ಬಾಗಲಕೋಟೆ: ಡಿಸಿಎಂ ಗೋವಿಂದ ಕಾರಜೋಳ ಕ್ಷೇತ್ರದಲ್ಲಿದರುವ ಬಾಗಲಕೋಟೆ ಜಿಲ್ಲೆಯ ಏಕೈಕ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಮಿಕರು ಬೀದಿಗೆ ಬಿದ್ದಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ. ನಮಗೆ ನ್ಯಾಯ ಕೊಡಿಸಿ,ಇಲ್ಲವೇ ವಿಷ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ತಿಮ್ಮಾಪುರ ಬಳಿಯ ರನ್ನ ನಗರದಲ್ಲಿರುವ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಒಂದೆಡೆ ಸರ್ಕಾರ ಸಕ್ಕರೆ ಕಾರ್ಖಾನೆ ಲೀಜ್ ಕೊಡಲು ಮುಂದಾಗಿದ್ದರೆ, ಮತ್ತೊಂದೆಡೆ ಕಾರ್ಮಿಕರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 285 ಖಾಯಂ ಹಾಗೂ117 ಗುತ್ತಿಗೆ ಆಧಾರದ ನೌಕರರು ಸೇರಿ ಒಟ್ಟು 567ಜನ ಕಾರ್ಮಿಕರು ದುಡಿಯುತ್ತಿದ್ದರು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕಾರ್ಖಾನೆ ಬಂದ್ ಆಗಿದ್ದು, ಕಳೆದ 6ತಿಂಗಳ ವೇತನ ನೀಡಿಲ್ಲ. ಮುಂಚಿತವಾಗಿ ಕಾರ್ಮಿಕರಿಗೆ ಯಾವುದೇ ನೋಟೀಸ್ ನೀಡದೇ ದಿಢೀರ್ ರಾತ್ರೋರಾತ್ರಿ ಜನೇವರಿ 6ರಂದು ಕೆಲಸದಿಂದ ತೆಗೆದು ಹಾಕಿದ್ದೇವೆ ಎಂದು ನೋಟಿಸ್ ಅಂಟಿಸಿದ್ದಾರೆ. ಇದರಿಂದ ಕಂಗಾಲಾಗಿರುವ ಕಾರ್ಮಿಕರು ಹೊಟ್ಟೆಚೀಲ ತುಂಬಿಸಿಕೊಳ್ಳಲು ಹೆಣಗುವಂತಾಗಿದೆ.
ದುಷ್ಟ ರಾಜಕಾರಣಿ ಕೈಯಲ್ಲಿ ಸಿಲುಕಿ ಕಾರ್ಖಾನೆ ಹಾಳು:
ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ, ಡಿಸಿಎಂ ಗೋವಿಂದ ಕಾರಜೋಳ ಆಪ್ತ. ಈ ಹಿಂದೆ ಗೋವಿಂದ ಕಾರಜೋಳ ಈ ಕಾರ್ಖಾನೆ ಅಧ್ಯಕ್ಷರಾಗಿದ್ದರು. ಆ ಬಳಿಕ ರಾಮಣ್ಣ ತಳೇವಾಡ ಸತತ ಇಪ್ಪತ್ತು ವರ್ಷಗಳಿಂದ ಅಧ್ಯಕ್ಷರಾಗಿದ್ದಾರೆ. ಆದರೆ ಇದೀಗ ಸಕ್ಕರೆ ಕಾರ್ಖಾನೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಕಾರ್ಖಾನೆ ಲೀಜ್ ನಲ್ಲಿ ಕೊಡುವ ಚರ್ಚೆ ನಡೆಯುತ್ತಿದೆ. ಆದರೆ ಅದು ವಿಳಂಬವಾಗುತ್ತಿದ್ದು,ಇತ್ತ ಕಾರ್ಖಾನೆ ಕಾರ್ಮಿಕರು ಕಣ್ಣೀರಿನಲ್ಲಿ ಕೈತೊಳೆಯುತ್ತಾ ಜೀವನ ನಡೆಸುತ್ತಿದ್ದಾರೆ.
ಕೆಲಸ ಕಳೆದುಕೊಂಡು ನಾವು ಬೀದಿಗೆ ಬಿದ್ದಿದ್ದೇವೆ, 6 ತಿಂಗಳಿನಿಂದ ನಮಗೆ ವೇತನ ಇಲ್ಲ, ಜೀವನ ನಡೆಸುವುದು ಕಷ್ಟವಾಗಿದೆ. ಪತ್ನಿ ತಾಳಿ (ಮಾಂಗಲ್ಯ) ಮಾರಿ ಜೀವನ ನಡೆಸುವಂತಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವಿಲ್ಲ. ನಮ್ಮ ಪರಿಸ್ಥಿತಿ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ. ದುಷ್ಟ ರಾಜಕಾರಣಿ,ಹಿಟ್ಲರ್ ಅನ್ನು ನಾವು ನೋಡಿಲ್ಲ. ಆತನ ಆಡಳಿತ ಬಗ್ಗೆ ಕೇಳಿದ್ದೇವೆ. ಅದೇ ರೀತಿ ರಾಮಣ್ಣ ತಳೇವಾಡ ಹಿಟ್ಲರ್ ಆಡಳಿತ ನಡೆಸಿ, ಕಾರ್ಖಾನೆ ಹಾಳು ಮಾಡಿ ನಮ್ಮ ಬದುಕು ಬೀದಿಗೆ ತಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ