ವಿಜಯಪುರ(ಡಿಸೆಂಬರ್. 21): ಬಸವ ನಾಡಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ರಂಗೇರಿದ್ದು, ಮೊದಲ ಹಂತದಲ್ಲಿ ನಡೆಯಲಿರುವ ಮತದಾನಕ್ಕೆ ಸಕಲ ಸಿದ್ಧತೆಗಳನ್ನು ವಿಜಯಪುರ ಜಿಲ್ಲಾಡಳಿತ ಮಾಡಿಕೊಂಡಿದೆ. ವಿಜಯಪುರ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯಿತಿ ಚುನಾವಣೆ ಎರಡು ಹಂತಗಳಲ್ಲಿ ನಡೆಯುತ್ತಿದ್ದು, ಮೊದಲ ಹಂತದಲ್ಲಿ ಎಂಟು ತಾಲೂಕುಗಳ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಿಗೆ ನಾಳೆ ಮತದಾನ ನಡೆಯಲಿದೆ. ಮಂಗಳವಾರ ನಡೆಯಲಿರುವ ಮತದಾನಕ್ಕಾಗಿ ಇಂದು ಬೆಳಿಗ್ಗೆಯಿಂದಲೇ ಎಲ್ಲ ಎಂಟು ತಾಲೂಕು ಕೇಂದ್ರಗಳಿಂದ ಮತಪತ್ರಗಳು, ಮತ ಪೆಟ್ಟಿಗೆಗಳು ಸೇರಿದಂತೆ ಚುನಾವಣೆಗೆ ಅಗತ್ಯವಾಗಿರುವ ಸಲಕರಣೆಗಳನ್ನು ವಿತರಿಸಲಾಗಿದೆ. ವಿಜಯಪುರ ನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ವಿಜಯಪುರ ತಾಲೂಕಿಗೆ ಸಂಬಂಧಿಸಿದ ಚುನಾವಣೆ ಸಲಕರಣೆಗಳನ್ನು ವಿತರಿಸಲಾಯಿತು. ವಿಜಯಪುರ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಸಿದ್ಧತೆಗಳ ಕುರಿತು ಪ್ರತಿಕ್ರಿಯೆ ನೀಡಿರುವ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ವಿಜಯಪುರ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಎಂಟು ತಾಲೂಕುಗಳ ಒಟ್ಟು 111 ಗ್ರಾ. ಪಂ. ಗಳ 2126 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
ಇದರಲ್ಲಿ ಈಗಾಗಲೇ 250 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಅಲ್ಲದೇ, ಒಂದು ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸಿಲ್ಲ. ಈ ಹಿನ್ನೆಲೆಯಲ್ಲಿ ಬಾಕಿ ಇರುವ 1875 ಸ್ಥಾನಗಳಿಗೆ ನಡೆಯಲಿರುವ ಮತದಾನ ನಡೆಯಲಿದೆ. ಈ ಚುನಾವಣೆಗೆ 4997 ಅಭ್ಯರ್ಥಿಗಳು ಕಣದಲ್ಲಿದ್ದು, ಸುಗಮ ಮತದಾನಕ್ಕಾಗಿ ಒಟ್ಟು 1007 ಮತಗಟ್ಟೆಗಳನ್ನು ಜಿಲ್ಲಾಡಳಿತ ತೆರೆದಿದೆ. ಮೊದಲ ಹಂತದ ಚುನಾವಣೆಯಲ್ಲಿ 3 ಲಕ್ಷ 53 ಸಾವಿರದ 699 ಪುರುಷ ಮತ್ತು 3 ಲಕ್ಷ 34 ಸಾವಿರದ 981 ಮಹಿಳೆಯರು ಮತ್ತು 67 ಇತರೆ ಮತದಾರರು ಸೇರಿದಂತೆ ಒಟ್ಟು 6 ಲಕ್ಷ 88 ಸಾವಿರದ 767 ಮತದಾರರಿದ್ದಾರೆ.
ಈ ಚುನಾವಣೆಗೆ ಒಟ್ಟು 7880 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದ್ದು, 262 ಬಸ್ಸುಗಳು, 58 ಮಿನಿ ಬಸ್ಸುಗಳು, 38 ಕ್ರೂಸರ್ ಜೀಪುಗಳು, 46 ಇತರೆ ಜೀಪುಗಳನ್ನು ಚುನಾವಣೆ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.
30 ಜನ ಕೊರೋನಾ ಸೋಂಕಿತರಿಗೂ ಮತದಾನಕ್ಕೆ ಅವಕಾಶ
ಈ ಮಧ್ಯೆ ನಾಳೆ ನಡೆಯಲಿರುವ ಚುನಾವಣೆಯಲ್ಲಿ ಮತದಾನ ಮಾಡಲಿರುವ 30 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ವಿಜಯಪುರ, ತಿಕೋಟಾ, ಬಬಲೇಶ್ವರ ತಾಲೂಕಿನಲ್ಲಿ ಒಟ್ಟು 6, ಬಸವನ ಬಾಗೇವಾಡಿ, ನಿಡಗುಂದಿ, ಕೊಲ್ಹಾರ ತಾಲೂಕುಗಳಲ್ಲಿ ಒಟ್ಟು 17 ಮತ್ತು ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕುಗಳಲ್ಲಿ ಒಟ್ಟು 7 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಆದರೆ, ಅವರೂ ಕೂಡ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಪಿಪಿಇ ಕಿಟ್ ಹಾಕಿಕೊಂಡು ಬಂದು ತಮ್ಮ ಹಕ್ಕು ಚಲಾಯಿಸಬಹುದಾಗಿದೆ. ಹೀಗಾಗಿ ಅವರಿಗೆ ಪಿಪಿಇ ಕಿಟ್ ನ್ನು ಜಿಲ್ಲಾಡಳಿತದಿಂದ ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ.
Bank Theft: ನಿಡಗುಂದಾ ಗ್ರಾಮೀಣ ಬ್ಯಾಂಕ್ ಗೆ ಕನ್ನ ; ಲಕ್ಷಾಂತರ ರೂಪಾಯಿ ನಗದು, ಚಿನ್ನಾಭರಣ ಲೂಟಿ
ಈ ಮಧ್ಯೆ ವಿಜಯಪುರ ಜಿಲ್ಲಾದ್ಯಂತ ಮತದಾನ ಶಾಂತಿಯುತವಾಗಿ ನಡೆಯಲು ಸಕಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿಜಯಪುರ ಎಸ್ಪಿ ಅನುಪಮ ಅಗ್ರವಾಲ ತಿಳಿಸಿದ್ದಾರೆ. ವಿಜಯಪುರ ಜಿಲ್ಲೆಯ ಎಂಟು ತಾಲೂಗಳಲ್ಲಿ ಚುನಾವಣೆ ನಡೆಯುತ್ತಿದ್ದು, 4 ಜನ ಡಿವೈಎಸ್ಪಿ, 8 ಜನ ಸಿಪಿಐ, 54 ಜನ ಪಿಎಸ್ ಐ, 1500 ಜನ ಪೊಲೀಸ್ ಸಿಬ್ಬಂದಿ, 300 ಜನ ಹೋಮ ಗಾರ್ಡ್, 54 ಮೊಬೈಲ್ ಸೆಕ್ಟರ್ ಗಳು, 4 ಐ ಆರ್ ಬಿ ತುಕಡಿಗಳನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದೆ. ಅಲ್ಲದೇ, ಪ್ರತಿಯೊಂದು ತಾಲೂಕಿನಲ್ಲಿ ತಲಾ 2 ರಂತೆ ಒಟ್ಟು 19 ನಿಗ್ರಹ ದಳಗನ್ನು ನಿಯೋಜಿಸಲಾಗಿದೆ ಎಂದು ಅನುಪಮ ಅಗ್ರವಾಲ ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ