅಧಿನಿಯಮ 2005 ರ ಸೆಕ್ಷನ್ 51 ರಿಂದ 60 ಉಪಬಂಧಗಳು, ಅಲ್ಲದೇ ಭಾರತೀಯ ದಂಡ ಸಂಹಿತೆ ಸೆಕ್ಷನ್ 188 ರ ಅಡಿಯಲ್ಲಿನ ಕಾನೂನು ಕ್ರಮ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಮೇರೆಗೆ ಅವರ ವಿರುದ್ದ ಕ್ರಮ ಜರುಗಿಸಬಹುದು ಎಂದು ದಾವಣಗೆರೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಹೆಚ್ ಎಂ ಪಿ ಕುಮಾರ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ