ಬೆಂಗಳೂರು(ಆಗಸ್ಟ್. 24): ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿದ ಗಲಭೆಕೋರರಿಗೆ ಭಾರಿ ಸಂಕಷ್ಟ ಎದುರಾಗಿದೆ. ಎರಡು ಪೊಲೀಸ್ ಠಾಣೆಗಳನ್ನ ಧ್ವಂಸಗೊಳಿಸಿ ಬೆಂಕಿ ಹಚ್ಚಿದ ಆರೋಪಿಗಳ ಮೇಲೆ ಪೊಲೀಸರು ಬ್ರಹ್ಮಾಸ್ತ್ರ ಪ್ರಯೋಗ ಮಾಡಲು ಮುಂದಾಗಿದ್ದಾರೆ. ಪೊಲೀಸ್ ಠಾಣೆಗಳ ಗಾಜು, ವಸ್ತುಗಳನ್ನ ಜಖಂಗೊಳಿಸಿ ಬೆಂಕಿ ಹಚ್ಚಿದ ಆರೋಪಿಗಳ ಮೇಲೆ UAPA ಅಡಿಯಲ್ಲಿ ಕೇಸ್ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆ ಮೇಲೆ ಅಗಸ್ಟ್ 11 ರ ರಾತ್ರಿ ದುಷ್ಕರ್ಮಿಗಳು ದಾಳಿ ಮಾಡಿದ್ದರು. ಈ ವೇಳೆ ದುಷ್ಕರ್ಮಿಗಳು ಡಿಜೆ ಹಳ್ಳಿ ಪೊಲೀಸ್ ಠಾಣೆಯ ಗೇಟ್ ಮುರಿದು ಗಾಜುಗಳನ್ನ ಪುಡಿ ಪುಡಿ ಮಾಡಿದ್ದರು. ಬಳಿಕ ಠಾಣೆ ಅವರಣ ಹಾಗೂ ಬೇಸ್ಮೆಂಟ್ ನಲ್ಲಿದ್ದ ವಾಹನಗಳಿಗೆ ಬೆಂಕಿ ಇಟ್ಟು ಸುಟ್ಟು ಭಸ್ಮ ಮಾಡಿದ್ದರು. ಹಾಗೂ ಪೊಲೀಸ್ ಠಾಣೆಗು ಸಹ ಬೆಂಕಿ ಹಾಕಿ ದುಷ್ಕೃತ್ಯ ಎಸಗಲು ಮುಂದಾಗಿದ್ದರು.
ಪೊಲೀಸ್ ಠಾಣೆ ಮೇಲಿನ ದಾಳಿಯನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಎರಡು ಠಾಣೆ ಧ್ವಂಸ ಪ್ರಕರಣದಲ್ಲಿ ಭಾಗಿಯಾಗಿದ್ದ ಸುಮಾರು 90 ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿಗಳ ಮೇಲೆ UAPA ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.
ಈ ಎರಡು ಪ್ರಕರಣದಲ್ಲಿ 90 ಜನರನ್ನು ಬಂಧಿಸಿರುವ ಸಿಸಿಬಿ ಬಂಧಿಯಾದ ಎಲ್ಲಾ ಆರೋಪಿಗಳ ಮೇಲೆ UAPA ಕಾಯ್ದೆ ಅನ್ವಯ ಕೇಸ್ ದಾಖಲು ಮಾಡಿದ್ದಾರೆ. UAPA (Unlawful Activity Prevention Act-1964) ಉಗ್ರ ಚಟುವಟಿಕೆ ಹಾಗೂ ವಿಧ್ವಂಸಕ ಕೃತ್ಯ ಎಸಗುವವರ ವಿರುದ್ದ ದಾಖಲಾಗುವ ಪ್ರಕರಣವಾಗಿದೆ.
ಇದನ್ನೂ ಓದಿ : ‘ರಾಹುಲ್ ಗಾಂಧಿ ತಪ್ಪು ಮಾಡಿದ್ರು ಅನ್ಸುತ್ತೆ’ - ನಾಯಕತ್ವ ಬದಲಾವಣೆ ಬಯಸಿದ ಹಿರಿಯ ಕಾಂಗ್ರೆಸ್ಸಿಗರ ಮೇಲೆ ರಮ್ಯಾ ದಾಳಿ
ಅಲ್ಲದೆ ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವುದು ಮತ್ತು ಜನರಿಗೆ ಹೆದರಿಸುವುದು ಕೂಡ ಉಗ್ರ ಕೃತ್ಯ ಎನ್ನಲಾಗಿದ್ದು UAPA ಕೇಸ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಈಗಾಗಲೇ ಪೊಲೀಸ್ ಠಾಣೆ ಧ್ವಂಸಗೊಳಿಸಿದ ಬಗ್ಗೆ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ ದಾಖಲಾಗಿದ್ದು ಹಳೇ ಎಫ್ಐಆರ್ ಗೆ ಹೊಸ ಸೆಕ್ಷನ್ ಗಳನ್ನ ನಮೂದಿಸಿ ಗಲಭೆಕೋರರಿಗೆ ಖಾಕಿ ಖಡಕ್ ಉತ್ತರ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ