ಚಿಕ್ಕಮಗಳೂರು : ಆ ಮಹಿಳೆ ಕೆಲ ದಿನಗಳಿಂದ ಅನಾರೋಗ್ಯದಿಂದ ಕೆಲ ದಿನಗಳಿಂದ ಬಳಲುತ್ತಿದ್ದರು ಮನೆಯಲ್ಲಿ ಚೇತರಿಸಿಕೊಳ್ಳದೇ ಸುಸ್ತಾಗಿದ್ದ ಮಹಿಳೆಯನ್ನ ಕೊನೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. 2 ದಿನಗಳ ಬಳಿಕ ಇನ್ನೇನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗ್ತಾರೆ ಅನ್ನುವಷ್ಟರಲ್ಲಿ ಮಹಿಳೆ ಕೊನೆಯುಸಿರೆಳೆದರು. ಕೊನೆಗೆ ಗ್ರಾಮಕ್ಕೆ ತಂದು ಮಹಿಳೆಯ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಕೊನೆಯ ಯಾತ್ರೆಯಲ್ಲಿ ಸುಮಾರು 150 ಜನ ಪಾಲ್ಗೊಂಡಿದ್ದಾರೆ. ಸದ್ಯ ಮೃತ ಮಹಿಳೆಯ ವರದಿ ಬಂದಿದ್ದು, ಸಾವನ್ನಪ್ಪಿದ್ದ ಮಹಿಳೆಗೆ ಕೊರೋನಾ ಇರುವುದು ದೃಢಪಟ್ಟಿದೆ. ಪರಿಣಾಮ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ ಜನರಿಗೆ ಭೀತಿ ಆವರಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕಡೂರಳ್ಳಿ ಮಹಿಳೆಯೊಬ್ಬರು ಎಲ್ಲರಂತೆ ಚೆನ್ನಾಗಿ ಓಡಾಡಿಕೊಂಡು ಆರಾಮವಾಗಿ ಮನೆಯಲ್ಲಿದ್ರು. ಆದ್ರೆ ಹೀಗೆ ಆರಾಮವಾಗಿ ಓಡಾಡಿಕೊಂಡಿದ್ದ ಮಹಿಳೆಗೆ ಇದ್ದಕ್ಕಿದ್ದಂತೆ ಶೀತ, ಜ್ವರ ಕಾಣಿಸಿಕೊಂಡಿದೆ. ಕೊನೆಗೆ ಮನೆಯಲ್ಲಿ ಚೇತರಿಕೆ ಕಾಣದಿದ್ದಾಗ ಆಸ್ಪತ್ರೆಗೆ ಆಡ್ಮಿಟ್ ಆಗಿದ್ದಾರೆ. ದೃರಾದೃಷ್ಟವಶಾತ್ ಮಹಿಳೆ ಕಳೆದ ಬುಧವಾರ ಶಿವಮೊಗ್ಗದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕೊನೆಗೆ ಕಡೂರು ತಾಲೂಕಿನ ಕಡೂರಳ್ಳಿ ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ.
ವಿಪರ್ಯಾಸವೆಂದರೆ ಅಂತ್ಯಕ್ರಿಯೆ ಬಳಿಕ ಅಂದ್ರೆ ನಿನ್ನೆ ಮೃತ ಮಹಿಳೆಯ ವರದಿ ಲಭ್ಯವಾಗಿದ್ದು, ಸಾವನ್ನಪ್ಪಿದ್ದ ಮಹಿಳೆಯಲ್ಲಿ ಕೊರೋನಾ ಇದ್ದಿದ್ದು ದೃಢವಾಗಿದೆ. ಇಲ್ಲಿ ಮೃತ ಮಹಿಳೆಗೆ ಕೊರೊನಾ ಸೋಂಕು ತಗುಲಿತ್ತು ಅನ್ನೋದು ವಿಚಾರವಲ್ಲ, ಆದ್ರೆ ಆ ಮಹಿಳೆಯ ಅಂತ್ಯಕ್ರಿಯೆಯಲ್ಲಿ 150 ಮಂದಿ ಭಾಗಿಯಾಗಿದ್ರು ಅನ್ನೋದು ಎಲ್ಲರ ತಲೆಬಿಸಿಗೆ ಕಾರಣವಾಗಿದೆ.
ಗ್ರಾಮದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಬರೋಬ್ಬರಿ 150 ಮಂದಿ ಭಾಗಿಯಾಗಿ ಅಂತಿಮ ವಿಧಿ ವಿಧಾನವನ್ನ ನೆರವೇರಿಸಿದ್ದಾರೆ. ಆಗ ಇದೊಂದು ಸಾಮಾನ್ಯ ಸಾವು ಅಂದುಕೊಂಡಿದ್ದ ಮಂದಿ, ಇದೀಗ ಮಹಿಳೆಗೆ ಕೊರೊನಾ ಬಂದಿತ್ತು ಅನ್ನೋ ವಿಚಾರ ತಿಳಿದು ಶಾಕ್ ಆಗಿದ್ದಾರೆ. ಹೀಗೆ ಮಹಿಳೆಯ ಮೃತದೇಹವನ್ನ ಹಸ್ತಾಂತರಿಸುವಾಗ ಆರೋಗ್ಯ ಇಲಾಖೆ ಸಿಬ್ಬಂದಿಗಳು ಎಚ್ಚರ ವಹಿಸಿದ್ದರೆ ಈ ರೀತಿ ಅನಾಹುತ ಆಗ್ತಿರಲಿಲ್ಲ ಅಂತಾರೆ ಸ್ಥಳೀಯರು.
ತುಂಬಾ ಗಂಭೀರ ಇರುವ ಪ್ರಕರಣಗಳಲ್ಲಿ ಪರೀಕ್ಷೆ ಮಾಡಲು ಸದ್ಯ ರ್ಯಾಪಿಡ್ ಆ್ಯಂಟಿಜನ್ ಕಿಟ್ ಗಳನ್ನ ಅಧಿಕಾರಿಗಳು ಬಳಸಿಕೊಳ್ಳಬಹುದು. ಈ ಕಿಟ್ ನಲ್ಲಿ ಪರೀಕ್ಷೆ ಮಾಡಿದ್ರೆ 20 ನಿಮಿಷಗಳಲ್ಲಿ ಪಾಸಿಟಿವೋ, ಇಲ್ಲಾ ನೆಗೆಟಿವೋ ಅನ್ನೋದು ತಿಳಿಯುತ್ತೆ. ಆದ್ರೆ ಅಧಿಕಾರಿಗಳು ಪದೇ ಪದೇ ಯಡವಟ್ಟು ಮಾಡ್ತಿರೋದು ಜನಸಾಮಾನ್ಯರು ಆತಂಕ ಪಡುವಂತಾಗಿದೆ. ಸದ್ಯ ಕಡೂರು ಪಕ್ಕದ ಕಡೂರಳ್ಳಿ ಗ್ರಾಮವನ್ನ ಸೀಲ್ ಡೌನ್ ಮಾಡಲಾಗಿದೆ. ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ ಜನರನ್ನ ಪರೀಕ್ಷೆಗೆ ಒಳಪಡಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ