ಮಂಗಳೂರು(ಜುಲೈ.22): ರಾಜ್ಯದ ಯಾವುದೇ ಧಾರ್ಮಿಕ ಕ್ಷೇತ್ರಗಳಲ್ಲಿ ಸದ್ಯಕ್ಕೆ ಕೇವಲ ದರ್ಶನಕ್ಕೆ ಮಾತ್ರ ಅವಕಾಶ, ಸೇವೆಗಿಲ್ಲ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವ ಮಾಸ್ಟರ್ ಪ್ಲಾನ್ ಕಾಮಗಾರಿಗಳ ವೀಕ್ಷಣೆ, ಹಾಗೂ ಕಾಮಗಾರಿಯಲ್ಲಾಗುತ್ತಿರುವ ವಿಳಂಬದ ಕುರಿತು ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅವರು ಸುದ್ಧಿಗಾರೊಂದಿಗೆ ಮಾತನಾಡಿದರು.
ಧಾರ್ಮಿಕ ಕ್ಷೇತ್ರಗಳಲ್ಲಿ ದೇವರಿಗೆ ವಿವಿಧ ರೀತಿಯ ಸೇವೆಗಳನ್ನು ನೀಡಬೇಕೆಂಬ ಇಚ್ಛೆ ಎಲ್ಲಾ ಭಕ್ತರಲ್ಲೂ ಇದೆ. ಆದರೆ, ಕೊರೋನಾ ರೋಗದ ಹಿನ್ನಲೆಯಲ್ಲಿ ಸರಕಾರ ಅನಿವಾರ್ಯವಾಗಿ ಕೇವಲ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿದೆ. ಸದ್ಯಕ್ಕೆ ಎಲ್ಲಾ ಕ್ಷೇತ್ರಗಳಲ್ಲೂ ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಯಾವುದೇ ಸೇವೆಗಳಿಗೆ ಅವಕಾಶವಿಲ್ಲ. ಕ್ಷೇತ್ರಗಳಲ್ಲಿ ಸೇವಗಳನ್ನು ಆರಂಭಿಸುವ ಕುರಿತು ಆರೋಗ್ಯ ಇಲಾಖೆ ಮತ್ತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ ಬಳಿಕವೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವ ಮಾಸ್ಟರ್ ಪ್ಲಾನ್ ಕಾಮಗಾರಿಯಲ್ಲಿ ಕೈಗೊಂಡ ಒಳಚರಂಡಿ ವ್ಯವಸ್ಥೆ, ವಸತಿ ಗೃಹಗಳ ಕಾಮಗಾರಿಗೆ ಸಂಬಂಧಿಸಿದಂತೆ ಹಲವು ದೂರುಗಳು ಬಂದಿರುವ ಹಿನ್ನಲೆಯಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಮುಜರಾಯಿ ಇಲಾಖೆಯ ಕಮಿಷನರ್ ಗೆ ಸೂಚಿಸಲಾಗಿದ್ದು, ಇಲಾಖೆಯ ಹಿರಿಯ ಅಧಿಕಾರಿಗಳು ಈಗಾಗಲೇ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಒಂದು ತಿಂಗಳ ಒಳಗೆ ಈ ವರದಿ ಸರಕಾರದ ಕೈ ಸೇರಲಿದ್ದು, ಕಾಮಗಾರಿಯಲ್ಲಿ ಲೋಪ ಕಂಡು ಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಹಲವಾರು ಕಾನೂನಿನ ತೊಡಕುಗಳು ಎದುರಾಗಿದ್ದು, ಉಚ್ಛ ನ್ಯಾಯಾಲಯದಲ್ಲಿ ಮೂರು ಹಾಗೂ ಇತರ ನ್ಯಾಯಾಲಯಗಳಲ್ಲಿ ಸುಮಾರು 29 ವ್ಯಾಜ್ಯಗಳಿವೆ. ಈ ಎಲ್ಲಾ ವ್ಯಾಜ್ಯಗಳ ಶೀಘ್ರ ವಿಲೇವಾರಿಗಾಗಿ ಕ್ಷೇತ್ರದ ಕಾನೂನು ವಿಷಯಗಳಿಗಾಗಿಯೇ ವಿಶೇಷ ನ್ಯಾಯವಾದಿಯನ್ನು ನೇಮಿಸಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ : ಶಾಸಕ ದುರ್ಯೋಧನ ದರ್ಪಕ್ಕೆ ಬೀದಿಗೆ ಬಿದ್ದ ತಹಶೀಲ್ದಾರ್ ; ರಾತ್ರಿಯಿಡೀ ಬಯಲಲ್ಲೆ ರಾತ್ರಿ ಕಳೆದ ತಹಶೀಲ್ದಾರ್ ಭಜಂತ್ರಿ
ಅಲ್ಲದೆ ಕ್ಷೇತ್ರದ ಎಲ್ಲಾ ಆಸ್ತಿಗಳನ್ನು ಹದ್ದು ಬಸ್ತಿನಲ್ಲಿಡುವ ಕಾರ್ಯಗಳನ್ನೂ ನಡೆಸಲಾಗುತ್ತಿದೆ. ಅಲ್ಲದೆ ದೇವಸ್ಥಾನದ ಎಲ್ಲಾ ಆಡಳಿತಾತ್ಮಕ ವಿಚಾರಗಳ ಮೇಲ್ಪಿಚಾರಣೆಗಾಗಿ ವಿಶೇಷ ಲೆಕ್ಕಪರಿಶೋಧಕರನ್ನೂ ನೇಮಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ