ಬೆಳಗಾವಿ ಲೋಕಸಭಾ ಉಪಚುನಾವಣೆ ; ಘೋಷಣೆ ಮೊದಲೇ ಬಿಜೆಪಿಯಲ್ಲಿ ಆಕಾಂಕ್ಷಿಗಳ ದೊಡ್ಡ ಪಟ್ಟಿ..!
ಬೆಳಗಾವಿ ಲೋಕಸಭಾ ಕ್ಷೇತ್ರ ಉಪಚುನಾವಣೆ ಉಸ್ತುವಾರಿಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ವಹಿಸಲಾಗಿದೆ. ಇನ್ನೂ ಅಂಗಡಿ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಬೇಕು ಎಂದು ಸಚಿವರಾದ ಜಗದೀಶ್ ಶೆಟ್ಟರ್, ರಮೇಶ್ ಜಾರಕಿಹೊಳಿ ತೆರೆ ಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ
ಬೆಳಗಾವಿ(ನವೆಂಬರ್.05): ರಾಜ್ಯದಲ್ಲಿ ಶಿರಾ, ಆರ್ ಆರ್ ನಗರ ಉಪಚುನಾವಣೆ ಮುಗಿದ್ದು, ಫಲಿತಾಂಶಕ್ಕಾಗಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕಾಯುತ್ತಿವೆ. ಇದೀಗ ಬೆಳಗಾವಿ ಲೋಕಸಭಾ ಕ್ಷೇತ್ರ ಉಪಚನಾವಣೆ ಬಗ್ಗೆ ಚರ್ಚೆಗಳು ಆರಂಭವಾಗಿದ್ದು, ಬಿಜೆಪಿಯಲ್ಲಿ ಅನೇಕ ಆಕಾಂಕ್ಷಿಗಳು ತೆರೆ ಮರೆಯಲ್ಲಿ ಪ್ರಯತ್ನವನ್ನು ಆರಂಭಿಸಿದ್ದಾರೆ. ಆರ್ ಎಸ್ ಎಸ್ ಹಾಗೂ ಬಿಜೆಪಿ ವರಿಷ್ಠ ಬಳಿ ಕೆಲವರು ನಮಗೆ ಟಿಕೆಟ್ ಕೊಡುವಂತೆ ಮನವಿ ಮಾಡಿದ್ದಾರೆ. ಇನ್ನೂ ಅನೇಕ ಕಾರ್ಯಕರ್ತರು ಉಪಚುನಾವಣೆ ಸಂದರ್ಭದಲ್ಲಿ ಅಂಗಡಿ ಕುಟುಂಬಸ್ಥರಿಗೆ ಆದ್ಯತೆ ನೀಡಬೇಕು ಎನ್ನುವ ಆಗ್ರಹವನ್ನು ಮಾಡಿದ್ದಾರೆ. ಬಿಜೆಪಿಯಲ್ಲಿ ಪ್ರಮುಖವಾಗಿ ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್, ಮಾಜಿ ಶಾಸಕ ವಿಶ್ವನಾಥ ಪಾಟೀಲ್, ಜಗದೀಶ್ ಮೆಟಗುಡ್ಡ, ಸಂಜಯ ಪಾಟೀಲ್, ಬಿಜೆಪಿ ಜಿಲ್ಲೆಯ ಕಾರ್ಯಕರ್ತರಾಗಿರುವ ರಾಜು ಚಿಕ್ಕನಗೌಡರ್, ಮಹಾಂತೇಶ ವಕ್ಕುಂದ ಸೇರಿ ಅನೇಕ ಆಕಾಂಕ್ಷಿಗಳು ಸಿದ್ದವಾಗಿದ್ದಾರೆ. ಅಂಗಡಿ ಕುಟುಂಬಕ್ಕೆ ಟಿಕೆಟ್ ಕೊಡುವ ಸಂದರ್ಭದಲ್ಲಿ ಪರಿಗಣಿಸಬೇಕು. ಇಲ್ಲವಾದಲ್ಲಿ ನಮಗೆ ಟಿಕೆಟ್ ಕೊಡಿ ಎಂದು ಅನೇಕರು ಈಗಾಗಲೇ ಬೇಡಿಕೆ ಇಟ್ಟಿದ್ದಾರೆ.
ಟಿಕೆಟ್ ವಿಚಾರ ಬಹಿರಂಗವಾಗಿ ಚರ್ಚೆ ಬೇಡ, ನನಗೆ ಬಂದು ಮನವಿ ಕೊಡುವಂತೆ ಕೇಂದ್ರ ಪ್ರಲ್ಹಾದ್ ಜೋಶಿ ಬೆಳಗಾವಿ ಭೇಟಿ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಸೂಚನೆ ನೀಡಿದ್ದರು ಎನ್ನಲಾಗಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರ ಉಪಚುನಾವಣೆ ಉಸ್ತುವಾರಿಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ವಹಿಸಲಾಗಿದೆ. ಇನ್ನೂ ಅಂಗಡಿ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಬೇಕು ಎಂದು ಸಚಿವರಾದ ಜಗದೀಶ್ ಶೆಟ್ಟರ್, ರಮೇಶ್ ಜಾರಕಿಹೊಳಿ ತೆರೆ ಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಸುರೇಶ್ ಅಂಗಡಿ ಹೆಂಡತಿ ಮಂಗಳ, ಪುತ್ರಿಯರಾದ ಸ್ಪೂರ್ತಿ, ಶ್ರದ್ಧಾ ಪೈಕಿ ಯಾರು ಸ್ಪರ್ಧಿಸಬೇಕು ಎನ್ನುವುದು ಇನ್ನೂ ತೀರ್ಮಾನವಾಗಿಲ್ಲ. ಜಗದೀಶ್ ಶೆಟ್ಟರ್ ತಮ್ಮ ಸೊಸೆ ಶ್ರದ್ಧಾ ಸ್ಪರ್ಧೆಯ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರ ಉಪಚುನಾವಣೆ ಟಿಕೆಟ್ ಬಗ್ಗೆ ನ್ಯೂಸ್ 18 ಕನ್ನಡ ಜತೆಗೆ ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್, ಸುರೇಶ್ ಅಂಗಡಿ ಮನೆಯಲ್ಲಿ ಯಾರಿಗಾದರು ಟಿಕೆಟ್ ಕೊಡಬೇಕು ಎನ್ನುವುದು ನನ್ನ ಅಪೇಕ್ಷೆ. ಮನೆಯಲ್ಲಿ ಇಲ್ಲ ಎಂದ್ರೆ ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಜಿಲ್ಲೆಯಲ್ಲಿ1980ರಿಂದಲೇ ಬಿಜೆಪಿ ಪಕ್ಷದ ಬಲಿ ಪಡಿಸಲು ನಾನು ಕೆಲಸ ಮಾಡಿದ್ದೇನೆ. 1994 ರಲ್ಲಿಯೇ ಚುನಾವಣೆ ಸ್ಪರ್ಧಿಸಿ ಸೋತಿದ್ದೇನೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ 2004ರಲ್ಲಿಯೇ ನನಗೆ ಸಿಗಬೇಕಾಗಿತ್ತು. ಆದರೆ, ನಾನು ಅಂಗಡಿಗೆ ಬಿಟ್ಟು ಕೊಟ್ಟಿದ್ದೇನೆ. ನನಗೆ ವಿಧಾನಸಭೆ ನಿಲ್ಲಲ್ಲು ಅಂದಿನ ಅಧ್ಯಕ್ಷರು ಸೂಚನೆ ನೀಡಿದ್ದರು. ಸದ್ಯ ಅಂಗಡಿ ಪರಿವಾರಕ್ಕೆ ಇಲ್ಲ ಅಂದ್ರೆ ನನಗೆ ಟಿಕೆಟ್ ಕೊಡಬೇಕು ಎಂದು ಮನವಿ ಮಾಡಿದ್ದೇನೆ. ರಾಜ್ಯಾಧ್ಯಕ್ಷರು, ಪಕ್ಷದ ಹಿರಿಯ ಜತೆಗೆ ಶೀಘ್ರದಲ್ಲಿ ಈ ಬಗ್ಗೆ ಭೇಟಿಯಾಗಿ ಮನವಿ ಮಾಡುತ್ತೇನೆ ಎಂದು ಶಂಕರಗೌಡ ಪಾಟೀಲ್ ಹೇಳಿದ್ರು
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ