ರಾಮನಗರ: ರಾಮನಗರ - ಚನ್ನಪಟ್ಟಣ ಹಾಗೂ ಮಾಗಡಿ ಕನಕಪುರದಲ್ಲಿ ಕರ್ನಾಟಕ ಬಂದ್ ಗೆ ಜಿಲ್ಲೆಯ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಎಂದಿನಂತೆ ಫುಲ್ ಬ್ಯುಸಿ ಆಗಿದ್ದು ವಾಹನ ಸಂಚಾರ ಸುಗಮವಾಗಿತ್ತು. ಅಂಗಡಿ ಮುಂಗಟ್ಟುಗಳು ಸಹ ಎಂದಿನಂತೆ ಓಪನ್ ಆಗಿತ್ತು. ಜನಸಾಮಾನ್ಯರ ಓಡಾಟ ಎಂದಿನಂತೆಯೇ ಇತ್ತು.
ಆದರೆ ಬೆಳ್ಳಂಬೆಳಗ್ಗೆಯೇ ಕನ್ನಡಪರ ಹೋರಾಟಗಾರರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ರಾಮನಗರದ ಐಜೂರು ಸರ್ಕಲ್ ನಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ಋಷಿ ಕುಮಾರ ಸ್ವಾಮೀಜಿ ಹಾಗೂ ಕೇಂದ್ರ ಕೃಷಿ ಸಚಿವರ ಅಣಕು ಶವಕ್ಕೆ ಬೆಂಕಿಯಿಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಇದೇ ಸಂದರ್ಭದಲ್ಲಿ ಕ.ರ.ವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಕೆಲವರ ಬಂಧನವೂ ಆಯ್ತು. ನಗರದ ಐಜೂರು ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಬೆಂಗಳೂರು-ಮೈಸೂರು ರಾ.ಹೆದ್ದಾರಿ ತಡೆಯಲು ಕ.ರ.ವೇ ಕಾರ್ಯಕರ್ತರು ಮುಂದಾದರು ಈ ಕಾರಣಕ್ಕೆ ಪೊಲೀಸರು ಅವರನ್ನು ಬಂಧಿಸಿದರು. ಇನ್ನು ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಜಗದೀಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯ್ತು. ಸರ್ಕಾರದ ನಡೆ ಖಂಡಿಸಿ ಪ್ರತಿಕೃತಿ ದಹನ ಮಾಡಿದರು.
ಇದನ್ನು ಓದಿ: Karnataka Bandh | ವಿಜಯಪುರದಲ್ಲಿ ಜಿದ್ದಾಜಿದ್ದಿ ಬದಲು ಕೇವಲ ಪ್ರತಿಭಟನೆಗೆ ಸೀಮಿತವಾದ ಬಂದ್
ಇನ್ನುರೈತ ಸಂಘದಿಂದ ಬಿಡದಿಯಲ್ಲಿ ಪ್ರತಿಭಟನೆ ಮಾಡಲಾಯ್ತು. ಈ ಸಂದರ್ಭದಲ್ಲಿ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಬಿಡದಿ ಪಿಎಸೈ ಭಾಸ್ಕರ್ ಹಾಗೂ ರೈತ ಸಂಘದ ಅಧ್ಯಕ್ಷ ಇ.ಎನ್.ಕೃಷ್ಣ ಇಂಗಲಗುಪ್ಪೆ ನಡುವೆ ಪ್ರತಿಭಟನೆಯ ವಿಚಾರವಾಗಿ ಮಾತಿಗೆ ಮಾತು ಬೆಳೆದು ಕೆಲ ಕಾಲ ಬಿಗುವಿನ ವಾತವರಣ ನಿರ್ಮಾಣವಾಯ್ತು. ಬೆಂಗಳೂರು-ಮೈಸೂರು ರಾ.ಹೆದ್ದಾರಿ ತಡೆಯಲು ಮುಂದಾದ ರೈತರಿಗೆ ಬಿಡದಿ ಪಿಎಸೈ ಭಾಸ್ಕರ್ ಅವಾಜ್ ಹಾಕಿದ ಪರಿಣಾಮ ಕೆಲಕಾಲ ಬೆಂಗಳೂರು-ಮೈಸೂರು ರಾ.ಹೆದ್ದಾರಿಯಲ್ಲಿ ಗೊಂದಲ ಸೃಷ್ಟಿಯಾಯ್ತು.
ವರದಿ : ಎ.ಟಿ.ವೆಂಕಟೇಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ