ಹುಬ್ಬಳ್ಳಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ಎಸ್.ಐ.ಟಿ. ಯಿಂದ ತಾರ್ಕಿಕ ಅಂತ್ಯ ಕಾಣೋದಿಲ್ಲ. ಸಿಬಿಐ ತನಿಖೆಯೇ ಸೂಕ್ತ ಎಂದು ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ ಅಭಿಪ್ರಾಯಪಟ್ಟಿದ್ದಾರೆ. ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಸಿಡಿ ಪ್ರಕರಣವನ್ನು ಮುಚ್ಚಿ ಹಾಕೋ ಪ್ರಯತ್ನ ನಡೀತಿದೆ. ಎಸ್.ಐ.ಟಿ ತನಿಖೆಯಿಂದ ಏನೂ ಪ್ರಯೋಜನವಿಲ್ಲ. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ಹೈಕೋರ್ಟ್ ನ ಹಾಲಿ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ತನಿಖೆ ನಡೆಸಬೇಕು. ಸಿಬಿಐನಲ್ಲಿ ಹಲವಾರು ದಕ್ಷ ಅಧಿಕಾರಿಗಳಿದ್ದು, ಅವರಿಂದ ನಿಷ್ಪಕ್ಷಪಾತ ತನಿಖೆ ನಡೆಯುತ್ತೆ ಅನ್ನೊ ನಂಬಿಕೆಯಿದೆ ಎಂದರು.
ಸಿಡಿ ಪ್ರಕರಣದ ಸಂತ್ರಸ್ತೆ ನೆರವು ಕೋರಿ ಬಂದಲ್ಲಿ ನೆರವು ಕೊಡ್ತೇನೆ. ಆದರೆ ನಿಜವಾಗಿಯೂ ಆಕೆ ಸಂತ್ರಸ್ತೆ ಅನಿಸಿಕೊಂಡಲ್ಲಿ ಖಂಡಿತಾ ನೆರವು ಕೊಡ್ತೇನೆ. ನನ್ನ ಬಳಿ ಬಹಳಷ್ಟು ಸಿಡಿ ಇವೆ ಅಂತ ಹೇಳಿಲ್ಲ. ಉತ್ತರ ಕರ್ನಾಟಕದ ಶಾಸಕರು ಮುಗ್ಧರಿದ್ದಾರೆ. ಅವರ ಮುಗ್ಧತೆ ದುರ್ಬಳಕೆ ಮಾಡಿಕೊಳ್ಳೊ ವ್ಯವಸ್ಥಿತ ಜಾಲವೇ ಇದೆ. ಬೆಳಗಾವಿ ಅಧಿವೇಶನಕ್ಕೆ ಬಂದಾಗ ಕೆಲವೊಬ್ಬರು ಗೋವಾಕ್ಕೆ ಹೋಗ್ತಾರೆ. ಇಂತಹ ಸಂದರ್ಭದಲ್ಲಿ ಎಚ್ಚರದಿಂದಿರೋದು ಒಳ್ಳೆಯದು. ರಾಜಕಾರಣಿಗಳು ಮೈ ಮರೆಯಬಾರದು. ಮೊನ್ನೆಯ ಪ್ರಕರಣದ ನಂತರ ರಾಜಕಾರಣಿಗಳ ಮುಖ ನೋಡೋಕೆ ಅಸಹ್ಯವಾಗುತ್ತಿದೆ ಎಂದು ಹೇಳಿದರು.
ಹಿಂದೆ ಮೇಟಿ ಪ್ರಕರಣದ ಸಂದರ್ಭದಲ್ಲಿ ಹೋರಾಟ ಮಾಡಿದ್ದೆ. ಅದು ಸರ್ಕಾರಿ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಕಾರಣಕ್ಕೆ ಹೋರಾಟ ಮಾಡಿದ್ದೆ. ಈಗಿನ ಸಿಡಿ ಪ್ರಕರಣಕ್ಕೂ, ಆಗಿನ ಪ್ರಕರಣಕ್ಕೂ ವ್ಯತ್ಯಾಸವಿದೆ. ಇದೀಗ ಸಚಿವರೊಬ್ಬರು ಎಲ್ಲ 224 ಶಾಸಕರ ನೈತಿಕತೆ ಬಗ್ಗೆಯೂ ಮಾತನಾಡಿದ್ದಾರೆ. ಈ ರೀತಿ ಮನಸ್ಸಿಗೆ ಬಂದಂತೆ ಜವಾಬ್ದಾರಿಯುತ ಸಚಿವರು ಹೇಳಿಕೆ ನೀಡುವುದು ಸರಿಯಲ್ಲ ಎಂದು ಸಚಿವ ಸುಧಾಕರ್ ವಿರುದ್ಧ ಮುಲಾಲಿ ಕಿಡಿಕಾರಿದರು.
ಸಚಿವರ ಒಂದು ಹೇಳಿಕೆಯಿಂದ 2 ದಿನಗಳ ಕಾಲ ಕಲಾಪ ಸುಸೂತ್ರವಾಗಿ ನಡೆದಿಲ್ಲ. ಸದನದಲ್ಲಿ ಚರ್ಚಿಸೋಕೆ ಸಾಕಷ್ಟು ವಿಷಯಗಳಿವೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಹಲವಾರು ಜ್ವಲಂತ ಸಮಸ್ಯೆಗಳಿದ್ದರೂ ಅದರ ಬಗ್ಗೆ ಚರ್ಚಿಸೋದು ಬಿಟ್ಟು, ಸಿಡಿ ವಿಷಯ ಇಟ್ಟುಕೊಂಡು ಜನಪ್ರತಿನಿಧಿಗಳು ಕಾಲಹರಣ ಮಾಡ್ತಿದ್ದಾರೆ.
ಇದನ್ನು ಓದಿ: ಕೊರೋನಾ 2ನೇ ಅಲೆ ಏಪ್ರಿಲ್ ದ್ವಿತೀಯಾರ್ಧದಲ್ಲಿ ದ್ವಿಗುಣಗೊಳ್ಳಬಹುದು; ಎಸ್ಬಿಐ ವರದಿ
ಕಸಾಪಕ್ಕೆ ಆಶೀರ್ವಾದ ನೀಡಿ ಎಂದ ಮುಲಾಲಿ
ಕನ್ನಡ ಸಾಹಿತ್ಯ ಪರಿಷತ್ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ತಾಣವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ ಆರೋಪಿಸಿದ್ದಾರೆ. ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಸಾಹಿತ್ಯ ಪರಿಷತ್ ಹುಟ್ಟಿ 105 ಗಳಾದರೂ ಕನ್ನಡಿಗರ ಮನೆ ಮಾತಾಗುವಲ್ಲಿ ವಿಫಲವಾಗಿದೆ. ಕ.ಸಾ.ಪ ನಿವೃತ್ತ ಅಧಿಕಾರಿಗಳ ತಾಣವಾಗಿದೆ. ನಿವೃತ್ತರಿಗೆ ಗಂಜಿ ಕೇಂದ್ರವಾಗಿ ಮಾರ್ಪಟ್ಟಿದೆ. ಭ್ರಷ್ಟಾಚಾರ, ಹಣ ದುರುಪಯೋಗದ ಕೇಂದ್ರವಾಗಿದೆ. ಕ.ಸಾ.ಪ. ದಲ್ಲಿ ಆಮೂಲಾಗ್ರ ಬದಲಾವಣೆ ತರೋಕೆ ಸ್ಪರ್ಧೆ ಮಾಡುತ್ತಿದ್ದೇನೆ. ಈ ಬಾರಿಯ ಕೇಂದ್ರ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದೇನೆ. ಆಯ್ಕೆಯಾದಲ್ಲಿ ಮಹಿಳಾ ಘಟಕ, ರೈತ ಘಟಕ ಸ್ಥಾಪಿಸುತ್ತೇನೆ. ಪ್ರತಿ ಜಿಲ್ಲೆ, ತಾಲೂಕು ಕೇಂದ್ರದಲ್ಲಿ ಕನ್ನಡ ಭವನ ಸ್ಥಾಪಿಸ್ತೇನೆ ಎಂದು ರಾಜಶೇಖರ ಮುಲಾಲಿ ತಿಳಿಸಿದ್ದಾರೆ.
ವರದಿ - ಶಿವರಾಮ ಅಸುಂಡಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ