ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ ಸಬ್ ಕಂಟ್ರಾಕ್ಟರ್ ಕೃಷಿ, ಮತ್ತು ಪಟ್ಟ ಜಮೀನಿನಲ್ಲಿ ಅಕ್ರಮ ಮಣ್ಣು ಸಾಗಾಟ ಮಾಡಿದ್ದ. ಮಣ್ಣು ಸಾಗಾಟದಿಂದ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿತ್ತು. ಇದನ್ನು ಪ್ರಶ್ನಿಸಿದ್ದ ಶಾಸಕರಿಗೆ ಆ ಗುತ್ತಿಗೆದಾರ ಬೌನ್ಸರ್ಸ್ಗಳನ್ನ ಬಿಟ್ಟು ಹೆದರಿಸುವ ಪ್ರಯತ್ನ ಸಹ ಮಾಡಿದ್ದ. ಇದರಿಂದ ಸಿಟ್ಟಿಗೆದ್ದಿದ್ದ ಶಾಸಕರು ಅವರ ವಿರುದ್ದ ದೂರು ದಾಖಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅದರಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ಇಂಗಳದಾಳ್ ಲಂಭಾಣಿಹಟ್ಟಿ ಗ್ರಾಮದಿಂದ 3 KM ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ 4ರ ಅಭಿವೃದ್ದಿ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಗೆ ಸಾವಿರಾರು ಲೋಡ್ ಮಣ್ಣು ಬೇಕಿದೆ. ಯಾರೇ ಯಾವುದೇ ಜಾಗದಿಂದ ಮಣ್ಣು ಸಾಗಿಸಬೇಕು ಅಂದರೆ ಸರ್ಕಾರದ ಅನುಮತಿ ಪಡಲೇಬೇಕು. ಆದರೆ ಹಣ ಉಳಿಸುವ ಪ್ಲಾನ್ ಮಾಡಿದ್ದ PNC ಕಂಪನಿ ಸಬ್ ಕಂಟ್ರಾಕ್ಟರ್ ಅನುಮತಿ ಪಡೆಯದೆ, ಗ್ರಾಮದ ಖಾಸಗಿ ಭೂಮಿಗಳಿಂದ ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡುತ್ತಿದ್ದ. ಇದರಿಂದ ಆ ಗ್ರಾಮದ ರಸ್ತೆಯೂ ಹದಗೆಟ್ಟಿತ್ತು. ಈ ಕುರಿತು ಸ್ಥಳೀಯರು ಸಬ್ ಕಂಟ್ರಾಕ್ಟರ್ ಚಂದ್ರಶೇಖರ್ ವಿರುದ್ದ ಶಾಸಕರಿಗೆ ದೂರು ನೀಡಿದ್ದರು. ಬಳಿಕ ಚಿತ್ರದುರ್ಗ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಸ್ಥಳ ಪರಿಶೀಲನೆ ಮಾಡಿದ್ದರು. ಆ ವೇಳೆ ಗುತ್ತಿಗೆದಾರ ಬೌನ್ಸರ್ಸ್ ಗಳನ್ನು ಬಿಟ್ಟು ಹೆದರಿಸುವ ಪ್ರಯತ್ನ ಮಾಡಿದ್ದ. ಇದರಿಂದ ರೊಚ್ಚಿಗೆದ್ದ ಶಾಸಕ ಜಿಹೆಚ್ ತಿಪ್ಪಾರೆಡ್ಡಿ ಗುತ್ತಿಗೆದಾರನ ವಿರುದ್ದ ದೂರು ದಾಖಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದರಂತೆ ಗಣಿ ಇಲಾಖೆ ಅಧಿಕಾರಿಗಳು ಚಿತ್ರದುರ್ಗ JMFC ನ್ಯಾಯಾಲಯದಲ್ಲಿ ದೂರು ನೀಡಿದ್ದು, ಗಣಿ ಮತ್ತು ಖನಿಜ ಕಾಯ್ದೆ 21/22 ಅಡಿಯಲ್ಲಿ ಶಿಕ್ಷೆಗೆ ಮನವಿ ಮಾಡಿದ್ದಾರೆ.
ಇದನ್ನು ಓದಿ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಬೆಟ್ಟಿಂಗ್ ದಂಧೆ; ಉತ್ತರಪ್ರದೇಶ ಬಿಜೆಪಿ ನಾಯಕನ ಬಂಧನ!
ಇನ್ನೂ ಕೃಷಿ ಜಮೀನಲ್ಲಿ ಅಕ್ರಮ ಮಣ್ಣು ಸಾಗಾಣಿಕೆಗೆ ಸಾಥ್ ನೀಡಿದ್ದ ಲಂಭಾಣಿಹಟ್ಟಿ ಗ್ರಾಮದ ಜಮೀನು ಮಾಲೀಕರಾದ ಹನುಮನಾಯ್ಕ್, ವೆಂಕಟೇಶ್, ಶಾಂತಬಾಯಿ ವಿರುದ್ದವೂ ಕೂಡ ದೂರು ದಾಖಲಿಸಲಾಗಿದೆ. ಗ್ರಾಮದ ಸರ್ವೆ ನಂ. 63/10,63/11, ಹಾಗೂ 135/1 ರಲ್ಲಿ ಸುಮಾರು 11 ಸಾವಿರಕ್ಕೂ ಅಧಿಕ ಮೆಟ್ರಿಕ್ ಟನ್ ಅಕ್ರಮ ಮಣ್ಣು ಸಾಗಾಣಿಕೆ ಮಾಡಿದ್ದಾರೆಂದು ಕಂಡು ಬಂದಿದೆ. ಇನ್ನೂ ನೂರಾರು ಲಾರಿಗಳ ಓಡಾಟದಿಂದ PWD ಇಲಾಖೆಯ ಆರು ಕೋಟಿ ವೆಚ್ಚದ ನೂತನ ರಸ್ತೆಯೂ ಕೂಡಾ ಹಾಳಾಗಿದ್ದು, ಸಬ್ ಕಂಟ್ರಾಕ್ಟರ್ ಚಂದ್ರಶೇಖರ್ ರಸ್ತೆಗೆ ತೇಪೆ ಹಚ್ಚುವ ಕೆಲಸ ಮಾಡಿದ್ದಾನೆ. ಜಮೀನು ಕೊಟ್ಟ ರೈತರಿಗೂ ಮೋಸ ಮಾಡಿದ್ದಾನೆ. ಇಂಥವರಿಗೆ ತಕ್ಕ ಶಿಕ್ಷೆಯಾಗ್ಬೇಕು ಅಂತ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವರದಿ : ವಿನಾಯಕ ತೊಡರನಾಳ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ