ಪುತ್ತೂರು(ಜೂ.21): ಕಳೆದ 60 ವರ್ಷಗಳಿಂದ ಶೆಟ್ಟಿಕಜೆ ಗ್ರಾಮದ ಜನರಿಗೆ ಮಳೆಗಾಲ ಬಂತೆಂದರೆ ಒಂದು ರೀತಿಯ ನಡುಕ. ಇದಕ್ಕೆ ಕಾರಣವೂ ಇದೆ. ಈ ಊರಿನ ಜನ ಇತರ ಊರುಗಳನ್ನು ಸಂಪರ್ಕಿಸಬೇಕಾದಲ್ಲಿ ಇಲ್ಲಿ ಹರಿಯುವ ಶೆಟ್ಟಿ ಹಳ್ಳವನ್ನು ದಾಟಿಯೇ ಹೋಗಬೇಕು. ಬೇಸಿಗೆ ಕಾಲದಲ್ಲಿ ಈ ಹಳ್ಳದಲ್ಲಿ ನೀರಿನ ಮಟ್ಟ ಕ್ಷೀಣಿಸುತ್ತದೆ. ಇದರಿಂದಾಗಿ ಈ ಭಾಗದ ಜನ ಹಳ್ಳದಲ್ಲೇ ಇಳಿದು ತನ್ನ ಅವಶ್ಯಕತೆಗಳಿಗಾಗಿ ಬೇರೆ ಊರುಗಳಿಗೆ ಪಯಣಸುತ್ತಾರೆ.
ಮಳೆಗಾಲದಲ್ಲಿ ತುಂಬಿ ಹರಿಯುವ ಈ ಹಳ್ಳವನ್ನು ದಾಟುವುದು ಬಿಡಿ, ಅದರ ಬಗ್ಗೆ ಯೋಚಿಸುವುದೂ ಸಾಧ್ಯವಿಲ್ಲ. ಆದರೂ ಅತೀ ಅವಶ್ಯಕತೆ ಬಂದಾಗ ಉಪಯೋಗವಾಗಲಿ ಎನ್ನುವ ಕಾರಣಕ್ಕೆ ಪ್ರತಿವರ್ಷವೂ ಇಲ್ಲಿನ ಜನ ಈ ಹಳ್ಳಕ್ಕೆ ಬಿದಿರಿನ ಪಾಪೊಂದನ್ನು ನಿರ್ಮಿಸುತ್ತಾರೆ. ಮಳೆ ನಿಂತಾಗ ಮಾತ್ರ ಈ ಪಾಪು ವನ್ನು ಬಳಕೆ ಮಾಡಬಹುದಾಗಿದ್ದು, ಮಳೆ ಬರುತ್ತಿರುವ ಸಂದರ್ಭದಲ್ಲಿ ಇದನ್ನು ಬಳಸಿದ್ದೇ ಆದಲ್ಲಿ ಪಾಪು ನ ಜೊತೆಗೆ ಅದರಲ್ಲಿ ಸಾಗುವವರೂ ಹಳ್ಳದ ನೀರಿಗೆ ಹೋಗಬೇಕಾದ ಪರಿಸ್ಥಿತಿ ಇಲ್ಲಿನ ಗ್ರಾಮಸ್ಥರದ್ದಾಗಿದೆ.
ಪ್ರತಿ ಬಾರಿ ಚುನಾವಣೆ ಬಂದಾಗ ಚುನಾವಣೆ ಕಳೆದ ಬಳಿಕವೇ ಸೇತುವೆ ನಿರ್ಮಿಸುತ್ತೇವೆ ಎಂದು ಭರವಸೆ ನೀಡಿದ ಜನ ಮತ್ತೆ ಈ ಕಡೆ ತಲೆ ಎತ್ತಿ ನೋಡುವುದು ಮುಂದಿನ ಚುನಾವಣೆಯಲ್ಲಿ ಎನ್ನುವುದು ಹಿರಿಯರಾದ ವೆಂಕಪ್ಪ ಮಲೆಕುಡಿಯ ಹತಾಶೆಯ ನುಡಿ.
ಶೆಟ್ಟಿಕಜೆಯ ಜನ ತನ್ನ ಅವಶ್ಯಕತೆಗಾಗಿ ಕಲ್ಮಕಾರು, ಅಂಜನಕಜೆ, ಕೊಪ್ಪದ, ಗುಳಿಕಾನ,ಗುಡ್ಡೆಕಾನ, ಪೆರ್ಮುಕಜೆ ಹೀಗೆ ಹಲವು ಗ್ರಾಮಗಳನ್ನು ಸಂಪರ್ಕಿಸಲು ಇಲ್ಲಿ ಸೇತುವೆಯ ಅನಿವಾರ್ಯತೆಯಿದೆ. ಶೆಟ್ಟಿಕಜೆಯಲ್ಲಿ ಸುಮಾರು 100 ಕ್ಕಿಂತ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಇದರಲ್ಲಿ ಶೇಕಡಾ 50 ರಷ್ಟು ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೇ ಸೇರಿದ ಕುಟುಂಬಗಳಿವೆ. ಇತ್ತೀಚಿನ ದಿನಗಳಲ್ಲಿ ಜನಪ್ರತಿನಿಧಿಗಳು ಆ ಯೋಜನೆಗೆ, ಈ ಯೋಜನೆಗೆ ಕೋಟಿ-ಕೋಟಿ ಹಣ ಬಿಡುಗಡೆ ಮಾಡುತ್ತಿರುವಾಗ ಊರಿನ ಜನ ತಮ್ಮ ಸೇತುವೆಯೂ ಹಣ ಬಿಡುಗಡೆಯಾಗುತ್ತದೆಯೇ ಎಂದು ಜನರು ಕಾಯುತ್ತಿದ್ದಾರೆ.
6 ಬಾರಿ ಗೆದ್ದು ಶಾಸಕರಾಗಿರುವ ಎಸ್. ಆಂಗಾರರ ಕ್ಷೇತ್ರವಾಗಿರುವ ಇಲ್ಲಿಗೆ ಶಾಸಕರು, ಅಧಿಕಾರಿಗಳು ಬಂದು ಹಲವು ಬಾರಿ ಆಶ್ವಾಸನೆಗಳಳನ್ನು ನೀಡಿ ಹೋಗಿದ್ದಾರೆ. ಆದರೆ, ಆಶ್ವಾಸನೆಗಳು ಆಶ್ವಾಸನೆಗಳಾಗಿಯೇ ಉಳಿದಿದ್ದು, ಈ ಭಾಗದ ಜನ ಮಾತ್ರ ಪ್ರತೀ ಮಳೆಗಾಲದಲ್ಲೂ ಸಂಪರ್ಕವಿಲ್ಲದ ಹೆಣಗಾಡುವ ಸ್ಥಿತಿಯಲ್ಲಿದ್ದಾರೆ.
ಇದನ್ನೂ ಓದಿ :
ಚಿತ್ರದುರ್ಗ ಜಿಲ್ಲೆಯಲ್ಲಿ ಮಕ್ಕೆಜೋಳ ಬೆಳೆಗೆ ಸೈನಿಕ ಹುಳು ಕಾಟ : ಕಂಗಾಲಾದ ಅನ್ನದಾತರು
ಬೇಕಾದದಕ್ಕೂ, ಬೇಡದಕ್ಕೂ ಕೋಟಿ-ಕೋಟಿ ರೂಪಾಯಿಗಳನ್ನು ವ್ಯಯಿಸುವ ಸರಕಾರಗಳು ಶೆಟ್ಟಿಕಜೆ ಗ್ರಾಮದ ಜನರ ಸಮಸ್ಯೆಗಳತ್ತ ಕಣ್ಣು ಹಾಯಿಸಬೇಕಿದೆ. ಸೇತುವೆಯೊಂದನ್ನು ಬಿಟ್ಟು ಬೇರೇನೂ ಬೇಡದ ಈ ಮುಗ್ಧ ಗ್ರಾಮಸ್ಥರ ಬೇಡಿಕೆ ಈಡೇರಿಕೆಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕಿದೆ.
ಸುಳ್ಯ ಶಾಸಕರು ಇನ್ನಾದರೂ ಈ ಗ್ರಾಮಸ್ಥರ ನೆರವಿಗೆ ಬರುತ್ತಾರೋ ಎನ್ನೋದನ್ನು ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ