ವಿಜಯಪುರ (ಡಿ. 14); ವಿಜಯಪುರ ಜಿಲ್ಲೆಯಲ್ಲಿ ಭೀಮಾ ಪ್ರವಾಹದಿಂದ ಹಾನಿಗೀಡಾದ ಬೆಳೆ, ಮನೆ ಮತ್ತು ಮೂಲ ಸೌಕರ್ಯಗಳ ಹಾನಿ ಕುರಿತಂತೆ ಕೇಂದ್ರ ನೆರೆ ಅಧ್ಯಯನ ತಂಡ ವಿಜಯಪುರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿತು. ಕಲಬುರಗಿಯಿಂದ ನೇರವಾಗಿ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣಕ್ಕೆ ಆಗಮಿಸಿದ ಈ ತಂಡಕ್ಕೆ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಪಿಪಿಟಿ ಮೂಲಕ ಮಾಹಿತಿ ನೀಡಿದರು.
ಹೈದರಾಬಾದ್ ಕೃಷಿ ಮತ್ತು ರೈತ ಸಚಿವಾಲಯದ ಬೀಜ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕರಾದ ಡಾ. ಮನೋಹರನ್, ಬೆಂಗಳೂರು ಜಲಶಕ್ತಿ ಸಚಿವಾಲಯದ (ಎಚ್ಒ ಮತ್ತು ಪಿಪಿ) ಅಧೀಕ್ಷಕ ಅಭಿಯಂತರರಾದ ಗುರುಪ್ರಸಾದ್ ಜೆ ಹಾಗೂ ನೈಸರ್ಗಿಕ ವಿಕೋಪ ಕೇಂದ್ರ (ಕೆಎಸ್ಎನ್ಡಿಎಮ್ಸಿ) ಕಂದಾಯ ಇಲಾಖೆಯ ಸಿನಿಯರ್ ಕನ್ಸಲ್ಟಂಟ್ ಡಾ.ಜಿ.ಎಸ್. ಶ್ರೀನಿವಾಸ ರೆಡ್ಡಿ ಅವರನ್ನು ಒಳಗೊಂಡ ಮೂರು ಜನ ಅಧಿಕಾರಿಗಳ ತಂಡ ಈ ಕುರಿತು ಪರಿಶೀಲನೆ ನಡೆಸಿತು.
ವಿಜಯಪುರ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ಪಿಪಿಟಿ ಮೂಲಕ ಅಧ್ಯಯನ ತಂಡಕ್ಕೆ ಭೀಮಾ ಹಾಗೂ ಡೋಣಿ ನದಿಯಿಂದ ಪ್ರವಾಹಕ್ಕೊಳಗಾದ ಹಾಗೂ ಅ. 11 ರಿಂದ 22 ರವರೆಗೆ ಸುರಿದ ಭಾರಿ ಮಳೆಯಿಂದ ಹಾನಿಯಾದ ಭೀಮಾ ನದಿಯಿಂದ ಪ್ರವಾಹಕ್ಕೆ ನಲುಗಿದ ಚಡಚಣ, ಇಂಡಿ ಮತ್ತು ಸಿಂದಗಿ ತಾಲೂಕುಗಳಲ್ಲಿ ಕೃಷಿ, ತೋಟಗಾರಿಕೆ, ಮನೆ ಹಾನಿ ಹಾಗೂ ಮೂಲ ಸೌಕರ್ಯ ಹಾನಿಯಾದ ಬಗ್ಗೆ ಮಾಹಿತಿ ನೀಡಿದರು.
ಅ. 13 ಮತ್ತು 14 ರಂದು ಬಾರಿ ಮಳೆಯಾಗಿದ್ದು, ಭೀಮಾ ನದಿಗೂ ಪ್ರವಾಹ ಬಂದಿತ್ತು. ಪ್ರವಾಹದಿಂದಾಗಿ ಚಡಚಣ, ಇಂಡಿ ಹಾಗೂ ಸಿಂದಗಿ ತಾಲ್ಲೂಕುಗಳ 28 ಗ್ರಾಮಗಳು ತೊಂದರೆಗೀಡಾಗಿದ್ದವು. ಇತರ ತಾಲೂಕುಗಳೂ ಕೂಡ ಅತೀವೃಷ್ಟಿಗೆ ತುತ್ತಾಗಿದ್ದು, ಈ ಗ್ರಾಮಗಳಲ್ಲಿ 4041 ಮನೆಗಳಿಗೆ ನೀರು ನುಗ್ಗಿತ್ತು. ಎನ್ಡಿಆರ್ಎಫ್ ಎರಡು ತಂಡಗಳು ಎಸ್ಡಿಆರ್ಎಫ್ ಒಂದು ತಂಡ ಎಮ್ಎಲ್ಐಆರ್ಪಿ (ಮಿಲಟರಿ) ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, 1516 ಜನರನ್ನು ರಕ್ಷಣೆ ಮಾಡಲಾಗಿದೆ. ಒಟ್ಟು 42 ಕಾಳಜಿ ಕೇಂದ್ರಗಳನ್ನು ತೆರೆದು ಸಂತ್ರಸ್ತರಿಗೆ ನೆರವು ನೀಡಲಾಗಿತ್ತು. ಈ ಪ್ರವಾಹ ಸಂತ್ರಸ್ತರಿಗೆ ತಲಾ 10. 0000 ಪರಿಹಾರ ನೀಡಲಾಗಿದೆ. ಅಲ್ಲದೇ, ವೈದ್ಯಕೀಯ ನೆರವನ್ನು ಕೂಡ ನೀಡಲಾಗಿದೆ. ಅತೀವೃಷ್ಟಿ ಮತ್ತು ಪ್ರವಾಹದ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯಲ್ಲಿ 12 ಜನ ಸಾವಿಗೀಡಾಗಿದ್ದು, 13 ಜಾನುವಾರುಗಳೂ ಬಲಿಯಾಗಿವೆ. 207146.00 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. ತೋಟಗಾರಿಕಾ ಬೆಳೆ ಹಾನಿ - 11929.10 ಹೆಕ್ಟೇರ್, ಮತ್ತು ಮೂಲಸೌಕರ್ಯ ಹಾನಿ -119007.36 ಹಾನಿ ಕುರಿತಂತೆ ತಂಡಕ್ಕೆ ಮಾಹಿತಿ ನೀಡಿದರು.
ಇದನ್ನು ಓದಿ: ಮುಷ್ಕರ ನಿಲ್ಲಿಸಿದ ಸಾರಿಗೆ ನೌಕರರು; ಬಸ್ ಸಂಚಾರ ಆರಂಭ
ಸಭೆಯ ಬಳಿಕ ಕೇಂದ್ರ ಅಧ್ಯಯನ ತಂಡ ಸಿಂದಗಿ ಸಮೀಪದ ರಾಂಪೂರ ಗ್ರಾಮದಲ್ಲಿ ತೊಗರಿ ಬೆಳೆ ಹಾನಿ ಮತ್ತು ಹತ್ತಿ ಬೆಳೆ ಹಾನಿ ಹಾಗೂ ಕೋರಹಳ್ಳಿಯಲ್ಲಿ ಹತ್ತಿ ಬೆಳೆ ಹಾನಿ ಕುರಿತಂತೆ ಪರಿಶೀಲನೆ ನಡೆಸಿ, ಸಂಬಂಧಿಸಿದ ಅಧಿಕಾರಿಗಳು ಮತ್ತು ರೈತರಿಂದ ಮಾಹಿತಿ ಪಡೆಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ