ರೈತರಿಂದಲೇ ಬೆಳೆ ಹಾನಿ ಸಮೀಕ್ಷೆ ದೇಶದಲ್ಲಿ ಮೊದಲು : ಕೃಷಿ ಸಚಿವ ಬಿ ಸಿ ಪಾಟೀಲ್
ರಾಜ್ಯದಲ್ಲಿ ಈ ವರೆಗೆ 78 ಲಕ್ಷ 27 ಸಾವಿರ ರೈತರು ತಮ್ಮ ಜಮೀನಿನಲ್ಲಿ ತಾವೇ ಬೆಳೆ ಹಾನಿ ಬಗ್ಗೆ ಸಮೀಕ್ಷೆ ಮಾಡಿ ದಾಖಲು ಮಾಡಿದ್ದಾರೆ. ನೆಟ್ವರ್ಕ್ ಸಮೀಕ್ಷೆ ಇರುವ ಕಡೆಗಳಲ್ಲಿ ಅಧಿಕಾರಿಗಳು ಸಮೀಕ್ಷೆಯನ್ನು ನಡೆಸಲಿದ್ದಾರೆ.
ಬೆಳಗಾವಿ(ಸೆಪ್ಟೆಂಬರ್. 14): ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಇಂದು ಕೃಷಿ ಇಲಾಖೆಯ ಬೆಳಗಾವಿ ವಿಭಾಗದ ಅಧಿಕಾರಿಗಳ ಸಭೆ ನಡೆಯಿತು. ಸಚಿವ ಬಿ. ಸಿ ಪಾಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಳೆ, ಭಿತ್ತನೆ ಹಾಗೂ ಗೊಬ್ಬರ ಪೂರೈಕೆ ಬಗ್ಗೆ ಚರ್ಚೆ ನಡೆಸಲಾಯಿತು. ಈ ವರ್ಷದ ಬೆಳೆ ಹಾನಿ ಬಗ್ಗೆ ರೈತರಿಂದಲೇ ಸಮೀಕ್ಷೆ ನಡೆಸಲಾಗಿದ್ದು, ಇದು ದೇಶದಲ್ಲಿ ಮೊದಲ ಪ್ರಯೋಗ ಎಂದು ಸಚಿವ ಬಿ ಸಿ ಪಾಟೀಲ್ ಹೇಳಿದರು. ರೈತರ ಆತ್ಮವಿಶ್ವಾಸ, ಸ್ವಾಭಿಮಾನದಿಂದ ತನ್ನ ಬೆಳೆಯ ಹಾನಿಯ ಬಗ್ಗೆ ತಾನೇ ದೃಢೀಕರಿಸುತ್ತಿರುವುದು ಇದೇ ಮೊದಲು. ಈ ಹಿಂದೆ ಅಧಿಕಾರಿಗಳಿಂದ ಅನೇಕ ರೀತಿಯ ಸಮೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಇದರಲ್ಲಿ ಅನೇಕ ಏರುಪೇರುಗಳು ಬರುತ್ತಿದ್ದವು. ಬೆಂಬಲ ಬೆಲೆ ಸಂದರ್ಭದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತಿದ್ದವು. ರೈತರು ಮಾಡುವ ಸಮೀಕ್ಷೆಯನ್ನು ಸರ್ಕಾರ ನಂಬಲಿದೆ. ಇದು ಭಾರತ ದೇಶದಲ್ಲಿ ಪ್ರಥಮ ಪ್ರಯೋಗವಾಗಿದೆ.
ರಾಜ್ಯದಲ್ಲಿ ಈ ವರೆಗೆ 78 ಲಕ್ಷ 27 ಸಾವಿರ ರೈತರು ತಮ್ಮ ಜಮೀನಿನಲ್ಲಿ ತಾವೇ ಬೆಳೆ ಹಾನಿ ಬಗ್ಗೆ ಸಮೀಕ್ಷೆ ಮಾಡಿ ದಾಖಲು ಮಾಡಿದ್ದಾರೆ. ನೆಟ್ವರ್ಕ್ ಸಮೀಕ್ಷೆ ಇರುವ ಕಡೆಗಳಲ್ಲಿ ಅಧಿಕಾರಿಗಳು ಸಮೀಕ್ಷೆಯನ್ನು ನಡೆಸಲಿದ್ದಾರೆ. ಈ ಬಗ್ಗೆ ಅಧಿಕಾರಿಗಳು ವರದಿಯನ್ನು ನೀಡಲಿದ್ದಾರೆ. ಮುಂಗಾರು ಬೆಳೆ 16.95 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಬೇಡಿಕೆ ಇತ್ತು. ಆದರೆ, ಸರ್ಕಾರ 21.78 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಹೆಚ್ಚುವರಿಯಾಗಿ ನೀಡಿದೆ. ಇನ್ನೂ ಯೂರಿಯಾ ಗೊಬ್ಬರ 5.97 ಲಕ್ಷ ಮೆಟ್ರಿಕ್ ಟನ್, 8.3 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಪೂರೈಕೆ ಮಾಡಲಾಗಿದೆ. ರಾಜ್ಯದಲ್ಲಿ ಎಲ್ಲಿಯೂ ಗೊಬ್ಬರದ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ಗೊಬ್ಬರನ್ನು ದಾಸ್ತಾನು ಮಾಡಿಕೊಂಡು ಹೆಚ್ಚಿನ ಬೆಲೆಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದು, 117 ಅಂಗಡಿಗಳ ಮೇಲೆ ದಾಳಿ ಮಾಡಲಾಗಿದೆ. ಅಂಗಡಿ ಲೈಸನ್ಸ್ ರದ್ದು ಮಾಡಿ, ಮಾಲೀಕರ ಮೇಲೆ ಕ್ರಿಮಿನಲ್ ಕೇಸ್ ಸಹ ದಾಖಲು ಮಾಡಲಾಗಿದೆ ಎಂದರು.
ರಾಜ್ಯದಲ್ಲಿ 733 ಮಿ, ಮೀ ವಾಡಿಕೆ ಮಳೆಯಾಗಬೇಕಿತ್ತು, ಆದರೇ 818 ಮಿ.ಮೀ ಮಳೆಯಾಗಿದೆ. ಶೇ 11ರಷ್ಟು ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಳವಾಗಿದೆ. ಶೇ 104ರಷ್ಟು ಭೂಮಿಯಲ್ಲಿ ದಾಖಲೆಪ್ರಮಾಣದಲ್ಲಿ ಬಿತ್ತನೆಯಾಗಿದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದ್ದಾರೆ.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ