ವಿಜಯಪುರ: ಬಿಜೆಪಿ ಶಾಸಕ ಬಸನಗಡೌಡ ಪಾಟೀಲ ಯತ್ನಾಳ ದೆಹಲಿಗೆ ತೆರಳಿರುವ ಕುರಿತು ಕೃಷಿ ಸಚಿವ ಬಿ. ಸಿ. ಪಾಟೀಲ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಇಟ್ಟಂಗಿಹಾಳದಲ್ಲಿ ಮಾತನಾಡಿದ ಅವರು, ಯತ್ನಾಳ ಅಲ್ಲಿಗೆ ಹೋಗಿದ್ದು ನನಗೆ ಗೊತ್ತಿಲ್ಲ. ಅದನ್ನು ಯತ್ನಾಳ ಅವರಿಗೇ ಕೇಳಬೇಕು. ಅವರನ್ನು ದೆಹಲಿಗೆ ಕರೆದಿದ್ದರೆ ಅಲ್ಲಿಗೆ ಹೋದ ಬಳಿಕ ಅವರೇ ಪ್ರೆಸ್ ಮೀಟ್ ಮಾಡಿ ಹೇಳಬೇಕು ಎಂದು ಮಾರ್ಮಿಕವಾಗಿ ಹೇಳಿದರು.
ಇದೇ ವೇಳೆ ಯತ್ನಾಳ ಸೇರಿದಂತೆ ಇತರ ಬಿಜೆಪಿ ಶಾಸಕರು, ಸಚಿವರು ತಂತಮ್ಮ ಸಮುದಾಯಗಳ ಮೀಸಲಾತಿ ಹೋರಾಟದಲ್ಲಿ ಪಾಲ್ಗೋಂಡಿರುವ ಕುರಿತು ಮಾತನಾಡಿದ ಬಿ. ಸಿ. ಪಾಟೀಲ, ಯತ್ನಾಳ ಅವರು ಒಬ್ಬರೇ ಭಾಗವಹಿಸಿಲ್ಲ. ಬೇರೆ ಬೇರೆ ಸಮುದಾಯದವರೂ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ಆದರೆ ಒಂದು ವಿನಂತಿ ಮಾಡ್ತೇನೆ. ಸಿಎಂ ಸ್ಥಾನ ಸಂವಿಧಾನಿಕವಾಗಿ ಗೌರವಯುತ ಸ್ಥಾನ. ಅದಕ್ಕೆ ಗೌರವ ಕೊಟ್ಟು ಮಾತನಾಡಬೇಕು ಎಂದು ಅವರು ಹೇಳಿದರು.
ಮೀಸಲಾತಿ ಸಿಗದಿದ್ದರೆ ಸಮುದಾಯದ ಶಾಸಕರು ಮತ್ತು ಸಚಿವರು ರಾಜೀನಾಮೆ ನೀಡಬೇಕು ಎಂದು ಯತ್ನಾಳ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅದು ಯತ್ನಾಳ ಅವರ ವೈಯಕ್ತಿಕ ಅಭಿಪ್ರಾಯ. ರಾಜೀನಾಮೆ ಕೊಡುವವರು ಅದಕ್ಕೆ ಬದ್ಧರಾಗಿರಬೇಕಲ್ಲ. ಯತ್ನಾಳ ಹೇಳಿದರೆ ರಾಜೀನಾಮೆ ಕೊಡಬೇಕು ಅಂತ ಎಲ್ಲಿದೆ? ಇದು ಜಾತ್ಯಾತೀತ ರಾಷ್ಟ್ರ. ಅವರವರ ಸಮುದಾಯಗಳ ಪರವಾಗಿ ಮೀಸಲಾತಿ ಬೇಡಿಕೆ ಸಲ್ಲಿಸುವುದು ಅವರ ಹಕ್ಕು. ಹಾಗಂತ ಈ ರೀತಿ ಬೇರೆಯವರ ಮೇಲೆ ಒತ್ತಡ ಹಾಕುವುದೂ ಸರಿಯಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ ಘಟನೆ: ಸಿಐಡಿ ತನಿಖೆಗೆ ಗೃಹ ಸಚಿವರ ಆದೇಶ
ಇಟ್ಟಂಗಿಹಾಳ ಬಳಿ ಫುಡ್ ಪಾರ್ಕ್ ನಿರ್ಮಿಸುವ ಕುರಿತು ಮಾತನಾಡಿದ ಅವರು, ಈ ಹಿಂದೆ ಮಾಜಿ ಸಚಿವ ಎಂ. ಬಿ. ಪಾಟೀಲ ತಮಗೆ ಫುಡ್ ಪಾರ್ಕ್ ಸ್ಥಾಪಿಸುವಂತೆ ಪತ್ರ ಕಳುಹಿಸಿದ್ದರು. ಹೀಗಾಗಿ ವಿಜಯಪುರಕ್ಕೆ ಭೇಟಿ ನೀಡಿದಾಗ ಇಲ್ಲಿಗೆ ಬರುವುದಾಗಿ ಭರವಸೆ ನೀಡಿದ್ದೆ. ಈಗ ಬಂದು ಇಲ್ಲಿ ಜಾಗ ನೋಡಿದ್ದೇನೆ. ಈ ಜಾಗ ಬಹಳ ಸೂಕ್ತವಾಗಿದೆ. ಮುಂಬರುವ ಬಜೆಟ್ ನಲ್ಲಿ ಇಟ್ಟಂಗಿಹಾಳ ಫುಡ್ ಪಾರ್ಕ್ ಗೆ ಅವಕಾಶ ನೀಡಲಾಗುವುದು. ಇಲ್ಲಿ ಫುಡ್ ಪಾರ್ಕ್ ನಿರ್ಮಿಸುವುದರಿಂದ ವಿಜಯಪುರ ಜಿಲ್ಲೆಯಲ್ಲಿರುವ ತರಕಾರಿ, ತೋಟಗಾರಿಕೆ ಬೆಳೆಗಳನ್ನು ಸಂಸ್ಕರಿಸಲು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಕೂಡಲೇ ಅಧಿಕಾರಿಗಳ ಸಭೆ ಕರೆದು ಸಿಎಂ ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಆತ್ಮನಿರ್ಭರ ಯೋಜನೆಯಡಿ ರೂ. 1 ಲಕ್ಷ ಕೋಟಿ ಹಣವನ್ನು ಕೃಷಿ ಮೂಲಭೂತ ಸೌಕರ್ಯಗಳಿಗಾಗಿ ನೀಡಿದ್ದಾರೆ. ಅದರಲ್ಲಿ ರೂ. 10 ಸಾವಿರ ಕೋ. ಹಣವನ್ನು ಆಹಾರ ಸಂಸ್ಕರಣೆ ಘಟಕಗಳಿಗೆ ನೀಡಿದ್ದಾರೆ. ಅದನ್ನು ಉಪಯೋಗಿಸಿಕೊಂಡು ಇಲ್ಲಿ ಫುಡ್ ಪಾರ್ಕ್ ನಿರ್ಮಿಸಲಾಗುವುದು ಎಂದು ಬಿ. ಸಿ. ಪಾಟೀಲ ತಿಳಿಸಿದರು.
ಇದನ್ನೂ ಓದಿ: ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ಸರ್ಕಾರದಿಂದ ಕಣ್ಣೊರೆಸುವ ತಂತ್ರ: ಎಂಬಿ ಪಾಟೀಲ್ ವಾಗ್ದಾಳಿ
ಫುಡ್ ಪಾರ್ಕ್ ಸ್ಥಳ ವೀಕ್ಷಣೆ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ ಎಂ. ಬಿ. ಪಾಟೀಲ, ಈ ಜಾಗದಲ್ಲಿ ತೋಟಗಾರಿಕೆ ಬೆಳೆ ಸೇರಿದಂತೆ ಇತರ ಆಹಾರ ಪದಾರ್ಥಗಳ ಸಂಸ್ಕರಣೆ ಮಾಡಲು ಇಲ್ಲಿ ಸಾಕಷ್ಟು ಜಮೀನಿದೆ. ದ್ರಾಕ್ಷಾರಸ ಅಂದರೆ ವೈನರಿಗೆ ಪ್ರತ್ಯೇಕವಾಗಿ ಸ್ಥಳ ನಿಗದಿ ಪಡಿಸದೇ ಎಲ್ಲ ಸಣ್ಣ ಕೈಗಾರಿಕೆ ಘಟಕಗಳನ್ನು ಒಟ್ಟಿಗೆ ಸ್ಥಾಪಿಸಲು ಅವಕಾಶ ನೀಡುವುದರಿಂದ ಎರಡೆರಡು ಬಾರಿ ಮೂಲಭೂತ ಸೌಕರ್ಯಕ್ಕೆ ಹಣ ಖರ್ಚು ಮಾಡುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ಗಮನ ಹರಿಸುವಂತೆ ಸಚಿವರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿಜಯಪುರ ಜಿ. ಪಂ. ಅಧ್ಯಕ್ಷೆ ಸುಜಾತಾ ಸೋಮನಾಥ ಕಳ್ಳಿಮನಿ, ಬಿಜೆಪಿ ಮುಖಂಡರಾದ ವಿಜುಗೌಡ ಪಾಟೀಲ, ಅಶೋಕ ಅಲ್ಲಾಪುರ, ದ್ರಾಕ್ಷಿ ಬೆಳೆಗಾರರಾದ ಅಭಯ ನಾಂದ್ರೇಕರ, ಬಿ. ಎಚ್. ಮುಂಬಾರೆಡ್ಡಿ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.
ವರದಿ: ಮಹೇಶ ವಿ. ಶಟಗಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ