ಹಾವೇರಿ: ಜ್ಯೋತಿಷ್ಯ, ಭವಿಷ್ಯದ ಮೇಲೆ ರಾಜಕೀಯ ನಡೆಯಲ್ಲ. ಜನರ ಸಂಪರ್ಕ ಇಟ್ಟುಕೊಂಡಿರುವವರಿಗೆ ರಾಜಕೀಯದಲ್ಲಿ ನೆಲೆ ಇದ್ದೇ ಇರುತ್ತದೆ ಎಂದು ಸಚಿವ ಬಿ.ಸಿ. ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ. ನಿನ್ನೆ ಕೋಡಿಹಳ್ಳಿ ಮಠದ ಶ್ರೀಗಳು ಹೇಳಿದ ಭವಿಷ್ಯವಾಣಿಗೆ ಪ್ರತಿಕ್ರಿಯಿಸಿದ ಅವರು ತಮಗೆ ಶ್ರೀಗಳು ಹಿಂದೆ ಹೇಳಿದ ಭವಿಷ್ಯವನ್ನು ಉಲ್ಲೇಖಿಸಿದರು. “ರಾಜಕೀಯಕ್ಕೆ ಬರೋಕೂ ಮುನ್ನ ನಾನು ಒಂದ್ಸಾರಿ ಕೋಡಿಹಳ್ಳಿ ಮಠಕ್ಕೆ ಹೋಗಿದ್ದೆ. ರಾಜಕೀಯಕ್ಕೆ ಬರಬೇಡಿ, ನಿಮಗೆ ಭವಿಷ್ಯ ಇಲ್ಲ ಎಂದು ಹೇಳಿದ್ದರು. ಇವತ್ತು ಏನಾಗಿದೆ ನೋಡಿ. ರಾಜಕೀಯಕ್ಕೆ ಬಂದು ನಾಲ್ಕು ಬಾರಿ ಶಾಸಕನಾಗಿ ಈಗ ಸಚಿವನೂ ಆಗಿದ್ದೇನೆ. ಎಲ್ಲವೂ ಭವಿಷ್ಯದ ಮೇಲೆ ನಿರ್ಧಾರ ಆಗೋಗಿಲ್ಲ. ಹಾಗೇನಾದರೂ ಇದ್ದಿದ್ದರೆ ಎಲೆಕ್ಷನ್ಗೆ ನಿಲ್ಲೋರು ಮಾಟ ಮಂತ್ರ ಮಾಡಿಕೊಂಡು ಭವಿಷ್ಯ ಕೇಳಿಕೊಂಡು ಪದವಿ ಪಡೆದುಕೊಳ್ಳುತ್ತಿದ್ದರು. ಅದೆಲ್ಲಾ ನಡೆಯಲ್ಲ. ಜನರ ಸೇವೆ ಮತ್ತು ಜನರ ಸಂಪರ್ಕ ಇಟ್ಟುಕೊಂಡಿರುವವರಿಗೆ ರಾಜಕೀಯದಲ್ಲಿ ನೆಲೆ ಇರುತ್ತದೆ” ಎಂದು ಹಿರೇಕೆರೂರು ಶಾಸರೂ ಆದ ಪಾಟೀಲ ಹೇಳಿದರು. ಮುಂಬರುವ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ವಿಪ್ಲವ ಆಗಲಿದೆ ಎಂದು ಕೋಡಿಹಳ್ಳಿ ಶ್ರೀಗಳು ನಿನ್ನೆ ಹೇಳಿದ್ದಕ್ಕೆ ಬಿ.ಸಿ. ಪಾಟೀಲ್ ಈ ರೀತಿಯಾಗಿ ಪ್ರತಿಕ್ರಿಯಿಸಿದರು.
ಅಡ್ರೆಸ್ ಇಲ್ಲದಂತಾದ ಡಿಕೆಶಿ: ಇದೇ ವೇಳೆ, ತಮ್ಮ ಬಳಿಕ ಬಿಜೆಪಿಯ ಮೂವರು ಶಾಸಕರಿದ್ದಾರೆ. ಯಾವಾಗ ಬೇಕಾದರೂ ಕಾಂಗ್ರೆಸ್ ಸೇರುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೀಡಿದ ಹೇಳಿಕೆಗೂ ಬಿ.ಸಿ. ಪಾಟೀಲ್ ತಿರುಗೇಟು ನೀಡಿದರು. ಡಿಕೆ ಶಿವಕುಮಾರ್ ಬಾಂಬ್ ಸಿಡಿಸಿ ಸಿಡಿಸಿ ಶಿರಾ ಮತ್ತು ಆರ್ ಆರ್ ನಗರದಲ್ಲಿ ನೆಲಕಚ್ಚಿ ಅಡ್ರೆಸ್ ಇಲ್ಲದೆ ಹೋಗಿದ್ದಾರೆ. ಡಿಕೆ ಶಿವಕುಮಾರ್ ಈಗ ಕ್ಯಾಡಿಡೇಟ್ ಹಾಕೋಕೂ ಹಿಂದೆ ಮುಂದೆ ನೋಡುತ್ತಾ ಇದ್ದಾರೆ. ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಮನೋಭಾವನೆ ಇಟ್ಟುಕೊಂಡು ಡಿಕೆಶಿ ಈ ರೀತಿ ಹೇಳುತ್ತಿದ್ದಾರೆ ಎಂದು ಸಚಿವರು ವ್ಯಂಗ್ಯ ಮಾಡಿದರು.
ಇದನ್ನೂ ಓದಿ: ಹಿಂದೂ ಮುಸ್ಲಿಮ್ ಅಲ್ಲ, ವೈಯಕ್ತಿಕ ಹಕ್ಕಿನ ಪ್ರಶ್ನೆ: ಲವ್ ಜಿಹಾದ್ ಪ್ರಕರಣದಲ್ಲಿ ಕೋರ್ಟ್ ಮಹತ್ವದ ತೀರ್ಪು
ಕಾಂಗ್ರೆಸ್ ನೆಲಕಚ್ವಿ ಹೋಗಿದೆ: ಹಿರಿಯ ನಾಯಕರಾದ ಗುಲಾಂ ನಬಿ ಆಜಾದ್, ಕಮಲನಾಥ್, ಶಶಿ ತರೂರು ಯಾವ ರೀತಿ ಹೇಳಿಕೆ ಕೊಡುತ್ತಾ ಇದಾರೆ ಅನ್ನೋದನ್ನ ನೋಡಿದರೆ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಗೊತ್ತಾಗುತ್ತದೆ. ಅವರ ಪಕ್ಷದ್ದು ಅವರು ನೋಡಿಕೊಳ್ಳಲಿ. ಬಿಜೆಪಿಯಲ್ಲಿದ್ದವರು ಮತ್ತು ಬೇರೆ ಪಕ್ಷಗಳಿಂದ ಬಂದವರು ಯಾರು ಕಾಂಗ್ರೆಸ್ಗೆ ಹೋಗುವ ಪ್ರಮೇಯ ಇಲ್ಲ. ಶಿರಾ ಮತ್ತು ಆರ್ ಆರ್ ನಗರದಲ್ಲಿ ಏನಾಯಿತು? ಆಗಲೂ ಇದನ್ನೇ ಹೇಳಿದ್ದರು. ಇದು ಸತ್ಯಕ್ಕೆ ದೂರುವಾದದ್ದು. ಕಾಂಗ್ರೆಸ್ಗೆ ಹೋಗೋರು ಯಾರು ಇಲ್ಲ ಎಂದು ಬಿ.ಸಿ. ಪಾಟೀಲ್ ಸ್ಪಷ್ಟಪಡಿಸಿದರು.
ಇನ್ನು, ಸಿಬಿಐ ಮೂಲಕ ಬಿಜೆಪಿ ನಮ್ಮನ್ನು ಹಣೆಯಲು ಯತ್ನಿಸುತ್ತಿದೆ ಎಂಬ ಕಾಂಗ್ರೆಸ್ ಮಾತಿಗೆ ತಿರುಗೇಟು ನೀಡಿದ ಬಿಸಿ ಪಾಟೀಲ, ಮಾಡಿದ್ದುಣ್ಣೋ ಮಾರಾಯ ಎನ್ನುವುದು ಗಾದೆ ಇದೆ. ಅವರು ತಪ್ಪು ಮಾಡಿದಾರೆ. ಕೋರ್ಟ್ನಲ್ಲಿ, ಕೇಸ್ನಲ್ಲಿ ಸಿಕ್ಕಿಹಾಕಿಕೊಂಡಿದಾರೆ. ಇದನ್ನ ಸಿಬಿಐ ತನಿಖೆ ಮಾಡಿದರೆ ಬಿಜೆಪಿ ಹಣಿಯೋಕೆ ನೋಡುತ್ತದೆ ಅಂದರೆ ಹೇಗೆ? ಇದು ತಪ್ಪಲ್ವ? ಏನೇನೂ ಆಗಿದೆ ಅನ್ನೊದು ಗೊತ್ತಿದೆ. ಅದನ್ನು ಅನುಭವಿಸ್ತಾ ಇದಾರೆ. ಮತ್ತೆ ಅನವಶ್ಯಕವಾಗಿ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳೋದಕ್ಕೆ ಈ ರೀತಿ ಗೂಬೆ ಕೂರಿಸುತ್ತಾ ಇರೋದು ಸರಿಯಲ್ಲಾ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ವರದಿ: ಸಂಕನಗೌಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ