ಬೆಳಗಾವಿ (ಜುಲೈ 09); ರಾಜ್ಯಾದ್ಯಂತ ಕೊರೋನಾ ಮರಣ ಮೃದಂಗ ಬಾರಿಸುತ್ತಿದ್ದು ಅದರಲ್ಲೂ ಬೆಳಗಾವಿ ಜಿಲ್ಲೆಯ ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿ ಭಾಗದ ಅಥಣಿ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.
ಅಥಣಿ ತಾಲೂಕಿನಲ್ಲಿ ಈವರೆಗೆ ಯಾವುದೇ ಸೋಂಕು ಪ್ರಕರಣ ಕಂಡು ಬಂದಿರಲಿಲ್ಲ. ಆದರೆ, ಇದೀಗ ಏಕಾಏಕಿ ಆರಂಭಗೊಂಡಿರುವ ಕೊರೋನಾ ಪ್ರಕರಣದಿಂದಾಗಿ ಅಥಣಿಯ ಜನ ಬೆಚ್ಚಿ ಬಿದ್ದಿದ್ದಾರೆ. ಅಥಣಿ ತಾಲೂಕಿನಲ್ಲಿ ಇದುವರೆಗೂ 55 ಕ್ಕೂ ಹೆಚ್ಚು ಜನರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಇನ್ನು ನೂರಕ್ಕೂ ಹೆಚ್ಚು ಜನರ ವರದಿ ಬರಬೇಕಿದೆ. ಅಲ್ಲದೆ, ಅಥಣಿ ಒಂದೆ ತಾಲೂಕಿನಲ್ಲಿ 6 ಜನ ಕೊರೋನಾದಿಂದಾಗಿ ಸಾವನ್ನಪ್ಪಿದ್ದಾರೆ ಎಂಬುದು ಉಲ್ಲೇಖಾರ್ಹ.
ತೀವ್ರ ಗತಿಯಲ್ಲಿ ಹೆಚ್ಚುತ್ತಿರುವ ಪ್ರಕರಣಗಳನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ನಿನ್ನೆ ಬೆಳಗಾವಿ ಜಿಲ್ಲಾಧಿಕಾರಿ ಹಿರೇಮಠ ಅಥಣಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಸಮುದಾಯದ ಮಟ್ಟದಲ್ಲಿ ಕೊರೋನಾ ಹರಡಿರುವ ಶಂಕೆ ಇದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪರೀಕ್ಷೆ ನಡೆಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ತಾಲೂಕು ಕೇಂದ್ರದಲ್ಲೆ ಐಸೊಲೇಶನ್:
ಅಥಣಿ ತಾಲೂಕು ಬೆಳಗಾವಿ ಜಿಲ್ಲಾ ಕೇಂದ್ರಕ್ಕೆ 200 ಕಿಲೋಮೀಟರ್ ದೂರದಲ್ಲಿರುವ ಕಾರಣದಿಂದಾಗಿ ರೋಗಿಗಳನ್ನ ಕರೆತರಲು ಸಾಕಷ್ಟು ತೊಂದರೆಯಾಗುತ್ತಿದೆ. ಈ ಮೊದಲು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ರೋಗಿಗಳನ್ನ ಒಯ್ಯುವ ಹೊತ್ತಿಗೆ ಜಿಲ್ಲಾ ಆಸ್ಪತ್ರೆಯ ಬಾಗಿಲಲ್ಲೆ ಇಬ್ಬರು ಸಾವನ್ನಪ್ಪಿದ್ದರು. ಈ ಕಾರಣದಿಂದಾಗಿ ಅಥಣಿ ತಾಲೂಕು ಆಸ್ಪತ್ರೆಯಲ್ಲೆ ಪಾಸಿಟಿವ್ ರೋಗಿಗಳನ್ನು ಇರಿಸಿ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಮುಂದಾಗಿದೆ.
ಮಗ್ಗಲು ಮುಳ್ಳಾದ ಮಹಾರಾಷ್ಟ್ರ:
ದೇಶದಲ್ಲೇ ಅತಿ ಹೆಚ್ಚು ಪ್ರಕರಣಗಳು ಮಹಾರಾಷ್ಟ್ರದಲ್ಲಿ ಕಂಡು ಬಂದಿವೆ. ಅದರಲ್ಲೂ ಮಹಾರಾಷ್ಟ್ರದ ಗಡಿ ಗ್ರಾಮಗಳಲ್ಲಿ ಕೊರೋನಾ ತಾಂಡವವಾಡುತ್ತಿದೆ. ಇದು ನೇರವಾಗಿ ಅಥಣಿ ತಾಲೂಕಿನ ಮೇಲೆ ಪರಿಣಾಮ ಬೀರುತ್ತಿದೆ. ಅಥಣಿ ತಾಲೂಕು ಮಹಾರಾಷ್ಟ್ರದ ಜತ್ತ ಹಾಗೂ ಸಾಂಗಲಿ ತಾಲೂಕಿಗೆ ಹೊಂದಿಕೊಂಡಿರುವ ತಾಲೂಕು. ಹೀಗಾಗಿ ಮಹಾರಾಷ್ಟ್ರದಿಂದ ಹೆಚ್ಚಾಗಿ ಅಥಣಿಗೆ ವ್ಯಾಪಾರ ನಡೆಸಲು ಹಾಗೂ ಆಸ್ಪತ್ರೆಗೆಗಳಿಗೆ ಅಂತ ಮಹಾರಾಷ್ಟ್ರದ ಜನ ಇಲ್ಲಿಗೆ ಈಗಲು ಬರುತ್ತಲೆ ಇದ್ದಾರೆ.
ಗಡಿಯಲ್ಲಿ ಚೆಕ್ ಪೊಸ್ಟ್ ಗಳಿವೆ. ಆದರೂ, ಜನ ಸಂಚಾರ ಮಾತ್ರ ನಿಂತಿಲ್ಲ. ಪೊಲೀಸರು ಅಂತರರಾಜ್ಯ ಗಡಿ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಆತಂಕ ತಗ್ಗಿಸಲು ತಾಲೂಕಿನ ಗಡಿಯಲ್ಲಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ರಸ್ತೆಗಳನ್ನ ಜನರೇ ಮುಂದೆ ನಿಂತು ರಸ್ತೆಗಳಿಗೆ ಕಲ್ಲು, ಬೇಲಿಗಳನ್ನು ಹಾಕಿ ಬಂದ್ ಮಾಡಿದ್ದಾರೆ.
ಸ್ವಯಂ ಪ್ರೇರಿತ ಲಾಕಡೌನ್:
ತಾಲೂಕಿನಲ್ಲಿ ಕೊರೋನಾ ಹೆಚ್ಚುತ್ತಿರುವ ಹಿನ್ನಲೆ ಬಹುತೇಕ ಗ್ರಾಮಗಳನ್ನು ಜನ ಸ್ವಯಂ ಪ್ರೇರಣೆಯಿಂದ ಲಾಕ್ಡೌನ್ ಮಾಡಿಕೊಂಡಿದ್ದಾರೆ. ಹೊರಗಡೆಯಿಂದ ಗ್ರಾಮಕ್ಕೆ ಬರುವ ಜನರನ್ನು ತಪಾಸಣೆ ಮಾಡೋದು ಹಾಗೂ ಬೆಳಗ್ಗೆ 7 ರಿಂದ 12 ಗಂಟೆಯವರೆಗೆ ಮಾತ್ರ ವ್ಯಾಪಾರ ನಡೆಸಿ ಬಳಿಕೆ ಗ್ರಾಮಗಳನ್ನ ಬಂದ್ ಮಾಡುವಂತಹ ನಿರ್ಧಾರ ಕೈಗೊಳ್ಳಲಾಗಿದೆ.
ಕೊರೊನಾ ಹೆಚ್ಚಲು ಅಧಿಕಾರಿಗಳ ನಿರ್ಲಕ್ಷ್ಯ ಕಾರಣ:
ಅಥಣಿ ತಾಲೂಕಿನ ಈ ಮಟ್ಟಿಗೆ ಕೊರೋನಾ ಹೆಚ್ಚಲು ತಾಲೂಕಿನ ಅಧಿಕಾರಿಗಳು ಹಾಗೂ ಇಲ್ಲಿನ ಶಾಸಕ ಕುಮಟಳ್ಳಿ, ಡಿಸಿಎಂ ಲಕ್ಷ್ಮಣ ಸವದಿ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಕೊರೋನಾ ಕೇಸ್ ಹೆಚ್ಚಾಗಲು ಕಾರಣವೇನು ಗೊತ್ತೇ? - ಇಲ್ಲಿದೆ ಆತಂಕಕಾರಿ ಮಾಹಿತಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ