ವಿಜಯಪುರ: ಸಿಎಂ ವಿರುದ್ಧ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಟು ಟೀಕೆ ಮುಂದುವರೆಸಿದ್ದು, ಈ ಬಾರಿ ಫೇಸ್ಬುಕ್ನಲ್ಲಿ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಮಹಿಳೆಯರ ಜೊತೆ ಅಸಭ್ಯ ವರ್ತಿಸುತ್ತಾರೆ ಎಂದು ಗಂಭೀರ ಆರೋಪ ಮಾಡಿರುವ ಅವರು, ಸಿಎಂ ಹಾಗೂ ಕುಟುಂಬದ ವಿರುದ್ಧ ಮತ್ತೆ ಪೋಸ್ಟ್ ಹಾಕಿದ್ದಾರೆ. ತಮ್ಮ ವಿರುದ್ಧ ಶಾಸಕರ ಸಹಿ ಸಂಗ್ರಹ ಮಾಡಿದ್ದಾರೆಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಯತ್ನಾಳ ತಮ್ಮ ಪೋಸ್ಟ್ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಮಾ. 25 ರಂದು ಸಿಎಂ ಗೃಹ ಕಚೇರಿಯಲ್ಲಿ 25 ಶಾಸಕರ ಮತ್ತು ಸಚಿವರ ಸಭೆ ನಡೆದಿತ್ತು. ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುವ ಕುರಿತು ಸಭೆ ನಡೆಸಲಾಗಿತ್ತು. ಆಯಾ ಇಲಾಖೆಯ ಸಚಿವರು ಶಾಸಕರ ಕ್ಷೇತ್ರಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಚಿವ ಈಶ್ವರಪ್ಪ ಅವರ ಗಮನಕ್ಕೆ ತಾರದೆ ಗ್ರಾಮೀಣಾಭಿವೃದ್ಧಿ ಇಲಾಖೆಗೆ 1000 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ. ಬಿಜೆಪಿಯ ಗ್ರಾಮೀಣ ಭಾಗದ ಶಾಸಕರಿಗೆ ಸರಿಸಮಾನವಾಗಿ ಅನುದಾನ ಬಿಡುಗಡೆ ಮಾಡಿಲ್ಲವೆಂದು ಅವರು ಆರೋಪಿಸಿದ್ದಾರೆ.
ಅಸಮರ್ಪಕ ಅನುದಾನ ಹಂಚಿಕೆ ಸಿಎಂ ವಿರುದ್ಧ ಶಾಸಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಸಭೆ ನಡೆಸಲಾಗಿತ್ತು. ಆದರೆ ಸಭೆಯಲ್ಲಿ ಭಾಗಿಯಾದ 65 ಶಾಸಕರು ನನ್ನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಹಿ ಹಾಕಿದ ಸುದ್ದಿ ಸುಳ್ಳು ಹಬ್ಬಿಸಲಾಗಿದೆ. ಈ ಕುರಿತು ನನ್ನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಹಿ ಹಾಕಿದ್ದಾರೆ ಎಂಬ ಶಾಸಕರ ಬಳಿ ವಿಚಾರಿಸಿದ್ದೇನೆ. ತಾವು ಸಹಿ ಮಾಡಿಲ್ಲ ಆ ಶಾಸಕರು ಎಂದು ಹೇಳಿದ್ದಾರೆ ಎಂದು ಯತ್ನಾಳ ತಿಳಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷದಿಂದ ಕೆ.ಎಚ್. ಮುನಿಯಪ್ಪ ಉಚ್ಛಾಟನೆಗೆ ವರ್ತೂರು ಪ್ರಕಾಶ್ ಮನವಿ
ಶಾಸಕರ ಗಮನಕ್ಕೆ ತಾರದೆ ಅನುದಾನ ಪತ್ರದಲ್ಲಿ ಶಾಸಕರ ಸಹಿ ಮಾಡಿಸಿಕೊಂಡಿದ್ದರೆ ಅದು ಮೋಸ ಮಾಡಿದಂತೆ. ಸಿಎಂ ಸಂಬಂಧಿ ಮತ್ತು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮರಿಸ್ವಾಮಿಯವರಿಗೆ ರೂ. 82 ಕೋಟಿ ಹಣ ನೇರವಾಗಿ ಬಿಡುಗಡೆ ಮಾಡಲಾಗಿದೆ. ಅಲ್ಲದೇ ತುಂಡು ಗುತ್ತಿಗೆ ಕಾಮಗಾರಿ ನೀಡಲು ಮರಿಸ್ವಾಮಿ ಒತ್ತಡ ಹೇರುತ್ತಿದ್ದಾರೆ. ಆದರೆ, ಬಿಜೆಪಿ ಶಾಸಕರಿಗೆ ಸರಿ ಸಮನಾಗಿ ಅನುದಾನ ನೀಡಿಲ್ಲ. ಕೆಲವು ಮಾಧ್ಯಮಗಳಲ್ಲಿ ಯತ್ನಾಳ ವಿರುದ್ದ ಶಾಸಕರ ಆಕ್ರೋಶವೆಂದು ಕಪೋಲಕಲ್ಪಿತ ಸುದ್ದಿ ಮಾಡಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಯುವರಾಜ, ಕಂಪನಿಯ ಭ್ರಷ್ಟಾಚಾರ ಕುಟುಂಬ ರಾಜಕಾರಣದಿಂದ ಶಾಸಕರು ಹಾಗೂ ಬಿಜೆಪಿ ಕಾರ್ಯಕರ್ತರು ಬೇಸತ್ತಿದ್ದಾರೆ. ನಿಷ್ಠಾವಂತ ಕಾರ್ಯಕರ್ತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಹೊಗಳು ಭಟ್ಟರು ದಲ್ಲಾಳಿಗಳು ರಾಜ್ಯವನ್ನು ಹಗಲು ದರೋಡೆ ಮಾಡುತ್ತಿದ್ದಾರೆ. ಸಿಎಂ ತಮ್ಮ ಕುಹಕತನ ಮತ್ತು ಯುವರಾಜನ ಅಧಿಕಾರ ಹಾಗೂ ಹಣದಾಹಕ್ಕಾಗಿ ತಮ್ಮ ಆತ್ಮೀಯರನ್ನು ಕಡೆಗಣಿಸಿದ್ದಾರೆ ಎಂದು ಯತ್ನಾಳ ಟೀಕಿಸಿದ್ದಾರೆ.
ಶೋಬಾ ಕರಂದ್ಲಾಜೆ, ರಮೇಶ ಜಾರಕಿಹೊಳಿ, ಈಶ್ವರಪ್ಪ, ಎಂ ಬಿ ಮರಂಕಲ್, ಮಹಾದೇವ ಪ್ರಕಾಶ ಸೇರಿದಂತೆ ಪ್ರಾಮಾಣಿಕ, ದಕ್ಷ, ಅಧಿಕಾರಿಗಳನ್ನು ಬಲಿಪಶು ಮಾಡಲಾಗಿದೆ. ಅಧಿಕಾರ ಹಣದ ದಾಹ ಮಿತಿ ಮೀರಿದೆ ಎಂದು ಅವರು ಆರೋಪಿಸಿದ್ದಾರೆ.
ಸಾರ್ವಜನಿಕ ಸಭೆ ಮತ್ತು ಗೃಹ ಕಚೇರಿಗೆ ಬರುವ ಮಹಿಳೆಯರ ಜೊತೆ ಅವರ ವರ್ತನೆ ವ್ಯಕ್ತಿತ್ವ ಮತ್ತು ವಯಸ್ಸಿಗೆ ಅವಮಾನ ಮಾಡಿದೆ ಎಂದು ಗಂಭೀರ ಆರೋಪ ಮಾಡಿರುವ ಅವರು, ಕಳೆದ ಒಂದು ವರ್ಷದಲ್ಲಿ ಶಾಸಕಾಂಗ ಸಭೆ ಕರೆಯದೇ ಇರುವುದು ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ಶಾಸಕಾಂಗ ಪಕ್ಷದ ಸಭೆ ಕರೆದರೆ ಭಿನ್ನಮತ ಸ್ಪೊಟವಾಗುವ ಭಯದಿಂದ ಒಂದೂ ಶಾಸಕಾಂಗ ಪಕ್ಷದ ಸಭೆ ಕರೆಯದೆ ಈ ಅಧೀವೇಶನ ಮುಕ್ತಾಯಗೊಳಿಸಿದ್ದು ದುರದೃಷ್ಟಕರ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಬೇಟೆಗಾರನ ಉರುಳಿಗೆ ಸಿಕ್ಕಿ 5 ವರ್ಷದ ಚಿರತೆ ಸಾವು!
ಆಶ್ಚರ್ಯಕರ ಏನೆಂದರೆ ನನ್ನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕಾಂಗ ಸಭೆ ಕರೆಯಲು ಒಬ್ಬ ಶಾಸಕರು ನನ್ನನ್ನು ಏಕವಚನದಲ್ಲಿ ನಿಂದಿಸಿ ಮುಖ್ಯಮಂತ್ರಿ ಗಳಿಗೆ ಆಗ್ರಹಿಸಿದರು. ಆದರೆ, ಆ ಸಭೆ ಕರೆಯುವ ಧೈರ್ಯ ಮಾನ್ಯ ಶ್ರೀ ಯಡಿಯೂರಪ್ಪನವರು ಮಾಡಲಿಲ್ಲ ಏಕೆ ಎಂದು ನನ್ನ ಪ್ರಶ್ನೆ? ತಮ್ಮ ಶಕ್ತಿ ಪ್ರದರ್ಶನ ಮಾಡಲಿಕ್ಕೆ ಕೇಂದ್ರಿಯ ಪಕ್ಷ ಅಂಜಿಸಲಿಕ್ಕೆ ತಮ್ಮ ಜೊತೆ 65 ಶಾಸಕರ ಇದ್ದಾರೆ ಎಂದು ತೋರಿಸಲು ಈ ಸಭೆ ಹೊರತು ಶಾಸಕರ ಸಮಸ್ಯೆಗಳನ್ನು ಪರಿಹರಿಸಲು ಕರೆದ ಸಭೆ ಅಲ್ಲ. ಇಂತಹ ಎಷ್ಟೋ ಸಭೆಗಳು ಕರೆದಿದ್ದಾರೆ ಅದರ ಫಲಶ್ರುತಿ ಶೂನ್ಯ ಎಂದು ಯತ್ನಾಳ ಟೀಕಿಸಿದ್ದಾರೆ.
ನಮ್ಮ ಪಕ್ಷದ ಮೂಲ ಸಿದ್ಧಾಂತ ರಾಷ್ಟ್ರೀಯತೆ. ಹಿಂದುತ್ವ, ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣ ವಿರುದ್ಧ ಹೋರಾಟ ಮಾಡಿರುವ ಪಕ್ಷ ನಮ್ಮ ರಾಷ್ಟೀಯ ಉನ್ನತ ನಾಯಕರಾದ ಶ್ರೀ ಅಟಲ್ ಬಿಹಾರಿ ವಾಜಪೇಯಿ, ಶ್ರೀ ಲಾಲ್ ಕೃಷ್ಣ ಅಡ್ವಾಣಿ ಅವರು ಮತ್ತು ನಮ್ಮ ಹೆಮ್ಮೆಯ ವಿಶ್ವ ನಾಯಕರಾದ ಕಳಂಕ ರಹಿತ ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಅವರು ನಮ್ಮ ಆದರ್ಶ. ಇವರೆಲ್ಲ ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣ ಮಾಡಲೇ ಇಲ್ಲ. ಅವರೆಲ್ಲರ ಕನಸುಗಳಿಗೆ ಕಳಂಕ ತರುವ ಕೆಲಸ ಶ್ರೀ ಯಡಿಯೂರಪ್ಪನವರು ಮತ್ತು ಅವರ ಕುಟುಂಬ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇಂದು ವಿಶ್ವದ ನಮ್ಮ ಹೆಮ್ಮೆಯ ನಾಯಕ ಹಾಗೂ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜೀ ಅವರು ಆದರ್ಶ. ನನಗೆ ಸಂಪೂರ್ಣ ವಿಶ್ವಾಸವಿದೆ. ನಾನು ಎತ್ತಿದ ಪ್ರಶ್ನೆಗಳಿಗೆ ನ್ಯಾಯ ಸಿಕ್ಕೇ ಸಿಗುತ್ತದೆ. ನಾನು ತೆಗೆದುಕೊಂಡ ಹೋರಾಟ ಯಶಸ್ವಿಯಾಗುತ್ತದೆ ಎಂದು ಯತ್ನಾಳ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಸಿಎಂ ಮತ್ತು ಅವರ ಕುಟುಬಂದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವರದಿ: ಮಹೇಶ ವಿ. ಶಟಗಾರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ