news18-kannada Updated:January 14, 2021, 3:51 PM IST
ಜಗದೀಶ್ ಶೆಟ್ಟರ್.
ಹುಬ್ಬಳ್ಳಿ; ಸಂಚಿವ ಸಂಪುಟ ವಿಸ್ತರಣೆ ಮಾಡೋದು ಸಿಎಂ ಪರಮಾಧಿಕಾರ. ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕೆಲವರಿಗೆ ಅಸಮಾಧಾನ ಆಗುವುದು ಸಹಜ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಎಲ್ಲರನ್ನು ಸಮಾಧಾನ ಪಡಿಸುವ ಕೆಲಸವನ್ನು ಪಕ್ಷದ ವರಿಷ್ಠರು ಮಾಡಲಿದ್ದಾರೆ ಎಂದಿದ್ದಾರೆ. ಎಚ್.ವಿಶ್ವನಾಥ್ ಅವರು ಸಿಡಿ ಬಹಿರಂಗಪಡಿಸುವ ಕುರಿತು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಶೆಟ್ಟರ್, ಪಕ್ಷದ ಆಂತರಿಕ ವಿಚಾರಗಳು ಏನೇ ಇದ್ದರೂ ಅದನ್ನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕು. ಬಹಿರಂಗವಾಗಿ ಹೇಳಿಕೆಗಳನ್ನು ನೀಡಬಾರದು. ಅಸಮಾಧಾನಗೊಂಡವರಿಗೆ ಪಕ್ಷದ ವರಿಷ್ಠರು ಸೂಕ್ತ ಸ್ಥಾನಮಾನ ನೀಡುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಏಕಸ್ ಹಾಗೂ ಯುಫ್ಲೇಕ್ಸ್ ಕಂಪನಿಗಳ ಸ್ಥಾಪನೆಗೆ ಹಣಕಾಸು ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ, ರಾಜ್ಯ ಸರ್ಕಾರ ಸಂಪೂರ್ಣ ಅನುಮತಿ ನೀಡಿದೆ. ಯೋಜನೆಗಳ ಸ್ಥಾಪನೆಗೆ ಅಗತ್ಯವಾದ ಭೂಮಿಯನ್ನು ಶೀಘ್ರವಾಗಿ ಕಂಪನಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದ ಸಚಿವ ಸಂಪುಟ ಉಪಸಮಿತಿಯಲ್ಲಿ, ನೂತನ ಕೈಗಾರಿಕೆಗಳ ಸ್ಥಾಪನೆಯ ಕುರಿತು ಸುದೀರ್ಘ ಚರ್ಚೆ ನೆಡೆಸಿ ಅನುಮತಿ ನೀಡಲಾಗಿತ್ತು. ಜನವರಿ 12 ರಂದು ಕೈಗಾರಿಕೆಗಳ ಸ್ಥಾಪನೆಗೆ ಹಣಕಾಸು ಇಲಾಖೆಯ ಅನುಮತಿ ಲಭಿಸಿದ್ದು, ಶೀಘ್ರವಾಗಿ ಕಂಪನಿಗಳಿಗೆ ಅನುಮೋದನೆ ಪ್ರಮಾಣ ಪತ್ರಗಳನ್ನು ಸಹ ನೀಡಲಾಗುವುದು ಎಂದರು.
5000 ಕೋಟಿ ಬಂಡವಾಳ ಹೂಡಿಕೆ: 20 ಸಾವಿರ ಉದ್ಯೋಗ ಸೃಷ್ಟಿ
ಏಕಸ್ ಕಂಪನಿ 3524 ಕೋಟಿ ಬಂಡವಾಳ ಹೂಡಿಕೆ ಮುಂದೆ ಬಂದಿದೆ. ರಾಜ್ಯ ಸರ್ಕಾರದಿಂದ 358 ಎಕರೆ ಜಮೀನನ್ನು ಇಟಗಟ್ಟಿ ಹಾಗೂ ಗಾಮಗಟ್ಟಿ ಕೈಗಾರಿಕಾ ವಸಹಾತುಗಳಲ್ಲಿ ಕಂಪನಿಗೆ ಮಂಜೂರು ಮಾಡಲಾಗಿದೆ. ಮುಖ್ಯವಾಗಿ ದಿನನಿತ್ಯ ಉಪಯೋಗಿ ಗ್ರಾಹಕ ವಸ್ತುಗಳ ತಯಾರಿಕಾ ಘಟಕವನ್ನು ಕಂಪನಿ ಸ್ಥಾಪನೆ ಮಾಡುವುದು. ಇದರಿಂದ ಉತ್ತರ ಕರ್ನಾಟಕ ಭಾಗದಲ್ಲಿ 20 ಸಾವಿರ ಉದ್ಯೋಗ ಅವಕಾಶಗಳು ಲಭಿಸಲಿವೆ. ಪೊಟ್ಟಣ ತಯಾರಿಕಾ ಉದ್ದಿಮೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಯುಫ್ಲೇಕ್ಸ್ ಕಂಪನಿ 1464 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ. ಧಾರವಾಡ ಮಮ್ಮಿಗಟ್ಟಿ ಬಳಿಗೆ 50 ಎಕರೆ ಜಮೀನು ಕಂಪನಿಗೆ ಮಂಜೂರು ಮಾಡಲಾಗಿದೆ. ಕಂಪನಿಯಿಂದ ನೇರವಾಗಿ ಒಂದು ಸಾವಿರ ಉದ್ಯೋಗ ಸೃಷ್ಠಿಯಾಗಲಿದೆ.
ಹುಬ್ಬಳ್ಳಿ ಎಫ್.ಎಂ.ಸಿ.ಜಿ. ಕ್ಲಸ್ಟರ್ ಘೋಷಣೆ
ರಾಜ್ಯ ಸರ್ಕಾರ ಹುಬ್ಬಳ್ಳಿಯನ್ನು ಎಫ್.ಎಂ.ಸಿ.ಜಿ (ಫಾಸ್ಟ್ ಮೂವಿಂಗ್ ಕಂಜ್ಯೂಮರ್ ಗೂಡ್ಸ್) ಕ್ಲಸ್ಟರ್ ಎಂದು ಘೋಷಣೆ ಮಾಡಿದೆ. ಎಫ್.ಎಂ.ಸಿ.ಜಿ ಕ್ಲಸ್ಟರ್ ಸ್ಥಾಪನೆಯಾದರೆ, ಹುಬ್ಬಳ್ಳಿ ದಕ್ಷಿಣ ಭಾರತದ ಹಬ್ ಆಗಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಇದು ಕಾರಣೀಭೂತವಾಗಲಿದೆ. ಪ್ರತಿ ಹಂತದಲ್ಲಿ 2500 ಕೋಟಿಯಂತೆ 3 ಹಂತಗಳಲ್ಲಿ 7500 ಕೋಟಿ ಬಂಡವಾಳ ಹರಿದು ಬರುವ ನಿರೀಕ್ಷೆ ಇದೆ. ಸುಮಾರು 1 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಕ್ಲಸ್ಟರ್ ಸ್ಥಾಪನೆ ಬೇಕಾದ ಸೌಲಭ್ಯಗಳನ್ನು ಒದಗಿಸು ಕೈಗಾರಿಕೆ ಇಲಾಖೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕುರಿತು ಹಣಕಾಸು ಇಲಾಖೆಯೊಂದಿಗೆ ಸಮಾಲೋಚಿಸಿ, ಮುಖ್ಯಂತ್ರಿಗಳ ನೇತೃತ್ವದ ಸಚಿವ ಸಂಪುಟ ಸಮಿತಿಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಉತ್ತರ ಭಾರತದ ಗೊಹವಾಟಿಯಲ್ಲಿ ಸದ್ಯ ಎಫ್.ಎಂ.ಸಿ.ಜಿ ಕ್ಲಸ್ಟರ್ ಇದ್ದು, ಕೇಂದ್ರ ಸರ್ಕಾರದ ಪ್ರೋತ್ಸಾಹದಿಂದ ಉದ್ದಿಮೆ ಬಲವಾಗಿ ಬೆಳದು ನಿಂತಿದೆ. ಅಲ್ಲಿನ ಉದ್ಯಮಿಗಳ ಮನ ಒಲಿಸಿ ಹುಬ್ಬಳ್ಳಿ ಕರೆ ತರಲು ಉದ್ದಮಿ ಉಲ್ಲಾಸ್ ಕಾಮತ್ ರ ನೇತೃತ್ವದಲ್ಲಿ ಪ್ರಯತ್ನ ನಡೆಸಲಾಗುತ್ತದೆ.
ಇದನ್ನು ಓದಿ: ಜ.28ರಿಂದ ಫೆ.1ರವರೆಗೆ ನಡೆಯುವ ಸುಪ್ರಿಸಿದ್ದ ಚಿಕ್ಕಲ್ಲೂರು ಜಾತ್ರೆಗೆ ಭಕ್ತರ ಪ್ರವೇಶಕ್ಕೆ ನಿರ್ಬಂಧ!
ಉತ್ತರ ಕರ್ನಾಟಕ ಭಾಗದ ಕೈಗಾರಿಕಾ ಅಭಿವೃದ್ದಿ
ನೂತನ ಕೈಗಾರಿಕಾ ನೀತಿಯಲ್ಲಿ ಎರಡನೇ ಹಾಗೂ ಮೂರನೆ ಸ್ತರದ ನಗರಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡಲಾಗಿದೆ. ಕೊಪ್ಪಳದಲ್ಲಿ ಬಾಣಾವರ ಗ್ರಾಮದಲ್ಲಿ 400 ಎಕರೆ ಜಮೀನು ಖರೀದಿಸಿ ಎಸ್.ಇ.ಝಡ್ ಘೋಷಣೆ ಮಾಡಲಾಗಿದೆ. ಆಟಿಕೆ ತಯಾರಿಕಾ ಕ್ಲಸ್ಟರ್ ನಿರ್ಮಾಣ ಮಾಡಲಾಗುತ್ತಿದೆ. ಏಕಸ್ ಕಂಪನಿ 5000 ಕೋಟಿ ಬಂಡವಾಳ ಹೂಡಿಕೆ ಮಾಡಿ ಆಟಿಕೆ ತಯಾರಿಕೆ ಘಟಕ ಸ್ಥಾಪಿಸಲಿದೆ. ಇದರಿಂದ 20 ಸಾವಿರ ಉದ್ಯೋಗ ಸ್ಥಳೀಯ ಜನರಿಗೆ ಲಭಿಸಲಿದೆ. ಯಾದಗಿರಿ ಜಿಲ್ಲೆಯ ಕಡೆಚೂರು ಕೈಗಾರಿಕಾ ಪ್ರದೇಶದಲ್ಲಿ 4000 ಎಕರೆ ಭೂಮಿಯನ್ನು ಕೈಗಾರಿಕೆ ಸ್ಥಾಪನೆಗಾಗಿ ಅಭಿವೃದ್ಧಿಪಡಿಸಲಾಗಿದೆ. ಹೈದರಾಬಾದ್ ಮೂಲದ ಔಷಧ ತಯಾರಿಕಾ ಕಂಪನಿಗಳು ಕಡೆಚೂರು ಕೈಗಾರಿಕಾ ಪ್ರದೇಶದಲ್ಲಿ ಘಟಕಗಳನ್ನು ಸ್ಥಾಪಿಸಲು ಮುಂದೆ ಬಂದಿವೆ. ರಾಜ್ಯ ಮಟ್ಟದ ಸಮಿತಿಯಿಂದ ಲಾಕ್ ಡೌನ್ ಸಂದರ್ಭದಲ್ಲಿ ಕೂಡ 55 ಔಷಧ ಕಂಪನಿಗಳ ಸೇರಿದಂತೆ ಒಟ್ಟು 70 ಕಂಪನಿಗಳ ಸ್ಥಾಪನೆಗೆ ಅನುಮತಿ ನೀಡಲಾಗಿದೆ. 2289 ಕೋಟಿ ಬಂಡವಾಳ ಹೂಡಿಕೆಯಾಗಲಿದೆ. 11,000 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ. ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆ ಅಭಿವೃದ್ದಿ ಪರ್ವ ಶುರುವಾಗಿದೆ ಎಂದರು.
ಶೇ.100 ರಷ್ಟು ಉದ್ಯೋಗಗಳು ರಾಜ್ಯದವರಿಗೆ ಮೀಸಲು
ಕೈಗಾರಿಕೆ ಸ್ಥಾಪನೆಗಳಿಗೆ ರಾಜ್ಯ ಸರ್ಕಾರದಿಂದ ಹಲವು ರಿಯಾತಿಗಳನ್ನು ನೀಡಲಾಗಿದೆ. ಹುಬ್ಬಳ್ಳಿಯಲ್ಲಿ ಏಕಸ್ ಹಾಗೂ ಯುಪ್ಲೇಕ್ಸ್ ಕಂಪನಿಗಳಿಗೆ ಅಭಿವೃದ್ಧಿಪಡಿಸದ ಭೂಮಿಯನ್ನು ನೀಡಲಿದ್ದೇವೆ. ಹಾಗಾಗಿ ದರ ಹಾಗೂ ಪಾವತಿಯಲ್ಲಿ ಸ್ವಲ್ಪ ವಿನಾಯಿತಿ ನೀಡಲಾಗಿದೆ. ಕಟ್ಟಡ, ಕ್ಲಸ್ಟರ್ ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಸ್ಥಾಪಿಸಲು ಅನುಕೂಲವಾಗುವಂತೆ, ಮೂಲ ಬಂಡವಾಳದ ಹೂಡಿಕೆಯಲ್ಲಿ ಶೇ.25 ರಷ್ಟು ವಿನಾಯಿತಿ ನೀಡಲಾಗಿದೆ. ಹೊಸದಾಗಿ ಸ್ಥಾಪನೆಯಾದ ಕಂಪನಿಗಳ ವಾರ್ಷಿಕ ವಹಿವಾಟಿನ ಮೇಲೆ ಶೇ.2 ರಷ್ಟು ಉತ್ತೇಜಕ ದರವನ್ನು ನೀಡಲಾಗುವುದು. ರಾಜ್ಯ ಸರ್ಕಾರದಿಂದ ಕೈಗಾರಿಕೆ ಸ್ಥಾಪನೆ ಮಾಡುವ ಕಂಪನಿಗಳಿಗೆ ಕಡ್ಡಾಯವಾಗಿ ಸ್ಥಳೀಯರು ಹಾಗೂ ರಾಜ್ಯದವರಿಗೆ ಶೇ.100 ರಷ್ಟು ಉದ್ಯೋಗ ಅವಕಾಶಗಳನ್ನು ನೀಡುವಂತೆ ನಿಯಮಗಳನ್ನು ವಿಧಿಸಲಾಗಿದೆ.
Published by:
HR Ramesh
First published:
January 14, 2021, 3:51 PM IST