ಸರ್ಕಾರ ನಂಬಿದ್ರೆ ಪ್ರವಾಹದಲ್ಲಿ ಕೊಚ್ಚಿ ಹೋದವರಿಗೆ, ಕೊರೋನಾದಿಂದ ಸತ್ತವರಿಗೆ ಮೂರು ನಾಮವೇ ಗತಿ; ಡಿ.ಕೆ.ಸುರೇಶ್
ರೈತ ವಿರೋಧಿ, ಜನವಿರೋಧಿಯಾಗಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಇನ್ನು ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಲು ಎಲ್ಲಾ ವಿರೋಧ ಪಕ್ಷಗಳು ಸಜ್ಜಾಗಿವೆ. ಅಧಿವೇಶನ ಕರೆಯಲಿ ಎಂದು ಕಾಯುತ್ತಿದ್ದೇವೆ ಎಂದರು.
ರಾಮನಗರ(ಆಗಸ್ಟ್. 20): ರಾಜ್ಯ ಸರ್ಕಾರದಲ್ಲಿ ಸಚಿವರು ಎಲ್ಲಿ ದುಡ್ಡು ಸಿಗುತ್ತೋ ಎಂದು ಕಾಲ ಕಳೆಯುತ್ತಿದ್ದಾರೆ. ಜನಪರವಾಗಿ ಕೆಲಸ ಮಾಡುವ ಸಚಿವರು ಸರ್ಕಾರದಲ್ಲಿ ಇಲ್ಲ. ಇವರನ್ನ ನಂಬಿದ್ರೆ ಪ್ರವಾಹದಲ್ಲಿ ಕೊಚ್ಚಿ ಹೋದವರಿಗೂ ಹಾಗೂ ಕೊರೋನಾದಲ್ಲಿ ಸತ್ತವರಿಗೂ ಮೂರು ನಾಮವೇ ಗತಿ ಎಂದು ರಾಜ್ಯ ಸರ್ಕಾರದ ವಿರುದ್ದ ಸಂಸದ ಡಿ ಕೆಸುರೇಶ್ ವಾಗ್ದಾಳಿ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಬಿಜೆಪಿ ಸರ್ಕಾರದ ವಿರುದ್ಧ ಕೈ ಕಾರ್ಯಕರ್ತರ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈತ ವಿರೋಧಿ, ಜನವಿರೋಧಿಯಾಗಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಇನ್ನು ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತಲು ಎಲ್ಲಾ ವಿರೋಧ ಪಕ್ಷಗಳು ಸಜ್ಜಾಗಿವೆ. ಅಧಿವೇಶನ ಕರೆಯಲಿ ಎಂದು ಕಾಯುತ್ತಿದ್ದೇವೆ ಎಂದರು.
ಈಗ ನಮ್ಮ ಕೂಗು ಜನರಿಗೆ ಕೇಳುತ್ತಿಲ್ಲ, ಜನ ಭ್ರಮೆಯಲ್ಲಿದ್ದಾರೆ. ಭಾವನಾತ್ಮಕ ವಿಚಾರಗಳನ್ನ ಜನರ ಮುಂದೆ ಇಟ್ಟು ದಾರಿ ತಪ್ಪಿಸಲಾಗುತ್ತಿದೆ, ಇವರ ಕೈಗೆ ಮುಂದಿನ 5-10 ವರ್ಷ ಅಧಿಕಾರ ಕೊಟ್ಟರೇ ಎಲ್ಲವೂ ಖಾಸಗಿಕರಣ ಆಗಲಿದೆ. ಎಲ್ಲರನ್ನು ನೀವು ಬದುಕಿದರೆ ಬದುಕಿ, ಇಲ್ಲಾಂದ್ರೆ ಬಿಡಿ ಎನ್ನುತ್ತಾರೆ ಎಂದು ಕಿಡಿಕಾರಿದರು.
ಇನ್ನು ದೇಶದ ವಿಮಾನ ನಿಲ್ಧಾಣ, ದೂರವಾಣಿ ಕಚೇರಿ, ರೈಲ್ವೆಇಲಾಖೆ ಖಾಸಗೀಕರಣ ಮಾಡಲು ಹೊರಟ್ಟಿದ್ದಾರೆ. ಮುಂದೆ ಬಡವರಿಗೆ ಭೂಮಿ ಸಿಗಲ್ಲ, ದುಡ್ಡಿರುವವರಿಗೆ ಭೂಮಿ ಸಿಗುತ್ತೆ, ಆ ಕಾನೂನು ಜಾರಿಯಾಗುತ್ತಿದೆ. ರೈತನನ್ನ ಕೂಲಿಕಾರ್ಮಿಕನಾಗಿ ಮಾಡಲು ಹೊರಟ್ಟಿದ್ದಾರೆ. ಜೀತ ಪದ್ಧತಿಯನ್ನ ಮತ್ತೆ ಈ ದೇಶದಲ್ಲಿ ಬಿಜೆಪಿ ಸರ್ಕಾರ ಜಾರಿ ಮಾಡುತ್ತಿದೆ ಎಂದರು.
ರಾಜ್ಯದಲ್ಲಿ ಯಾವುದೇ ಸಂಘಟನೆ ತಪ್ಪು ಮಾಡಿದ್ರೆ ಸರ್ಕಾರ ಕ್ರಮಕೈಗೊಳ್ಳಲಿ, ಆದರೆ, ಒಬ್ಬರಿಗೆ ಒಂದು ಇನ್ನೊಬ್ಬರಿಗೆ ಒಂದು ಕಾನೂನು ಆಗಬಾರದು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯೇ ಇಲ್ಲ, ಅಂತರಿಕ ಭದ್ರತಾ ವೈಫಲ್ಯ ಆಗಿದೆ. ಆದರೆ ಇವರ ವೈಫಲ್ಯ ಮುಚ್ಚಿಕೊಳ್ಳಲು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನೈತಿಕತೆಯಿದ್ದರೆ ಗೃಹ ಸಚಿವರು ರಾಜೀನಾಮೆ ಕೊಡಲಿ, ಹೈಕೋರ್ಟ್ ಜಡ್ಜ್ ಯಿಂದ ಗಲಭೆ ಪ್ರಕರಣ ತನಿಖೆಯಾಗಲಿ ಎಂದು ಡಿ.ಕೆ.ಸುರೇಶ್ ಒತ್ತಾಯಿಸಿದರು.
ಶಿವಮೊಗ್ಗದಲ್ಲಿ ಸೋನಿಯಾ ಗಾಂಧಿ ವಿರುದ್ಧ ಎಫ್ಐಆರ್ ಹಾಕಲಾಗಿತ್ತು. ಪೊಲೀಸರ ಕಣ್ಣು ತಪ್ಪುನಿಂದ ಆಗಿದೆ. ಬಿ ರಿಪೋರ್ಟ್ ಹಾಕ್ತೀವಿ ಎಂದು ಸಿಎಂ ಹೇಳಿದ್ದರು. ಆದರೆ ಇದುವರೆಗೂ ಈ ಕ್ಷಣದವರೆಗೂ ಬಿ ರಿಪೋರ್ಟ್ ಹಾಕಿಲ್ಲ. ಕಾಂಗ್ರೆಸ್ ನಿಯೋಗ ಸಿಎಂ ಭೇಟಿಯಾದ ವೇಳೆ ಸಿಎಂ ಮಾತು ಕೊಟ್ಟಿದ್ದರು. ಇದನ್ನು ಕಾಂಗ್ರೆಸ್ ಪಕ್ಷ ಸಮರ್ಥವಾಗಿ ಎದುರಿಸುತ್ತೆ ಎಂದರು.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ