ತಲಕಾವೇರಿಯಲ್ಲಿ ಪೂಜಾ ವಿಧಿವಿಧಾನಕ್ಕೆ ಮತ್ತೆ ಚಾಲನೆ ; ಕೇರಳದ ತಂತ್ರಿ ಪದ್ಮನಾಭ ಮಾರ್ಗದರ್ಶನದಲ್ಲಿ ಪೂಜೆ
ಮೊದಲು ಪವಿತ್ರ ಬ್ರಹ್ಮ ಕುಂಡಿಕೆಯಿಂದ ತೀರ್ಥ ತಂದು ಅಗಸ್ತೇಶ್ವರ ಶಿವಲಿಂಗಕ್ಕೆ ಮಜ್ಜನ ಮಾಡಲಾಯಿತು. ಎಲ್ಲಾ ಶುದ್ಧಿಯ ಬಳಿಕ ವಿಘ್ನೇಶ್ವರ ಮತ್ತು ಅಗಸ್ತೇಶ್ವರನಿಗೆ ಪೂಜೆ ಸಲ್ಲಿಸಲಾಯಿತು
ಕೊಡಗು(ಆಗಸ್ಟ್.14) : ತಲಕಾವೇರಿಯಲ್ಲಿ ಬ್ರಹ್ಮಗಿರಿ ಬೆಟ್ಟಸಾಲಿನ ಗಜಗಿರಿ ಬೆಟ್ಟ ಕುಸಿದಿದ್ದರಿಂದ ಇದೇ ಮೊದಲ ಬಾರಿಗೆ ಎಂಟು ದಿನಗಳವರೆಗೆ ಸ್ಥಗಿತಗೊಂಡಿದ್ದ ನಿತ್ಯ ಪೂಜಾ ವಿಧಾನಗಳು ತಂತ್ರಿಗಳಿಗೆ ಇಂದು ಮತ್ತೆ ಚಾಲನೆ ನೀಡಲಾಗಿದೆ. ಕೇರಳದ ತಂತ್ರಿ ಪದ್ಮನಾಭ ಅವರ ಮಾರ್ಗದರ್ಶನದಂತೆ ಮತ್ತೆ ನೆರವೇರಿಸಲಾಯಿತು.
ಆಗಸ್ಟ್ 5 ರಂದು ಘಟಿಸಿದ್ದ ದುರ್ಘಟನೆಯಿಂದ ಇಲ್ಲಿ ಪೂಜೆ ಮಾಡುತ್ತಿದ್ದ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಕುಟುಂಬವೇ ಕಣ್ಮರೆಯಾಗಿತ್ತು. ಅಲ್ಲದೆ ಭಾಗಮಂಡಲದಿಂದ ತಲಕಾವೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮರಗಳು ಹಾಗೂ ಅಲ್ಲಲ್ಲಿ ಗುಡ್ಡ ಕುಸಿದಿದ್ದರಿಂದ ಸುಮಾರು 8 ದಿನಗಳಿಂದ ಪೂಜೆಯನ್ನು ನಿಲ್ಲಿಸಲಾಗಿತ್ತು. ಪ್ರಸ್ತುತ ದಾರಿ ತೆರವಾಗಿದ್ದು, ಕೇರಳ ಮೂಲದ ತಂತ್ರಿಗಳ ಮಾರ್ಗದರ್ಶನದಂತೆ ನಿತ್ಯ ಪೂಜೆಗೆ ಇದ್ದಂತಹ ದೋಷಗಳನ್ನು ನಿವಾರಿಸಲಾಗಿದೆ.
ಪುಣ್ಯ, ಗಣಹೋಮ, ಏಕರುದ್ರಾಭೀಷೇಕ ಹಾಗೂ ದೋಷ ಪರಿಹಾರ ಪೂಜೆಗಳನ್ನು ನೆರವೇರಿಸಿ ನಿತ್ಯಪೂಜೆಗೆ ಅನುವು ಮಾಡಿಕೊಡಲಾಗಿದೆ. ಮೊದಲು ಪವಿತ್ರ ಬ್ರಹ್ಮ ಕುಂಡಿಕೆಯಿಂದ ತೀರ್ಥ ತಂದು ಅಗಸ್ತೇಶ್ವರ ಶಿವಲಿಂಗಕ್ಕೆ ಮಜ್ಜನ ಮಾಡಲಾಯಿತು. ಎಲ್ಲಾ ಶುದ್ಧಿಯ ಬಳಿಕ ವಿಘ್ನೇಶ್ವರ ಮತ್ತು ಅಗಸ್ತೇಶ್ವರನಿಗೆ ಪೂಜೆ ಸಲ್ಲಿಸಲಾಯಿತು.
ನಂತರ ಪವಿತ್ರ ಬ್ರಹ್ಮಕುಂಡಿಕೆಯಲ್ಲಿ ತೀರ್ಥ ರೂಪಿಣಿ ಕಾವೇರಿಗೆ ಪೂಜೆ ಸಲ್ಲಿಸಲಾಯಿತು. ಆ ಮೂಲಕ ಎಂಟು ದಿನಗಳಿಂದ ಸ್ಥಗಿತಗೊಂಡಿದ್ದ ತಲಕಾವೇರಿ ದೇವಾಲಯದ ಪೂಜೆ ಪುನರ್ ಆರಂಭವಾಗಿದೆ.
ಇನ್ನು ದೈನಂದಿನ ಪೂಜೆಯ ಜೊತೆಗೆ ಇಷ್ಟು ದಿನಗಳು ಪೂಜೆ ಮಾಡದೇ ಉಳಿದಿರುವ ನೈವೇದ್ಯವನ್ನು ನಿತ್ಯವೂ ಮಾಡಲಾಗುವುದು. ಇದೊಂದು ಪವಿತ್ರ ಧಾರ್ಮಿಕ ಕ್ಷೇತ್ರವಾದ್ದರಿಂದ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯಾಗದಂತೆ ಎಲ್ಲವನ್ನೂ ಹಿರಿಯರ ಮಾರ್ಗದರ್ಶನದಂತೆ ಮಾಡಿ ನೆರವೇರಿಸಲಾಗಿದೆ ಎಂದು ವಿರಾಜಪೇಟೆ ಶಾಸಕ ಕೆ ಜಿ ಬೋಪಯ್ಯ ಮತ್ತು ತಲಕಾವೇರಿ ದೇವಾಲಯದ ಮುಖ್ಯಸ್ಥ ಮೋಟಯ್ಯ ತಿಳಿಸಿದ್ದಾರೆ.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ