ಚಾಮರಾಜನಗರ ( ನವೆಂಬರ್ 23); ಪ್ರತಿಭಟನೆ, ಹೋರಾಟಗಳ ಸಂದರ್ಭದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದರೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡುವುದು, ಅಶ್ರುವಾಯು ಸಿಡಿಸುವುದು, ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಳ್ಳುವುದು ಹೀಗೆ ನಾನಾ ರೀತಿಯ ಕ್ರಮಗಳನ್ನು ಅನುಸರಿಸುತ್ತಾರೆ. ಆದರೆ ಚಾಮರಾಜನಗರದಲ್ಲಿ ಪ್ರತಿಭಟನೆಯೊಂದರ ಸಂದರ್ಭದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವುದನ್ನು ಅರಿತ ಡಿವೈಎಸ್ಪಿ ಒಬ್ಬರು ಜನಗಣಮನ ಹಾಡುವ ಮೂಲಕ ಪರಿಸ್ಥಿತಿಯನ್ನು ತಹಬದಿಗೆ ತಂದ ಘಟನೆ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಅಲ್ಲಲ್ಲಿ ನಡೆಯುತ್ತಿರುವ ಮತಾಂತರವನ್ನು ವಿರೋಧಿಸಿ ಮತಾಂತರ ವಿರೋಧಿ ಹೋರಾಟ ಸಮಿತಿಯಿಂದ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಹಿಂದೂಪರ ಸಂಘಟನೆಗಳ 500ಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಗರದ ಹಳೇ ಖಾಸಗಿ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಜಿಲ್ಲಾಡಳಿತ ಭವನದ ಗೇಟ್ ಮುಂಭಾಗದ ಜೋಡಿರಸ್ತೆಯಲ್ಲಿ ಜಮಾಯಿಸಿದರು.
ಬಳಿಕ ಗೇಟ್ ಮೂಲಕ ಜಿಲ್ಲಾಡಳಿತ ಭವನದ ಆವರಣಕ್ಕೆ ಪ್ರತಿಭಟನಾಕಾರರು ಪ್ರವೇಶಿಸಿದರು. ನಂತರ ಅವರನ್ನು ಹಿಂಬಾಲಿಸಿ ಮೈಕ್ ಇರುವ ವಾಹನವೂ ಪ್ರವೇಶ ಮಾಡಲು ಯತ್ನಿಸಿತು. ಆದರೆ ಈ ವಾಹನ ಪ್ರವೇಶಕ್ಕೆ ಅವಕಾಶ ನೀಡದ ಪೊಲೀಸರು ವಾಹನ ಅಡ್ಡಗಟ್ಟಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾನಿರತರ ನಡುವೆ ವಾಗ್ವಾದ, ಮಾತಿನ ಚಕಮಕಿ ನಡೆಯಿತು. ತಳ್ಳಾಟ ನೂಕಾಟ ನಡೆಯಿತು.
ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಡಿವೈಎಸ್ಪಿ ಪ್ರಿಯದರ್ಶನಿ ಸಾಣೆಕೊಪ್ಪ ಅವರು ತಮ್ಮ ವಾಹನದಲ್ಲಿದ್ದ ಮೈಕ್ ಹಿಡಿದು ರಾಷ್ಟ್ರಗೀತೆ ಹಾಡಲು ಶುರು ಮಾಡಿದರು. ರಾಷ್ಟ್ರಗೀತೆ ಕೇಳುತ್ತಿದ್ದಂತೆ ಪ್ರತಿಭಟನಾಕಾರರು ತಾವೂ ಸಹ ರಾಷ್ಟ್ರಗೀತೆ ಹಾಡುತ್ತಾ ವಾಗ್ವಾದ, ತಳ್ಳಾಟ ನೂಕಾಟ, ನಿಲ್ಲಿಸಿದರು. ಈ ವೇಳೆ ಪರಿಸ್ಥಿತಿ ತಣ್ಣಗಾಯ್ತು. ಡಿವೈಎಸ್ಪಿ ಪ್ರಿಯದರ್ಶನಿ ಸಾಣೆಕೊಪ್ಪ ಮಾಡಿದ ಪ್ಲಾನ್ ಸಕ್ಸಸ್ ಆಯಿತು.
ಇದನ್ನು ಓದಿ: ಸಂಪುಟ ವಿಸ್ತರಣೆಯಾಗಲಿದೆ, ಪುನಾರಚನೆ ಆಗುವುದಿಲ್ಲ, ನಾನು ಮಂತ್ರಿ ಸ್ಥಾನ ಕಳೆದುಕೊಳ್ಳುವುದಿಲ್ಲ; ಸಚಿವ ಪ್ರಭು ಚವ್ಹಾಣ
ಕಳೆದ ಹದಿನೈದು ದಿನಗಳ ಹಿಂದಷ್ಟೇ ಚಾಮರಾಜನಗರ ಡಿವೈಎಸ್ಪಿಯಾಗಿ ವರ್ಗಾವಣೆಯಾಗಿ ಬಂದಿರುವ ಪ್ರಿಯದರ್ಶನಿ ಸಾಣೆಕೊಪ್ಪ ಕೆಲದಿನಗಳ ಹಿಂದೆ ಮಹದೇಶ್ವರನ ಮೇಲೆ ಸೋಜುಗಾದ ಸೂಜು ಮಲ್ಲಿಗೆ ಎಂಬ ಹಾಡು ಹಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.
ವರದಿ; ಎಸ್.ಎಂ.ನಂದೀಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ