ಚಿಕ್ಕಮಗಳೂರು: ಕಾಫಿನಾಡ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದವರಿಗೆಲ್ಲಾ ನಾನು ರಾಜೀನಾಮೆ ಕೊಡಲ್ಲ ಅನ್ನೋ ಖಯಾಲಿ ಅನ್ಸುತ್ತೆ. ಅಂದು ಚೈತ್ರಶ್ರೀ ಮಾಡಿದ್ದನ್ನೇ ಇಂದು ಸುಜಾತಾ ಕೃಷ್ಣಪ್ಪ ಮಾಡ್ತಿದ್ದಾರೆ. ಕೊರೋನಾ ಆರಂಭವಾದಾಗಿನಿಂದ ಜಿಲ್ಲಾ ಪಂಚಾಯಿತಿ ಸಭೆಗಳು ನಡೆದಿಲ್ಲ. ಜನರ ಸಮಸ್ಯೆ ನೂರಿವೆ. ಆದ್ರೆ, ಪಕ್ಷ ಹಾಗೂ ಸದಸ್ಯರಿಗೆ ಅಧ್ಯಕ್ಷರದ್ದೇ ಚಿಂತೆಯಾಗಿದೆ. ಆದ್ರೆ, ಅಧ್ಯಕ್ಷರು, ಸದಸ್ಯರು ಹಾಗೂ ಪಕ್ಷದ ಈ ಮುಸುಕಿನ ಗುದ್ದಾಟಕ್ಕೆ ಅಂದು ಅಧ್ಯಕ್ಷರು ಜಿಪಂ ಅಧ್ಯಕ್ಷರ ಕೊಠಡಿಯ ಬಾಗಿಲು ತೆಗೆಸದಿರೋದೆ ಕಾರಣವಾ ಎಂಬ ಅನುಮಾನ ಮೂಡಿದೆ. ಯಾಕಂದ್ರೆ, ಜಿಪಂ ಅಧ್ಯಕ್ಷರಿಗೆ ಕೊರೋನಾ ಪಾಸಿಟಿವ್ ಬಂದಾಗ 25 ದಿನಗಳ ಕಾಲ ಕಚೇರಿಯ ಬೀಗ ತೆಗೆಸಿರಲಿಲ್ಲ. ಅಧ್ಯಕ್ಷರ ಕಚೇರಿ ಸೀಲ್ಡೌನ್ ಆದಾಗ, ಸ್ಯಾನಿಟೈಸ್ ಮಾಡಿಸಿ ವೈದ್ಯರು ಹೇಳಿದಷ್ಟು ದಿನ ಲಾಕ್ ಮಾಡಿಸಿ ನಂತರ ಓಪನ್ ಮಾಡಿಸಿ ವ್ಯವಸ್ಥೆ ಇರಲಿ ಎಂದು ಉಪಾಧ್ಯಕ್ಷರು ಅಧ್ಯಕ್ಷರಿಗೆ ಫೋನ್ ಮಾಡಿ ಹೇಳಿದ್ದರಂತೆ. ಆದರೆ, ಅವರು 25 ದಿನಗಳ ಕಾಲ ಕಚೇರಿಯನ್ನ ಓಪನ್ ಮಾಡಿಸಿರಲಿಲ್ಲ. ಇದೇ ಪಕ್ಷ ಹಾಗೂ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದ್ಯಾ ಎಂಬ ಅನುಮಾನವೂ ಈಗ ಬಲವಾಗಿದೆ. ಈ ಮಧ್ಯೆ, ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ಜಿಪಂ ಅಧ್ಯಕ್ಷರು ಒಬ್ಬರ ಮೇಲೊಬ್ಬರು ಆರೋಪಿಸಿಕೊಳ್ಳುತ್ತಿದ್ದಾರೆ.
ಜಿಪಂ ಅಧ್ಯಕ್ಷರ ಬೆಂಬಲಿಗರು ಅಧ್ಯಕ್ಷರ ಮೇಲೆ ದೌರ್ಜನ್ಯವೆಸಗಿ ಕೆಳಗಿಳಿಸಿದರೆ ದೂರು ದಾಖಲಿಸೋದಾಗಿ ಎಚ್ಚರಿಸಿದ್ದಾರೆ. ಇನ್ನು ಈ ವಿಷಯ ಸಚಿವ ಸಿ.ಟಿ. ರವಿ ಗಮನಕ್ಕೂ ಬಂದಿದ್ದು, ಪಕ್ಷ ಹೇಳಿದ್ದನ್ನ ಯಾರಾದ್ರೂ ಕೇಳಲೇಬೇಕು ಎಂದು ಪರೋಕ್ಷವಾಗಿ ಸುಜಾತಾ ಕೃಷ್ಣಪ್ಪರಿಗೆ ರಾಜೀನಾಮೆ ಕೊಡುವಂತೆ ಹೇಳಿದ್ದಾರೆ. ಅವರನ್ನ ಅಧ್ಯಕ್ಷರನ್ನಾಗಿ ಮಾಡಿದ್ದು ಬಿಜೆಪಿ. ಪಕ್ಷದ ಸೂಚನೆಯನ್ನ ಅವರು ಪಾಲಿಸಬೇಕು. ರಾಜೀನಾಮೆ ಕೊಡಬೇಕು ಎಂಬುದು ಪಕ್ಷದ ಸೂಚನೆ. ಎಲ್ಲರೂ ಕೂತ ಚರ್ಚಿಸಿ ಮಾಡಿದ ತೀರ್ಮಾನವದು. ಅದನ್ನ ಅವರ ಗಮನಕ್ಕೂ ತರಲಾಗಿದೆ. ಹಿಂದಿನ ಅಧ್ಯಕ್ಷೆ ಚೈತ್ರಶ್ರೀ ಮಾಲತೇಶ್ ರಾಜೀನಾಮೆ ನೀಡುವಾಗ ಕೊನೆ ಹತ್ತು ತಿಂಗಳು ಬಿಟ್ಟುಕೊಡಬೇಕು ಎಂದಿದ್ದರು. ಅಂದಿನ ಬಿಜೆಪಿ ಜಿಲ್ಲಾಧ್ಯಕ್ಷ ಜೀವರಾಜ್ ಒಪ್ಪಿಗೆ ಸೂಚಿಸಿದ ಮೇಲೆ ರಾಜೀನಾಮೆ ಕೊಟ್ಟರು. ಸುಜಾತ ಅಧ್ಯಕ್ಷರಾಗುವಾಗಲೂ ಹೇಳಿತ್ತು ಪಕ್ಷ ಹೇಳಿದಾಗ ರಾಜೀನಾಮೆ ಕೊಡಬೇಕೆಂದು. ಕೊಟ್ಟ ಮಾತಿನಂತೆ ಚೈತ್ರಶ್ರೀಯನ್ನ ಕೂರಿಸಬೇಕು. ಅದರ ಪ್ರಕಾರ ರಾಜೀನಾಮೆ ಕೊಡಿ ಎಂದು ಪಕ್ಷ ಹೇಳಿದೆ. ಮೀಸಲಾತಿ ಪ್ರಕಾರ ಯಾರೇ ಬಂದರೂ ದಲಿತರೇ ಕೂರಬೇಕು. ಬೇರೆಯವರು ಕೂರಲು ಆಗಲ್ಲ. ಅವರನ್ನ ಅಧ್ಯಕ್ಷರನ್ನಾಗಿ ಮಾಡಿದ್ದು ಪಾರ್ಟಿ. ಪಕ್ಷ ಹೇಳಿದಾಗ ರಾಜೀನಾಮೆ ಕೊಡಬೇಕು ಅದನ್ನ ಯಾರಾದ್ರೂ ಪಾಲಿಸಬೇಕು ಎಂದು ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ಇದನ್ನೂ ಓದಿ: ನಾನು ಯಾವತ್ತಿದ್ರೂ ಹೀರೋನೇ, ವಿಲನ್ ಆಗೋಕೆ ಸಾಧ್ಯವೇ ಇಲ್ಲ; ಸಿದ್ದರಾಮಯ್ಯ
ಒಟ್ಟಾರೆ, ಈ ರಾಜಕೀಯ ಮುಸುಕಿನ ಗುದ್ದಾಟ ಎಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ. ಸುಜಾತ ಕೃಷ್ಣಪ್ಪ ರಾಜೀನಾಮೆ ಕೊಡ್ತಾರೋ ಇಲ್ಲವೋ. ಪಕ್ಷ ಚೈತ್ರಶ್ರೀಯನ್ನ ಉಚ್ಛಾಟನೆ ಮಾಡಿದಂತೆ ಇವರನ್ನೂ ಉಚ್ಛಾಟನೆ ಮಾಡುತ್ತೋ ಏನೋ ಗೊತ್ತಿಲ್ಲ. ಆದ್ರೆ, ಜಿಲ್ಲೆಯಲ್ಲಿ ಕೆಲ ಜ್ವಲಂತ ಸಮಸ್ಯೆಗಳಿವೆ. ಜೊತೆಗೆ, ಭದ್ರಾ ಹುಲಿ ಯೋಜನೆಯ ಬಫರ್ ಜ್ಹೋನ್ ಹಳ್ಳಿಗಳನ್ನೇ ತಿಂದಾಕುತ್ತಿದೆ. ಈ ಮಧ್ಯೆ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರ ನಡುವಿನ ಮುಸುಕಿನ ಗುದ್ದಾಟದಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ ಎಂದು ಜನ ಅಸಮಾಧಾನ ಹೊರಹಾಕ್ತಿದ್ದು, ಬಿಜೆಪಿ ಆದಷ್ಟು ಬೇಗ ತಮ್ಮ ಸಮಸ್ಯೆಯನ್ನ ಬಗೆಹರಿಸಿಕೊಳ್ಳುವಂತೆ ಆಗ್ರಹಿಸಿದ್ದಾರೆ.
ವರದಿ: ವೀರೇಶ್ ಹೆಚ್ ಜಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ