ಕಾರವಾರ: ಮೊಸಳೆ ಬಂತು ಮೊಸಳೆ...ಗ್ರಾಮದಲ್ಲಿ ಏಕಾಏಕಿ ಪ್ರತ್ಯಕ್ಷ...ಬೃಹತ್ ಗಾತ್ರದ ಮೊಸಳೆಯೊಂದು ಜನವಸತಿ ಪ್ರದೇಶವಾದ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕೋಗಿಲಬನ ಗ್ರಾಮದಲ್ಲಿ ಪ್ರತ್ಯಕ್ಷವಾಗಿ ಆತಂಕ ಮೂಡಿಸಿತ್ತು. ಸುಮಾರು ಅರ್ಧಗಂಟೆಗೂ ಅಧಿಕ ಕಾಲ ಕೋಗಿಲಬನ ಗ್ರಾಮದಲ್ಲಿ ಮೊಸಳೆ ರಾಜಾರೋಷವಾಗಿ ತಿರುಗಾಡಿದ್ದು ಅದೃಷ್ಟವಶಾತ್ ಯಾರ ಮೇಲೂ ದಾಳಿ ನಡೆಸಿಲ್ಲ. ಮೊಸಳೆ ಗ್ರಾಮದಲ್ಲಿ ತಿರುಗಾಡಿದ್ದನ್ನ ಸ್ಥಳೀಯರು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಮೊಸಳೆಯೊಂದು ಈ ರೀತಿ ಗ್ರಾಮಕ್ಕೆ ಆಗಮಿಸಿರುವುದು ಸ್ಥಳೀಯರಲ್ಲಿ ಅಚ್ಚರಿಗೂ ಕಾರಣವಾಗಿದೆ. ಗ್ರಾಮದ ಸಮೀಪಲ್ಲಿರುವ ಕಾಳಿ ನದಿಯಿಂದ ಮೊಸಳೆ ಗ್ರಾಮಕ್ಕೆ ಆಗಮಿಸಿತ್ತು. ಬಳಿಕ ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದು ಸಿಬ್ಬಂದಿ ಆಗಮಿಸಿ ಮೊಸಳೆಯನ್ನ ಸುರಕ್ಷಿತವಾಗಿ ಮತ್ತೆ ನದಿಗೆ ಸೇರಿಸಿದ್ದಾರೆ.
ದಾಂಡೇಲಿ ತಾಲೂಕಿನತ ಕೋಗಿಲಬನ ಎನ್ನುವ ಗ್ರಾಮಕ್ಕೆ ಬೆಳ್ಳಂಬೆಳಗ್ಗೆ ಮೊಸಳೆಯೊಂದು ಆಗಮಿಸಿತ್ತು. ಈ ಅಪರೂಪದ ಘಟನೆ ಇದೆ ಮೊದಲು ನಡೆದಿದೆ. ಕಾಳಿ ನದಿ ದಡದಲ್ಲಿಯೇ ಇರುವ ಕೋಗಿಲಬನ ಗ್ರಾಮಕ್ಕೆ ಆಗಮಿಸಿದ ಮೊಸಳೆ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಗ್ರಾಮದ ರಸ್ತೆ ತುಂಬಾ ತಿರುಗಾಡಿ ಜನರಲ್ಲಿ ಆತಂಕ ಸೃಷ್ಟಿಸಿತ್ತು.
ದಾಂಡೇಲಿಯಲ್ಲಿ ಹರಿಯುವ ಕಾಳಿ ನದಿಯಲ್ಲಿ ಸಾಕಷ್ಟು ಮೊಸಳೆಗಳಿವೆ. ಈ ಹಿಂದೆ ಮೊಸಳೆ ಪಾರ್ಕ್ನ್ನು ಸಹ ಈ ಜಾಗದಲ್ಲಿ ಮಾಡಿದ್ದು, ಸಾಕಷ್ಟು ಪ್ರವಾಸಿಗರು ಆಗಮಿಸುತ್ತಿದ್ದರು. ಆದರೆ ಹತ್ತು ವರ್ಷಗಳ ಹಿಂದೆ ಮೊಸಳೆ ಪಾರ್ಕ ಬಳಿ ಗಲಾಟೆಯೊಂದು ನಡೆದು ಕೊನೆಗೆ ಪ್ರವಾಸಿಗರಿಗೆ ಮೊಸಳೆ ನೋಡಲು ಅವಕಾಶ ಬಂದ್ ಮಾಡಲಾಗಿತ್ತು. ಇಂದಿಗೂ ಕಾಳಿ ನದಿಯ ಕೆಲ ಭಾಗದಲ್ಲಿ ಮೊಸಳೆ ಕಂಡು ಬರಲಿದ್ದು, ಕಾಳಿ ನದಿಯಿಂದಲೇ ದಿಕ್ಕು ತಪ್ಪಿ ಗ್ರಾಮಕ್ಕೆ ಲಗ್ಗೆ ಇಟ್ಟಿದೆ ಎನ್ನಲಾಗಿದೆ. ಇಲ್ಲಿನ ಮೊಸಳೆ ಮನುಷ್ಯರ ಮೇಲೆ ದಾಳಿ ಮಾಡಿದ ಇತಿಹಾಸ ಇಲ್ಲ. ಹೀಗಾಗಿ ಇವನ್ನ ಮಾನವ ಸ್ನೇಹಿ ಮೊಸಳೆ ಅಂತಾನೆ ಕರೆಯುತ್ತಾರೆ. ಇನ್ನು ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಬಂದು ಮೊಸಳೆಯನ್ನ ಮತ್ತೆ ಕಾಳಿ ನದಿ ಕಡೆಗೆ ಹೋಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.
View this post on Instagram
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ