ಕೋಲಾರ: ರಾಜ್ಯ ರಾಜಧಾನಿ ಬೆಂಗಳೂರಿನ ಕೂಗಳತೆ ದೂರದಲ್ಲಿ ಇರುವ ಕೋಲಾರ ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ಕೇಸ್ ಸಂಖ್ಯೆ ಹೆಚ್ಚುತ್ತಿದೆ, 3 ವಾರಗಳ ಹಿಂದೆ ಕೇವಲ 30 ರ ಆಸುಪಾಸಲ್ಲಿದ್ದ ಸೋಂಕಿತರ ಸಂಖ್ಯೆ ಇದೀಗ 500 ರ ಗಡಿದಾಟಿದೆ, ಕಳೆದೆರಡು ವಾರದಿಂದ ಪ್ರತಿದಿನ ಸೋಂಕಿತರ ಸಂಖ್ಯೆ ನೂರರ ಗಡಿದಾಟುತ್ತಿದೆ.
ಏಪ್ರಿಲ್ 22 ರಂದು ಜಿಲ್ಲಾ ಆರೋಗ್ಯ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಕೋಲಾರದಲ್ಲಿ ದಾಖಲೆಯ 587 ಹೊಸ ಕೊರೋನಾ ಕೇಸ್ ಪತ್ತೆಯಾಗಿದೆ, ಜಿಲ್ಲೆಯಲ್ಲಿ ಒಟ್ಟು ಪ್ರಕರಣ 13,336 ಕೇಸ್ ಇದ್ದು, ಗುಣಮುಖರಾದವರ ಸಂಖ್ಯೆ 11,554 ಕ್ಕೆ ಏರಿಕೆಯಾಗಿದೆ, ಜಿಲ್ಲೆಯಲ್ಲಿ ಇನ್ನು 1590 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಇದುವರೆಗು 192 ಮಂದಿ ಸಾವನ್ನಪ್ಪಿದ್ದಾರೆಂದು ಆರೋಗ್ಯ ಇಲಾಖೆಯ ಹೆಲ್ತ್ ಬುಲಿಟೆನ್ ಮಾಹಿತಿ ನೀಡಿದ್ದಾರೆ, ಇನ್ನು ಜಿಲ್ಲಾಸ್ಪತ್ರೆ ಐಸಿಯು ಕೇಂದ್ರದಲ್ಲಿ 28 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ರಾಜ್ಯ ಸರ್ಕಾರದಿಂದ ಕೊರೊನಾ ಹೊಸ ಮಾರ್ಗಸೂಚಿ ಪ್ರಕಟ ಹಿನ್ನಲೆ, ಕೋಲಾರ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರು, ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಸಭೆಯಲ್ಲಿ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಸಂಸದ ಮುನಿಸ್ವಾಮಿ, ಶಾಸಕರಾದ ಕೆವೈ ನಂಜೇಗೌಡ, ಗೋವಿಂದರಾಜು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು, ಸಭೆ ನಂತರ ಸುದ್ದಿಗೋಷ್ಟಿ ನಡೆಸಿದ ಜಿಲ್ಲಾಧಿಕಾರಿ ಡಾ ಆರ್ ಸೆಲ್ವಮಣಿ, ಕೊಲಾರ ಜಿಲ್ಲೆಯಲ್ಲಿ ಬೆಡ್ ಸಮಸ್ಯೆ ತಲೆದೂರದಂತೆ ಎಚ್ಚರ ವಹಿಸಲಾಗಿದೆ, ಕೆಪಿಎಮ್ಇ ಕಾಯ್ದೆಯಡಿ ನೊಂದಾಯಿತ ಆಸ್ಪತ್ರೆಯಲ್ಲಿ ಶೇಖಡಾ 50 ರಷ್ಟು ಬೆಡ್ ಮೀಸಲಿಡಲು ಖಾಸಗಿ ಆಸ್ಪತ್ರೆಯು ಒಪ್ಪಿದೆ ಎಂದು ತಿಳಿಸಿದರು.
ಇನ್ನು ಆಂಧ್ರ ಹಾಗೂ ತಮಿಳುನಾಡು ಬಾರ್ಡರ್ ನಲ್ಲಿ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು, ಜೊತೆಗೆ ತಾಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲು ನಿರ್ಧರಿಸಿದ್ದು, ಪ್ರತಿ ತಾಲೂಕಿಗೆ ಕನಿಷ್ಟ ಎರಡು ಕೋವಿಡ್ ಸೆಂಟರ್ ತೆರಯಲು ನಿರ್ಧಾರ ಮಾಡಲಾಗಿದೆ ಎಂದರು, ಇನ್ನು ಕೆಜಿಎಪ್ ನಬೆಮೆಲ್ ಕಂಪನಿಯಿಂದ ಕೆಜಿಎಫ್ ನಲ್ಲಿ ಆಕ್ಸಿಜನ್ ತಯಾರಿಕಾ ಘಟನೆ ಸ್ಥಾಪನೆಗೆ ತೀರ್ಮಾನಿಸಿದ್ದು, ಸಿಎಸ್ಆರ್ ಯೋಜನೆಯ ಹಣದಿಂದ ಸ್ಥಾಪನೆ ಮಾಡಲು ಸಂಸ್ತೆ ಒಪ್ಪಿಕೊಂಡಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಇದೇ ವೇಳೆ ಮಾತನಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಲ್, ಥಿಯೇಟರ್, ಮಾರುಕಟ್ಟೆ ಬೇಡ ಎಂದು ಸರ್ಕಾರ ಹೇಳಿದೆ, ಆದರೆ ಮದುವೆ ಕಾರ್ಯಕ್ರಮ ನಡೆಯುವ ಚೌಲ್ಟರಿ ಗೆ ಮಾತ್ರ ಏತಕ್ಕೆ ವಿನಾಯಿತಿ ಎಂದು, ಸರ್ಕಾರಕ್ಕೆ ರಮೇಶ್ ಕುಮಾರ್ ಪ್ರಶ್ನಿಸಿದ್ದಾರೆ, ಮದುವೆ ಕಾರ್ಯಕ್ರಮದಲ್ಲಿ ನಿಗದಿತ ಸಂಖ್ಯೆಯ ಜನ ಸೇರಿದ್ದಾರೊ ಇಲ್ಲವೊ ಎಂಬುದನ್ನು ತಿಳಿಯುವುದು ಬಹಳ ಕಷ್ಟಕರವಾಗಲಿದೆ, ಹಾಗಾಗಿ ಚೌಲ್ಟರಿಗಳಲ್ಲಿ ಮದುವೆ ಕಾರ್ಯಕ್ರಮ ನಿರ್ಬಂಧಿಸಬೇಕು, ಜನರು ಅಗತ್ಯವಿದ್ದಲ್ಲಿ ದೇಗುಲಗಳಲ್ಲಿ ಹೋಗಿ ಮದುವೆ ಮಾಡಿಕೊಳ್ಳಲಿ ಅದು ಅವರಿಗೆ ಬಿಟ್ಟದ್ದು ಎಂದು ಸರ್ಕಾರವನ್ನ ಆಗ್ರಹಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ