ಬೆಂಗಳೂರಿನ ಉದ್ಯಮಿ ಸಾದಿಕ್ ಮಗನ ಅಪಹರಣ: ಪೊಲೀಸರಿಂದ ರಕ್ಷಣೆ, ಐವರ ಬಂಧನ
ಬಾಲಕನ ಕಿಡ್ನಾಪ್ ಪ್ರಕರಣದಲ್ಲಿ ಪೊಲೀಸರು ಐವರನ್ನ ಬಂಧಿಸಿದ್ದಾರೆ. ಫಾಹೀಂ, ಮುಜಾಮೀಲ್, ಫೈಜಾನ್, ಮೊಹಮ್ಮದ್ ಷಾಹೀದ್ ಮತ್ತು ಖಲೀಲ್ ಬಂಧಿತ ಆರೋಪಿಗಳು. ಬಂಧಿತರು ಉದ್ಯಮಿ ಮೊಹಮ್ಮದ್ ಸಾಧಿಕ್ ಅವರ ಸುತ್ತಮುತ್ತಲಿನ ಏರಿಯಾ ನಿವಾಸಿಗಳು ಎನ್ನಲಾಗಿದೆ.
ಬೆಂಗಳೂರು(ಆ. 29): ಗಾಳಿಪಟ ಕೊಡಿಸುವುದಾಗಿ ನಂಬಿಸಿ ಬಾಲಕನನ್ನ ಅಪಹರಣ ಮಾಡಿದ್ದ ಐವರು ದುಷ್ಕರ್ಮಿಗಳನ್ನ ಬೆಂಗಳೂರಿನ ಪೂರ್ವ ವಿಭಾಗ ಪೊಲೀಸರು ಬಂಧಿಸಿದ್ದಾರೆ.
ಭಾರತಿನಗರ ನಿವಾಸಿ ಉದ್ಯಮಿ ಮೊಹಮ್ಮದ್ ಸಾದಿಕ್ ಎಂಬುವರ 11 ವರ್ಷದ ಮಗನನ್ನ ದುಷ್ಕರ್ಮಿಗಳು ಅಪಹರಿಸಿ 2 ಕೋಟಿ ಹಣಕ್ಕೆ ಡಿಮಾಂಡ್ ಮಾಡಿದ್ದರು. ಮಗನ ಕಿಡ್ನಾಪ್ ಬಗ್ಗೆ ಮೊಹಮ್ಮದ್ ಸಾಧಿಕ್ ಭಾರತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಕಿಡ್ನಾಪರ್ಸ್ ಪತ್ತೆಗಾಗಿ ಐದು ವಿಶೇಷ ತಂಡಗಳನ್ನ ರಚನೆ ಮಾಡಿದರು. ಆರೋಪಿಗಳು ಬಾಲಕನನ್ನ ಅಪಹರಿಸಿ ತುಮಕೂರಿನ ಗೌತಮನಹಳ್ಳಿ ಕಡೆ ಹೊರಟಿದ್ದು ಈ ವೇಳೆ ಪೊಲೀಸರು ಟೆಕ್ನಿಕಲ್ ಸಹಾಯದಿಂದ ಅವರ ಬೆನ್ನು ಹತ್ತಿದರು. ಈ ವೇಳೆ ಗದ್ದೆಯೊಂದರಲ್ಲಿ ವೇಗವಾಗಿ ಕಾರು ಚಲಾಯಿಸುತ್ತಿದ್ದ ವೇಳೆ ಕಾರು ಪಲ್ಟಿ ಹೊಡೆದಿದೆ. ಕೂಡಲೇ ಪೊಲೀಸರ ಒಂದು ತಂಡ ಆರೋಪಿಗಳನ್ನ ರೌಂಡಪ್ ಮಾಡಿ ಬಾಲಕನ ರಕ್ಷಣೆ ಮಾಡಿದ್ದಾರೆ.
ಬಾಲಕನ ಕಿಡ್ನಾಪ್ ಪ್ರಕರಣದಲ್ಲಿ ಪೊಲೀಸರು ಐವರನ್ನ ಬಂಧಿಸಿದ್ದಾರೆ. ಫಾಹೀಂ, ಮುಜಾಮೀಲ್, ಫೈಜಾನ್, ಮೊಹಮ್ಮದ್ ಷಾಹೀದ್ ಮತ್ತು ಖಲೀಲ್ ಬಂಧಿತ ಆರೋಪಿಗಳು. ಬಂಧಿತರು ಉದ್ಯಮಿ ಮೊಹಮ್ಮದ್ ಸಾಧಿಕ್ ಅವರ ಸುತ್ತಮುತ್ತಲಿನ ಏರಿಯಾ ನಿವಾಸಿಗಳು ಎನ್ನಲಾಗಿದೆ. ಸಾಧಿಕ್ ಅವರ ಬ್ಯುಸಿನೆಸ್ ಮತ್ತು ಮಗನ ಬಗ್ಗೆ ತಿಳಿದುಕೊಂಡಿದ್ದ ಅಸಾಮಿಗಳು ಲಾಕ್ ಡೌನ್ ವೇಳೆ ಹಣ ಚೆನ್ನಾಗಿ ಸಂಪಾದನೆ ಮಾಡಿದ್ದಾರೆ ಎಂದು ಕಿಡ್ನಾಪ್ ಸಂಚು ರೂಪಿಸಿದ್ರಂತೆ. ಅದರಂತೆ ಇದೇ 27 ರಂದು ಬಾಲಕನಿಗೆ ಗಾಳಿಪಟ ಕೊಡುವ ಆಸೆಯೊಡ್ಡಿ ಯುವಕನೋರ್ವ ಮನೆಯಿಂದ ಕರೆತಂದಿದ್ದನಂತೆ. ಬಳಿಕ ಬೈಕ್ನಲ್ಲಿ ಕರೆದೊಯ್ದು ಕಿಡ್ನಾಪ್ ಮಾಡಲಾಗಿತ್ತು. ಬಾಲಕ ದಾರಿ ವೇಳೆ ಗಲಾಟೆ ಮಾಡುವ ಸಾಧ್ಯತೆ ಇದ್ದಿದ್ದರಿಂದ ನಿದ್ರೆ ಬರುವಂತೆ ಮತ್ತಿನ ಮಾತ್ರೆಗಳನ್ನ ಹಾಕಲಾಗಿತ್ತು. ಬಳಿಕ ಬಾಲಕ ಎಚ್ಚರಗೊಂಡಾಗ, ನಾವು ಪೊಲೀಸರು. ನಿನ್ನನ್ನು ನಿಮ್ಮ ತಂದೆ ಬಳಿ ಕರೆದೊಯ್ಯುತ್ತೇವೆ ಎಂದು ಕಥೆ ಕಟ್ಟಿದರೆನ್ನಲಾಗಿದೆ.
ಬಾಲಕನ ಕಿಡ್ನಾಪ್ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಝಾಯಿನ್ ಎನ್ನಲಾಗಿದೆ. ಈತ ನಗರದಲ್ಲಿ ಕುಳಿತುಕೊಂಡು ಕಿಡ್ನಾಪ್ ರೂಪುರೇಷೆ ರಚಿಸಿ ಅದೇ ರೀತಿ ಕಾರ್ಯಾಚರಣೆ ನಡೆಸಿದ್ದನಂತೆ. ಒಂದೇ ಹೆಸರಲ್ಲಿ ಐದು ಸಿಮ್ ಖರೀದಿ ಮಾಡಿ ಎಲ್ಲರೂ ಬಳಸುತ್ತಿದ್ರಂತೆ.
ಇಂದು ಕಿಡ್ನಾಪ್ ಕಿಂಗ್ಪಿನ್ ಬಂಧಿಸಲು ಹೋದ ಪೊಲೀಸರ ಮೇಲೆ ಆಸಾಮಿ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಭಾರತಿನಗರ ಇನ್ಸ್ಪೆಕ್ಟರ್ ಆನಂದ್ ನಾಯಕ್ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಕಿಡ್ನಾಪ್ಗೆ ಒಳಗಾಗಿದ್ದ ತಮ್ಮ ಮಗನನ್ನ ಪೊಲೀಸರು ಸುರಕ್ಷಿತವಾಗಿ ಕರೆತಂದಿದ್ದಕ್ಕೆ ಬಾಲಕನ ಪೋಷಕರು ಹರ್ಷ ವ್ಯಕ್ತಪಡಿಸಿ ಧನ್ಯವಾದ ಹೇಳಿದ್ದಾರೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ