• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಚಿಕ್ಕಮಗಳೂರಿನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೀದಿಗೆ ಬಿತ್ತು ಕುಟುಂಬ; ಭಾರೀ ಮಳೆಗೆ ಇದ್ದೊಂದು ಮನೆಯೂ ನೆಲಸಮ

ಚಿಕ್ಕಮಗಳೂರಿನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೀದಿಗೆ ಬಿತ್ತು ಕುಟುಂಬ; ಭಾರೀ ಮಳೆಗೆ ಇದ್ದೊಂದು ಮನೆಯೂ ನೆಲಸಮ

ಕುಸಿದುಬಿದ್ದ ಮನೆಯ ಎದುರು ಅರುಣ್ ಕುಟುಂಬ

ಕುಸಿದುಬಿದ್ದ ಮನೆಯ ಎದುರು ಅರುಣ್ ಕುಟುಂಬ

Chikmagalur Rain: ಮನೆ ಬಿದ್ದ ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಅಧಿಕಾರಿಗಳು ನಿಮಗೆ ಬಂದಿದ್ದ ಹಣ ವಾಪಾಸ್ ಹೋಗಿದೆ ಅಂತಿದ್ದಾರೆ. ಅಧಿಕಾರಿಗಳ ಮಾತು ಈ ಕುಟುಂಬಕ್ಕೆ ಆಕಾಶವೇ ಕಳಚಿ ತಲೆಮೇಲೆ ಬಿದ್ದಂತಾಗಿದೆ.

  • Share this:

ಚಿಕ್ಕಮಗಳೂರು : ಕಾಫಿತೋಟದಲ್ಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದ ಬಡ ಕುಟುಂಬವೊಂದು ಬದುಕಿಗೊಂದು ಭದ್ರವಾದ ಸೂರಿನ ಕನಸು ಕಂಡು, ಮನೆ ಕಟ್ಟಲು ಸಿದ್ಧತೆ ಮಾಡಿಕೊಂಡಾಗ ಅಧಿಕಾರಿಗಳ ಯಡವಟ್ಟಿನಿಂದ ಬಂದ ಮನೆ ವಾಪಾಸ್ ಸರ್ಕಾರಕ್ಕೆ ಹೋಗಿ ಕುಟುಂಬವೊಂದು ಅತಂತ್ರವಾಗಿರೋ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಇಡಕನಿ ಗ್ರಾಮದ ಭದ್ರಾ ಕಾಲೋನಿಯಲ್ಲಿ ನಡೆದಿದೆ.


ಭದ್ರಾ ಕಾಲೋನಿಯ ಅರುಣ್ ಕುಟುಂಬ ಮನೆ ಇಲ್ಲದೆ ಅತಂತ್ರವಾಗಿರೋ ಕುಟುಂಬ. ಮೂರು ವರ್ಷದ ಹಿಂದೆ ಈ ಕುಟುಂಬ ಸರ್ಕಾರದ ವಸತಿ ಯೋಜನೆಯಡಿ ಹೊಸ ಮನೆ ಕನಸು ಕಂಡು ಸಾಲ ಮಾಡಿ ಪೌಂಡೇಷನ್ ಹಾಕಿದ್ರು. ಸರ್ಕಾರದ ಹಣ ಬಂದ ಕೂಡಲೇ ಗೋಡೆ ಕಟ್ಟಿ ಹೊಸ ಮನೆ ನಿರ್ಮಾಣದ ಕನಸು ಹೊತ್ತಿದ್ರು. ಆದ್ರೆ, ಮೂರು ವರ್ಷವಾದರೂ ಹಣ ಬರಲಿಲ್ಲ. ಕಛೇರಿಗೆ ಹೋಗಿ ಅಧಿಕಾರಿಗಳಿಗೆ ಹಣ ಕೇಳಿದಾಗೆಲ್ಲಾ ಬರುತ್ತೆ ಅಂತ ಹೇಳಿ ಕಳಿಸುತ್ತಿದ್ದರು. ಮೂರು ವರ್ಷವಾದರೂ ಹಣ ಬರಲೇ ಇಲ್ಲ. ಆದರೀಗ, ಈ ಕುಟುಂಬಕ್ಕೆ ಇದ್ದೊಂದು ಮನೆಯೂ ಮಳೆ-ಗಾಳಿಗೆ ನೆಲಸಮವಾಗಿದ್ದು, ಮನೆಯ ವಸ್ತುಗಳೆಲ್ಲವೂ ನಾಶವಾಗಿದೆ. ಸದ್ಯ ಈ ಬಡ ಕುಟುಂಬ ಬೀದಿಯಲ್ಲಿ ಬದುಕುವಂತಾಗಿದೆ.


Chikmagalur District Mudigere Poor Family Lost Their House after Havey Rain Karnataka Rains.
ಕುಸಿದುಬಿದ್ದ ಮನೆಯ ಎದುರು ಅರುಣ್ ಕುಟುಂಬ


ಇದನ್ನೂ ಓದಿ: Karnataka Unlock 2.0: ಶಿವಮೊಗ್ಗ, ಉಡುಪಿ ಸೇರಿ 6 ಜಿಲ್ಲೆಗಳು ಇಂದಿನಿಂದ ಅನ್​ಲಾಕ್; ಬಾರ್, ಅಂಗಡಿ, ರೆಸ್ಟೋರೆಂಟ್​ಗಳು ಓಪನ್


ಇನ್ನೂ ಈ ಮನೆ ಕಳೆದ ವರ್ಷವೇ ಅರ್ಧ ಬಿದ್ದು ಹೋಗಿತ್ತು. ಕೂಡಲೇ ಈ ಬಡಕುಟುಂಬ ಅಧಿಕಾರಿಗಳಿಗೆ ಮನವಿ ಕೂಡ ಸಲ್ಲಿಸಿದ್ದರು. ಆದರೆ, ಈ ವಾರದಲ್ಲಿ ಸುರಿದ ಮುಂಗಾರಿನ ಅಬ್ಬರಕ್ಕೆ ಉಳಿದಿದ್ದ ಅರ್ಧ ಮನೆಯೂ ನೆಲ ಕಚ್ಚಿದೆ. ಆದ್ದರಿಂದ ಇಂದು ಈ ಕುಟುಂಬ ಮಕ್ಕಳು-ಮರಿ ಸಮೇತ ಟಾರ್ಪಲ್ ಕಟ್ಟಿಕೊಂಡು ಅದರೊಳಗೆ ಬದುಕುವಂತಾಗಿದೆ. ಜೋರು ಗಾಳಿ ಸಮೇತ ಒಂದೇ ಒಂದು ಮಳೆ ಬಂದರೆ ಈಗಿರೋ ಶೆಡ್ ಕೂಡ ಕೊಚ್ಚಿ ಹೋಗುವುದರಲ್ಲಿ ಅನುಮಾನವಿಲ್ಲ.


ಮನೆ ಬಿದ್ದ ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಅಧಿಕಾರಿಗಳು ನಿಮಗೆ ಬಂದಿದ್ದ ಹಣ ವಾಪಾಸ್ ಹೋಗಿದೆ ಅಂತಿದ್ದಾರೆ. ಅಧಿಕಾರಿಗಳ ಮಾತು ಈ ಕುಟುಂಬಕ್ಕೆ ಆಕಾಶವೇ ಕಳಚಿ ತಲೆಮೇಲೆ ಬಿದ್ದಂತಾಗಿದೆ. ಇದ್ದ ಮನೆಯೂ ಇಲ್ಲ. ಕನಸು ಕಂಡಿದ್ದ ಹೊಸ ಮನೆಗೂ ಹಣವಿಲ್ಲ. ನಾವು ಬದುಕೋದು ಹೇಗೆಂದು ನೊಂದವರು ಕಣ್ಣೀರಿಡ್ತಿದ್ದಾರೆ.


ಒಟ್ಟಾರೆ, ಅಧಿಕಾರಿಗಳ ಬೇಜಾವಾಬ್ದಾರಿಯಿಂದ ಇಂದು ಈ ಕುಟುಂಬ ಬೀದಿಯಲ್ಲಿ ಬದುಕುವಂತಾಗಿದೆ. ಇದ್ದ ಮುರುಕಲು ಮನೆಯೂ ನೆಲಕಚ್ಚಿದೆ. ಹೊಸ ಮನೆಯ ಕನಸು ಮಳೆಯಲ್ಲಿ ಕೊಚ್ಚಿ ಹೋಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂದು ಈ ಕುಟುಂಬ ಸೂರಿಲ್ಲದೆ ಬೀದಿಯಲ್ಲಿ ನಿಲ್ಲುವಂತಾಗಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ. ಇನ್ನಾದ್ರು ಅಧಿಕಾರಿಗಳು ಇತ್ತ ಗಮನ ಹರಿಸಿ ಸೂರಿಲ್ಲದೆ ನಿರ್ಗತಿಕರಂತೆ ಟಾರ್ಪಲ್ ಸುತ್ತಿಕೊಂಡು ಬದುಕುತ್ತಿರೋ ಈ ಕುಟುಂಬ ಸೂರಿನ ಸೌಲಭ್ಯ ಕಲ್ಪಿಸಿ ಕೊಡಬೇಕಿದೆ.


(ವರದಿ: ವೀರೇಶ್ ಹೆಚ್ ಜಿ)

Published by:Sushma Chakre
First published: