news18-kannada Updated:November 2, 2020, 8:17 PM IST
ಸಾಂದರ್ಭಿಕ ಚಿತ್ರ
ಬೀದರ್: ಕೃಷಿ ಚಟುವಟಿಕೆಗೆ ಹೊಡೆತ ಬಿದ್ದಿರುವುದರಿಂದ ರೈತರು ಹೈನುಗಾರಿಕೆಯತ್ತ ಆಸಕ್ತರಾಗುತ್ತಿದ್ದಾರೆ. ಆದರೆ ಬೀದರ್ ಜಿಲ್ಲೆಯ ಪಶು ಆಸ್ಪತ್ರೆಗಳಲ್ಲಿ ಹೈನುಗಾರಿಕೆ ಮತ್ತು ಪಶು ಪಾಲನೆಯನ್ನು ಪ್ರೋತ್ಸಾಹಿಸುವುದಕ್ಕೆ ಸಿಬ್ಬಂದಿಯೇ ಇಲ್ಲ. ಖುದ್ದು ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರ ತವರು ಜಿಲ್ಲೆಯಲ್ಲಿಯೇ ಈ ಅವ್ಯವಸ್ಥೆಯಿದೆ. ಜಾನುವಾರು ಕಾಯಿಲೆ ಬಿದ್ದರೆ ಅವುಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಪಶು ಚಿಕಿತ್ಸಾಲಯಗಳಲ್ಲಿ ಸರಿಯಾದ ಸಮಯಕ್ಕೆ ಔಷಧಿ ಬರುತ್ತಿಲ್ಲ. ಹೀಗಾಗಿ ಜಿಲ್ಲೆಯ ಜಾನುವಾರು ಸಾಕಾಣಿಕೆದಾರರು ಸಂಕಷ್ಟ ಎದುರಿಸುವಂತಾಗಿದೆ.
ಗ್ರಾಮೀಣ ಭಾಗದಲ್ಲಿ ರೈತಾಪಿ ಸಮುದಾಯದ ಜೀವನಾಡಿ ಜಾನುವಾರುಗಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಲಸಿಕೆಯುಂಟು. ಆದರೆ ರೋಗಗಳಿಗೆ ತುತ್ತಾದರೆ ಆ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಔಷಧಿಯೇ ಇಲ್ಲ! ಬೀದರ್ ಜಿಲ್ಲೆಗೆ ನಿಗದಿತ ಸಮಯಕ್ಕೆ ಔಷಧಿ ಪೂರೈಕೆ ಆಗದ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ನೀಡಲು ಔಷಧಿ ಕೊರತೆ ಎದುರಾಗಿದೆ. ಮೊದಲೇ ಪಶು ವೈದ್ಯರ ಕೊರತೆ ಎದುರಿಸುತ್ತಿರುವ ಜಿಲ್ಲೆಯಲ್ಲಿ ಈಗ ಔಷಧಿ ಕೊರತೆ ಉಂಟಾಗಿರುವ ಕಾರಣ ಜಾನುವಾರುಗಳಿಗೆ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಇನ್ನು ಔಷಧಿ ಇಲ್ಲದ ಕಾರಣದಿಂದ ವೈದ್ಯರೇ ಚೀಟಿ ಬರೆದು ಔಷಧಿ ತರುವಂತೆ ಜಾನುವಾರು ಮಾಲೀಕರಿಗೆ ಕೊಡುತ್ತಿದ್ದಾರೆ. ಇದರಿಂದ ಜಾನುವಾರುಗಳ ಮಾಲೀಕರೂ ಸಹ ಸಂಕಷ್ಟ ಎದುರಾಗುವಂತಾಗಿದೆ.
ಗಡಿ ಜಿಲ್ಲೆ ಬೀದರ್ ನಲ್ಲಿ 114 ಪಶು ಆಸ್ಪತ್ರೆ ಮತ್ತು ಚಿಕಿತ್ಸಾ ಕೇಂದ್ರಗಳಿವೆ. ಬೆಂಗಳೂರಿನ ಪಶು ಇಲಾಖೆಯಿಂದ ವರ್ಷಕ್ಕೆ ಎರಡು ಬಾರಿ ಔಷಧಿಗಳು ಸರಬರಾಜಾಗಬೇಕು. ಇನ್ನೂ ಜಿಲ್ಲಾ ಪಂಚಾಯತ್ ಯಿಂದ ಸೆಪ್ಟಂಬರ್ ಹಾಗೂ ಡಿಸೆಂಬರ್ 2019 ರಂದು ಹೆಸರಿಗೆ ಮಾತ್ರ ಕೆಲವು ಔಷಧಿಗಳು ಸರಬರಾಜಾಗಿವೆ. ಹೆಚ್ಚಿನ ಬೆಲೆಯ ಹಾಗೂ ಗುಣಮಟ್ಟದ ಔಷಧಿಗಳು ಸರಬರಾಜಾಗಿಲ್ಲ. ಇನ್ನೂ ಜಿಲ್ಲೆಯಲ್ಲಿ ಪಶು ಸಂಗೋಪನಾ ಇಲಾಖೆಯ ಮಹತ್ವದ ಹುದ್ದೆಗಳು ಸೇರಿದಂತೆ ಪಶು ವೈದ್ಯಾಧಿಕಾರಿ, ಜಾನುವಾರು ಅಭಿವೃದ್ಧಿ ಅಧಿಕಾರಿ, ಹಿರಿಯ ಪಶುವೈದ್ಯಕೀಯ ಪರೀಕ್ಷಕರು ಸೇರಿದಂತೆ ಒಟ್ಟು 156 ಪ್ರಮುಖವಾದ ಹುದ್ದೆಗಳು ಖಾಲಿಯಿವೆ.
ಇದನ್ನು ಓದಿ: ಹಿಮ್ಮುಖವಾಗಿ ಶೂಟ್ ಮಾಡುವ ಟ್ರೆಂಡ್ಗೆ ನಾಂದಿ; ಕನ್ನಡಿ ನೋಡಿ ಗುರಿ ತಪ್ಪದಂತೆ ಶೂಟ್ ಮಾಡುವ ಡೀನಾ!
ಹೀಗಾಗಿ ರೈತರು ತಾವು ಚಿಕಿತ್ಸೆಗೆ ತಂದ ಜಾನುವಾರುಗಳಿಗೆ ಸರಿಯಾಗಿ ಚಿಕಿತ್ಸೆಯೇ ಸಿಗುತ್ತಿಲ್ಲದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಗ್ಗೆ ಪಶು ವೈದ್ಯಾಧಿಕಾರಿಯನ್ನ ಕೇಳಿದರೆ ಟೆಂಡರ್ ಆಗುವುದು ಸ್ವಲ್ಪ ವಿಳಂಬವಾಗಿದೆ ಎನ್ನುತ್ತಿದ್ದಾರೆ.
Published by:
HR Ramesh
First published:
November 2, 2020, 8:14 PM IST