ಕಾರವಾರ: ಕಾರವಾರದಲ್ಲಿ ನಿರ್ಮಾಣ ಮಾಡಲು ಇಚ್ಚಿಸಿರುವ ಅಂತರಾಷ್ಟಿಯ ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಇದ್ದ ಕಿತ್ತಾಟ ಮುಂದುವರೆದಿದ್ದು ಜನಾಭಿಪ್ರಾಯ ಸಂಗ್ರಹಕ್ಕೆ ಮಾಜಿ ಶಾಸಕರು ಮುಂದಾದರೆ, ಈಗ ಆಯ್ಕೆ ಮಾಡಿದ ಜಾಗದಲ್ಲಿ ಸ್ಟೇಡಿಯಂ ನಿರ್ಮಾಣಕ್ಕೆ ಸುತಾರಾಂ ಒಪ್ಪಲ್ಲ ಎಂದಿದ್ದಾರೆ ಹಾಲಿ ಶಾಸಕಿ ರೂಪಾಲಿ.
ಕಾರವಾರ ಹಾಲಿ ಶಾಸಕಿ ರೂಪಾಲಿ ನಾಯ್ಕ್ ಮತ್ತು ಮಾಜಿ ಶಾಸಕ ಸತೀಶ್ ಸೈಲ್ ನಡುವೆ ಸ್ಟೆಡಿಯಂ ನಿರ್ಮಾಣ ಸಂಬಂಧ ಕಿತ್ತಾಟ ಮತ್ತೆ ಮುನ್ನೆಲೆಗೆ ಬಂದಿದೆ. ಕಾರವಾರದ ಸದಾಶಿವಗಡದ ಕಾಳಿ ನದಿ ಸಂಗಮ ಪ್ರದೇಶದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಆಯ್ಕೆ ಮಾಡಿದ ಜಾಗ ಸರಕಾರಿ ಗೋ ಮಾಳ ಜಾಗವಾಗಿದ್ದು, ಇದಕ್ಕೆ ಕೆಎಸ್ಸಿಎ ಯಿಂದ ಕೂಡಾ ಒಪ್ಪಿಗೆ ಸಿಕ್ಕಿದೆ ಕಳೆದ ಕಾಂಗ್ರೆಸ್ ಸರಕಾರದಲ್ಲಿ ಈ ಯೋಜನೆಯನ್ನ ತರಲಾಗಿತ್ತು. ಸರಕಾರ ಮತ್ತು ಎಎಸ್ ಸಿಎ ನಡುವೆ ಕಾಗದ ಪತ್ರ ವ್ಯವಹಾರ ನಡೆಯುತ್ತಿರುವ ಸಂದರ್ಭದಲ್ಲಿ ಸ್ಥಳೀಯರ ವಿರೋಧ ಇದೆ ಎಂದು ಈ ಯೋಜನೆಗೆ ತಾತ್ಕಾಲಿಕ ತಡೆ ಬಿದ್ದಿದ್ದು ಇದು ಈಗ ಕಾರವಾರದ ಹಾಲಿ ಮಾಜಿ ಶಾಸಕರ ಜಟಾಪಟಿಗೆ ಕಾರಣವಾಗಿದೆ.
ಇವತ್ತು ಇಲ್ಲಿ ಮಾಜಿ ಶಾಸಕ ಸತೀಶ್ ಸೈಲ್ ಕ್ರಿಕೆಟ್ ಸ್ಟೆಡಿಯಂ ನಿರ್ಮಾಣ ವಿಚಾರವಾಗಿ ಅಭಿಪ್ರಾಯ ಸಂಗ್ರಹಿಸಲು ಸಭೆ ಕರೆದಿದ್ದು ಸಭೆಯಲ್ಲಿ ಬಹುತೇಕ ಜನ ಸ್ಟೇಡಿಯಂ ಬೇಕು ಎಂದಿದ್ದಾರೆ. ಆದರೆ ಇನ್ನು ಕೆಲವರು ಈಗ ಆಯ್ಕೆ ಮಾಡಿದ ಜಾಗ ಬೇಡ. ನಮ್ಮ ಮನೆ ಮಠಕ್ಕೆ ಸಮಸ್ಯೆ ಆಗುತ್ತೆ. ಯಾವುದೇ ಕಾರಣಕ್ಕೂ ಸ್ಟೇಡಿಯಂ ನಿರ್ಮಾಣ ಮಾಡಲು ಬಿಡಲ್ಲ ಎಂದಿದ್ದಾರೆ. ಶಾಸಕಿ ರೂಪಾಲಿ ನಾಯ್ಕ್ ಕೂಡಾ ಇದಕ್ಕೆ ದನಿಗೂಡಿಸಿ ಯಾವುದೇ ಕಾರಣಕ್ಕೂ ಈ ಜಾಗದಲ್ಲಿ ಸ್ಟೇಡಿಯಂ ಮಾಡಲು ಬಿಡಲ್ಲ ಎಂದಿದ್ದು ಬೇರೆ ಜಾಗದಲ್ಲಿ ಸ್ಟೇಡಿಯಂ ಮಾಡಿದ್ರೆ ನಮ್ಮ ವಿರೋಧ ಇಲ್ಲ ಎಂದಿದ್ದಾರೆ. ಆದರೆ ಕಾಳಿ ಸಂಗಮ ಪ್ರದೇಶದಲ್ಲಿ ಸ್ಟೇಡಿಯಂ ಆದ್ರೆ ಏಷ್ಯಾದ ಎರಡನೇ ಸ್ಟೇಡಿಯಂ ನದಿ ಸಂಗಮ ಪ್ರದೇಶದಲ್ಲಿ ನಿರ್ಮಾಣವಾಗಿದ್ದು ಎಂದಾಗುತ್ತದೆ. ಈ ನಿಟ್ಟಿನಲ್ಲಿ ಕೆಎಸ್ಸಿಎ ಈ ಜಾಗದಲ್ಲಿ ಸ್ಟೇಡಿಯಂ ನಿರ್ಮಾಣಕ್ಕೆ ಒಪ್ಪಿಗೆ ನೀಡಿತ್ತು. ಬೇರೆ ಜಾಗದಲ್ಲಿ ಒಪ್ಪಿಗೆ ಸೂಚಿಸೋದು ಕೊಂಚ ಕಷ್ಟವೆ, ಆದರೆ ಈಗ ಈ ಜಾಗ ಬೇಡಾ ಆ ಜಾಗ ಬೇಡಾ ಎಂದು ಹಾಲಿ ಶಾಸಕಿ ರೂಪಾಲಿ ಮತ್ತು ಮಾಜಿ ಶಾಸಕ ಸತೀಶ್ ಸೈಲ್ ನಡುವೆ ಜಟಾಪಟಿಗೆ ಕಾರಣವಾಗಿದೆ. ಈ ಜಟಾಪಟಿ ಎಲ್ಲಿಯವರೆಗೆ ತಲುಪುತ್ತದೆ ಎಂದು ಕಾದು ನೋಡಬೇಕು.
ಇದನ್ನು ಓದಿ: ಅಜ್ಜನ ಹುಂಡಿಗೆ ಕಾಂಡೋಮ್, ಅಶ್ಲೀಲ ಬರೆಹ ಚೀಟಿ ಹಾಕುತ್ತಿದ್ದ ದುಷ್ಕರ್ಮಿಗಳು; ಎದುರಿಸಿದ ಅನಾಹುತವೇನು ಗೊತ್ತೆ?
ಸತೀಶ್ ಸೈಲ್ ಜಾಗದಲ್ಲೇ ಸ್ಟೆಡಿಯಂ ನಿರ್ಮಾಣವಾಗಲಿ: ಶಾಸಕಿ ರೂಪಾಲಿ
ಕಾರವಾರದ ನದಿ ಸಂಗಮ ಜಾಗದ ಕೂಗಳತೆಯಲ್ಲೇ ಹತ್ತಾರು ಎಕರೆ ಜಾಗ ಮಾಜಿ ಶಾಸಕ ಸತೀಶ್ ಸೈಲ್ ಮಾಲೀಕತ್ವದಲ್ಲಿ ಇದೆ. ಅವರಿಗೆ ಅಷ್ಟೊಂದು ಆಸಕ್ತಿ ಇದ್ದರೆ ಸ್ಟೇಡಿಯಂ ನಿರ್ಮಾಣಕ್ಕೆ ಜಾಗ ನೀಡಲಿ ಎಂದು ಶಾಸಕಿ ರೂಪಾಲಿ ಸವಾಲೆಸೆದಿದ್ದಾರೆ. ಈಗ ಸರಕಾರದ ಗೋಮಾಳ ಜಾಗ ಆಯ್ಕೆ ಮಾಡಿದ್ದು ಜನವಸತಿ ಪ್ರದೇಶಕ್ಕೆ ಹೊಂದಿಕೊಂಡಿದೆ. ಇಲ್ಲಿ ಸ್ಟೇಡಿಯಂ ನಿರ್ಮಾಣಕ್ಕೆ ಕೈ ಹಾಕಿದರೆ ಜನರು ಸಮಸ್ಯೆ ಎದುರಿಸಬೇಕಾದಿತು. ಈ ನಿಟ್ಟಿನಲ್ಲಿ ಈ ಜಾಗದಲ್ಲಿ ಯಾವುದೇ ಕಾರಣಕ್ಕೂ ಸ್ಟೇಡಿಯಂ ನಿರ್ಮಾಣ ಮಾಡಲು ತಾನು ಒಪ್ಪಲ್ಲ ಎಂದಿದ್ದಾರೆ.
ಸ್ಟೇಡಿಯಂ ವಿಚಾರದಲ್ಲಿ ಶಾಸಕಿ ರೂಪಾಲಿ ನಾಯ್ಕ್ ಕೆಟ್ಟ ರಾಜಕಾರಣ ಮಾಡುತ್ತಿದ್ದಾರೆ. ಈ ಸ್ಟೇಡಿಯಂ ನಮ್ಮ ಕಾಂಗ್ರೆಸ್ ಸರಕಾರ ಇದ್ದಾಗ ತಂದಿದ್ದು. ಒಂದು ವೇಳೆ ಇಲ್ಲಿ ಸ್ಟೇಡಿಯಂ ನಿರ್ಮಾಣವಾದರೆ ಅದರ ಕ್ರೆಡಿಟ್ ನನಗೆ ಸಿಗುತ್ತೆ ಅಂತಾ, ಜನರಲ್ಲಿ ತಪ್ಪು ಮಾಹಿತಿ ನೀಡಿ ಸ್ಟೇಡಿಯಂ ನಿರ್ಮಾಣ ಮಾಡಲು ಒಪ್ಪುತ್ತಿಲ್ಲ ಎಂದು ಆರೋಪಿಸಿದ್ದಾರೆ. ಕಾಲು ಹಿಡಿದು ಎಳೆಯುವ ಸಂಸ್ಕೃತಿಯ ಕಾರವಾರ ಕ್ಷೇತ್ರದಲ್ಲಿ ರಾಜಕೀಯ ನಡೆಯುತ್ತಿದೆ ಎಂದು ಹೇಳುವ ಮೂಲಕ ರೂಪಾಲಿ ನಾಯ್ಕ್ ಗೆ ಟಾಂಗ್ ನೀಡಿದ್ರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ