ಚಿಕ್ಕಮಗಳೂರು : ಬಹುಶಃ ನನಗೆ ಅನ್ನಿಸೋದು ಬೆಂಗಳೂರು ಗಲಭೆಯ ಪ್ರೊಡ್ಯೂಸರ್ ಹಾಗೂ ಡೈರಕ್ಟರ್ ಜಮೀರ್ ಅಹಮದ್ ಅವರೇ ಇರಬೇಕು. ಅವರೇ ಪ್ರೊಡ್ಯೂಸರ್-ಡೈರಕ್ಟರ್ ಆಗಿದ್ರೆ ಆ್ಯಕ್ಟ್ರು ಯಾರೆಂದು ಗೊತ್ತೇ ಗೊತ್ತಿರುತ್ತೆ ಅದನ್ನ ಸ್ಪಷ್ಟಪಡಿಸಲಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಜಮೀರ್ ಅಹಮದ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು ಗಲಭೆ ಗೋಲಿಬಾರ್ನಲ್ಲಿ ಮೃತಪಟ್ಟವರ ಮನೆಗಳಿಗೆ ಖುದ್ದು ಭೇಟಿ ನೀಡಿದ್ದ ಜಮೀರ್ ಅಹಮದ್ ಮೃತರ ಕುಟುಂಬದವರಿಗೆ ಪರಿಹಾರವಾಗಿ ಚೆಕ್ ನೀಡಿ ಬಂದಿದ್ದರು. ಈ ಕುರಿತು ಚಿಕ್ಕಮಗಳೂರಿನಲ್ಲಿ ಕಿಡಿಕಾರಿರುವ ಸಿ.ಟಿ. ರವಿ, "ಬಹುಶಃ ನನಗೆ ಅನ್ನಿಸೋದು ಬೆಂಗಳೂರು ಗಲಭೆಯ ಪ್ರೊಡ್ಯೂಸರ್ ಹಾಗೂ ಡೈರಕ್ಟರ್ ಜಮೀರ್ ಅಹಮದ್ ಅವರೇ ಇರಬೇಕು. ಈಗ ಜಮೀರ್ ಅಹಮದ್ ಎಲ್ಲಾ ಜಿಪಿಎ ತೆಗೆದುಕೊಂಡಿರೋದ್ರಿಂದ ಏನ್ ನಷ್ಟ ಆಗಿದೆ ಅದನ್ನ ಜಮೀರ್ ಅಹಮದ್ರಿಂದ ವಸೂಲಿ ಕ್ರಮ ತೆಗೆದುಕೊಳ್ಳೋಣ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನೀವು ಸಹಾಯ ಮಾಡುವುದು ಮಾನವೀಯ ಧರ್ಮ ಇರಬಹುದು. ಯಾವ ಸಂದರ್ಭದಲ್ಲಿ ಸಹಾಯ ಮಾಡ್ತಿದ್ದೀರಾ? ಯಾರಿಗೆ ಸಹಾಯ ಮಾಡ್ತಿದ್ದೀರಾ? ಎಂಬುದು ಮುಖ್ಯವಾಗುತ್ತೆ. ಈಗ ನೀವು ಕೊಟ್ಟಿರುವ ಪರಿಹಾರ ಮಾನವೀಯ ಮೆಸೇಜ್ ಕೊಡುವುದಿಲ್ಲ. ಯಾರು ಏನೇ ಮಾಡಿದರು ನಾನು ನಿಮ್ಮ ಜೊತೆ ಇದ್ದೀನಿ ಎಂಬ ಮೇಸೆಜ್ ಕೊಡುತ್ತೆ. ಇದರ ಬಗ್ಗೆ ಅವರ ಪಕ್ಷ ಯೋಚಿಸಬೇಕು" ಎಂದು ವಾಗ್ದಾಳಿ ನಡೆಸಿದ್ದಾರೆ.
"ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದವರು ಜೈಲಿನಿಂದ ಬಂದ್ರೆ ಅವರಿಗೆ ಹಾರ ಹಾಕಿ ಸನ್ಮಾನ ಮಾಡ್ತಾರೆ. ಅವರಿಗೆ ಪ್ರಚೋದಿಸುವ ಕೆಲಸವನ್ನ ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಮಾಡ್ತಿದ್ದಾರೆ. ಗೋಲಿಬಾರ್ನಲ್ಲಿ ಸತ್ತವರು ಆಮಾಯಕರಲ್ಲ. ಗಲಭೆಯಲ್ಲಿ 300ಕ್ಕೂ ಹೆಚ್ಚು ವಾಹನಗಳನ್ನು ಸುಟ್ಟಿದ್ದಾರೆ, ಆ ವಾಹನ ಸುಟ್ಟವರು ಯಾರು ಹೇಳಲಿ ಹಾಗಾದ್ರೆ. ಇವ್ರು ಅಮಾಯಕರಾದರೆ ಆ ಕಿರಾತಕರು ಯಾರು?
ಇದು ಜಮೀರ್ ಅಹಮದ್ ಖಾನ್ಗೆ ಚೆನ್ನಾಗಿ ಗೊತ್ತಿರುತ್ತೆ. ಹೀಗಾಗಿ ಅವರಿಂದಲೇ ನಷ್ಟ ವಸೂಲಿ ಕೆಲಸ ಆಗಲೇಬೇಕು. ಈಗಿನ ಕಾಂಗ್ರೆಸ್ ಒಳ ರಾಜಕಾರಣ ನೋಡಿದರೆ ಅವರು ಪ್ರೊಡ್ಯೂಸರ್-ಡೈರಕ್ಟರ್ ಆಗಿದ್ದಾರೆ. ಲೀಡ್ ಮಾಡಿರೋದು ಎಸ್.ಡಿ.ಪಿ.ಐ. ಆ್ಯಕ್ಟ್ ಮಾಡಿ 300ಕ್ಕೂ ಹೆಚ್ಚು ವಾಹನ ಸುಟ್ಟಿರೋರು ಈ ಜನ. ಅವರಿಗೆ ಗೊತ್ತಿರುತ್ತೆ ಸ್ಪಷ್ಟಪಡಿಸಲಿ" ಎಂದು ಒತ್ತಾಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ