• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಕೊರೋನಾ ಸೋಂಕಿನಿಂದ ಮಡಿದ ವ್ಯಕ್ತಿಯ ಮೃತದೇಹ ಎಳೆದೊಯ್ದು ಅಮಾನವೀಯವಾಗಿ ಅಂತ್ಯಕ್ರಿಯೆ!

ಕೊರೋನಾ ಸೋಂಕಿನಿಂದ ಮಡಿದ ವ್ಯಕ್ತಿಯ ಮೃತದೇಹ ಎಳೆದೊಯ್ದು ಅಮಾನವೀಯವಾಗಿ ಅಂತ್ಯಕ್ರಿಯೆ!

ಮೃತದೇಹವನ್ನು ಬಡಿಗೆಗ ಕಟ್ಟಿ ಎಳೆದುಕೊಂಡು ಹೋಗುತ್ತಿರುವುದು.

ಮೃತದೇಹವನ್ನು ಬಡಿಗೆಗ ಕಟ್ಟಿ ಎಳೆದುಕೊಂಡು ಹೋಗುತ್ತಿರುವುದು.

ಆರೋಗ್ಯ ಇಲಾಖೆ ಸಿಬ್ಬಂದಿ, ಆ್ಯಂಬುಲೆನ್ಸ್ ಚಾಲಕ ಇದ್ದರೂ ಕೂಡ ಶವ ಹೊತ್ತುಕೊಂಡು ಹೋಗಿಲ್ಲ. ಇಬ್ಬರು ತನಗೆ ಸಂಬಂಧವಿಲ್ಲವಂತೆ ದೂರ ಸರಿದಿದ್ದರು. ಪಂಚಾಯಿತಿ ಅಧಿಕಾರಿಗಳು ಜೆಸಿಬಿ ಮೂಲಕ ಗುಂಡಿ ತೊಡಿಸಿ ಪಂಚಾಯಿತಿಯ ಹೊರಗುತ್ತಿಗೆ ಆಧಾರ ಮೇಲೆ ಡಿ ಗ್ರೂಪ್ ನೌಕರರಾಗಿ ಕೆಲಸ ಮಾಡುವ ಇಬ್ಬರು ಸಿಬ್ಬಂದಿ ಮೂಲಕ ಮೃತದೇಹವನ್ನು ಎಳೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಿಸಿದ್ದಾರೆ.

ಮುಂದೆ ಓದಿ ...
  • Share this:

ಯಾದಗಿರಿ: ಬಳ್ಳಾರಿಯಲ್ಲಿ ಕೊರೋನಾ ಸೋಂಕಿನಿಂದ ಮಡಿದವರ  ಮೃತದೇಹಗಳನ್ನು ಗುಂಡಿಗೆ ಕಸದಂತೆ ಎಸೆದು ಅಮಾನವೀಯವಾಗಿ ಅಂತ್ಯಕ್ರಿಯೆ ನಡೆಸಿದ ರೀತಿಯಲ್ಲಿಯೇ ಯಾದಗಿರಿಯಲ್ಲೂ ಅದೇ ರೀತಿ ಅಮಾನವೀಯವಾಗಿ ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿದ ಘಟನೆ ನಡೆದಿದೆ.

ಕೊರೋನಾ ಸೋಂಕಿನಿಂದ ಮೃತ ವ್ಯಕ್ತಿಯ ಶವವನ್ನು ಆ್ಯಬುಲೆನ್ಸ್​ನಲ್ಲಿ ಸಿಬ್ಬಂದಿಗಳು ಮೃತ ವ್ಯಕ್ತಿಯ ಗ್ರಾಮವಾದ ಹೊನಗೇರಾದ ಜಮೀನಿನ ರಸ್ತೆ ಭಾಗದವರೆಗೆ ತೆಗೆದುಕೊಂಡು ಬಂದಿದ್ದರು. ನಿಯಮವಾಳಿ ಪ್ರಕಾರ ಶವವನ್ನು ನಾಲ್ಕು ಜನ ಹೊತ್ತುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಬೇಕಿತ್ತು. ಆದರೆ, ಶವವನ್ನು ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಬ್ಬರು  ಪ್ಲಾಸ್ಟಿಕ್ ಬಟ್ಟೆಯಲ್ಲಿ ಮುಚ್ಚಿದ ಮೃತದೇಹವನ್ನು ರಸ್ತೆಯಿಂದ ಅಂತ್ಯಕ್ರಿಯೆ ಮಾಡುವ ಸ್ಥಳದವರೆಗೂ ಕಟ್ಟಿಗೆಗೆ ಕಟ್ಟಿಕೊಂಡು ಎಳೆದುಕೊಂಡು ತಂದಿದ್ದಾರೆ.

ಮೃತ ವ್ಯಕ್ತಿಯು ಯಾದಗಿರಿ ತಾಲೂಕಿನ ಹೊನಗೇರಾ ಗ್ರಾಮದ ನಿವಾಸಿಯಾಗಿದ್ದು, ಹೆಂಡತಿ ಊರಾದ ರಾಯಚೂರು ಜಿಲ್ಲೆಯ  ದೇವದುರ್ಗ ತಾಲೂಕಿನ ಸಿರವಾರ ಗ್ರಾಮದಲ್ಲಿ ಪತ್ನಿ, ಹಾಗೂ ‌ಮೂವರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದರು. ಜೂನ್ 28ರಂದು ಹಿರಿಯ ಪುತ್ರಿ ವಿವಾಹ ಸಿರವಾರ ಗ್ರಾಮದಲ್ಲಿ ಮಾಡಲಾಗಿತ್ತು. ಮಗಳ ಮದುವೆ ಮರು ದಿನ ಉಸಿರಾಟ ಸಮಸ್ಯೆ ಕಾಣಿಸಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರುನ ರಿಮ್ಸ್ ಆಸ್ಪತ್ರೆಗೆ ಆ್ಯಂಬುಲೆನ್ಸ್ ಕರೆದುಕೊಂಡು ಹೋಗಲಾಗಿತ್ತು. ಆದರೆ, ರಾಯಚೂರು ಸಮೀಪ ಮೃತಪಟ್ಟಿದ್ದರು. ನಂತರ ಮೃತದೇಹದ ಸ್ಯಾಂಪಲ್‌ ಸಂಗ್ರಹ ಮಾಡಿ ಪರೀಕ್ಷೆ ನಡೆಸಿದಾಗ  ಕೊರೋನಾ ಸೋಂಕು ಇರುವುದು ದೃಢವಾಗಿತ್ತು. ಆದರೆ, ರಾಯಚೂರು ‌ಜಿಲ್ಲಾಡಳಿತ ಇನ್ನೂ ಅಧಿಕೃತವಾಗಿ ಕೊರೋನಾ ಸೋಂಕಿನಿಂದ ಮೃತಪಟ್ಟಿರುವ ಬಗ್ಗೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿಲ್ಲ. ಮೃತ ವ್ಯಕ್ತಿಯ ಊರಾದ ಹೊನಗೇರಾದಲ್ಲಿ ಅಂತ್ಯಕ್ರಿಯೆ ಮಾಡಲು ಶವವನ್ನು ರಾಯಚೂರಿನಿಂದ 30ರಂದು ನಸುಕಿನ ಜಾವ ಯಾದಗಿರಿಗೆ ತರಲಾಗಿತ್ತು. ಅಂತ್ಯಕ್ರಿಯೆ ಎಲ್ಲಿ ಮಾಡುವುದು ಎಂಬುದರ ಬಗ್ಗೆ ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಮೃತದೇಹ ಇರಿಸಲಾಗಿತ್ತು.

ಗ್ರಾಮಸ್ಥರು ವಿರೋಧ!

ಮೃತ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಹೊನಗೇರಾ ಗ್ರಾಮದಲ್ಲಿ ಮಾಡಲು ಕುಟುಂಬಸ್ಥರು ನಿರ್ಧಾರ ಮಾಡಿದ್ದರು. ಆದರೆ, ಗ್ರಾಮಸ್ಥರು ಶವ ತರಬಾರದೆಂದು ಕುಟುಂಬಸ್ಥರಿಗೆ ಒತ್ತಾಯ ಮಾಡಿದ್ದರು. ಆದರೆ, ಯಾದಗಿರಿ ನಗರದ ಹೊರಭಾಗದ ಭೀಮಾ ನದಿ ದಂಡೆಯ ಪಕ್ಕದಲ್ಲಿ ಮಾಡುವ ಬಗ್ಗೆ ಚರ್ಚೆ ಮಾಡಲಾಗಿತ್ತು. ಆದರೆ, ಕುಟುಂಬಸ್ಥರ ಬಯಕೆಯಂತೆ ಅಧಿಕಾರಿಗಳು ಗ್ರಾಮದ ಮೃತ ವ್ಯಕ್ತಿಯ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡಲು ನಿರ್ಧಾರ ಮಾಡಿ ಗ್ರಾಮಸ್ಥರ ಮನವೊಲಿಸಿದ್ದರು. ನಂತರ, ಮಂಗಳವಾರ ಮೃತ ವ್ಯಕ್ತಿಯ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ಆದರೆ, ಅಂತ್ಯಕ್ರಿಯನ್ನು ಅಮಾನುಷವಾಗಿ ಮಾಡಲಾಗಿದೆ.

ಆರೋಗ್ಯ ಇಲಾಖೆ ನಿಷ್ಕಾಳಜಿ..!

ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆಯ ನಿಯಮದಂತೆ ಖುದ್ದು ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡ ಹಾಜರಿದ್ದು ಅಂತ್ಯಕ್ರಿಯೆ ಮಾಡಿಸಬೇಕಿತ್ತು. ಆದರೆ, ಆರೋಗ್ಯ ಇಲಾಖೆ ಸಿಬ್ಬಂದಿ, ಆ್ಯಂಬುಲೆನ್ಸ್ ಚಾಲಕ ಇದ್ದರೂ ಕೂಡ ಶವ ಹೊತ್ತುಕೊಂಡು ಹೋಗಿಲ್ಲ. ಇಬ್ಬರು ತನಗೆ ಸಂಬಂಧವಿಲ್ಲವಂತೆ ದೂರ ಸರಿದಿದ್ದರು. ಪಂಚಾಯಿತಿ ಅಧಿಕಾರಿಗಳು ಜೆಸಿಬಿ ಮೂಲಕ ಗುಂಡಿ ತೊಡಿಸಿ ಪಂಚಾಯಿತಿಯ ಹೊರಗುತ್ತಿಗೆ ಆಧಾರ ಮೇಲೆ ಡಿ ಗ್ರೂಪ್ ನೌಕರರಾಗಿ ಕೆಲಸ ಮಾಡುವ ಇಬ್ಬರು ಸಿಬ್ಬಂದಿ ಮೂಲಕ ಮೃತದೇಹವನ್ನು ಎಳೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಿಸಿದ್ದಾರೆ.

ಇದನ್ನು ಓದಿ: ಕೊರೋನಾ ಮೃತದೇಹಗಳನ್ನು ಅಮಾನವೀಯವಾಗಿ ಅಂತ್ಯ ಸಂಸ್ಕಾರ ಮಾಡಿದ್ದು ಖಂಡನೀಯ; ಸಿಎಂ ಯಡಿಯೂರಪ್ಪ


ಮೃತ ವ್ಯಕ್ತಿಯ ಪತ್ನಿ ಹಾಗೂ ಮಕ್ಕಳು ಕೂಡ ಕ್ವಾರೆಂಟೈನ್​ನಲ್ಲಿದ್ದಾರೆ. ಹೀಗಾಗಿ ಅವರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿಲ್ಲ. ಆದರೆ, ಹೊನಗೇರಾ ಗ್ರಾಮದಲ್ಲಿ ಕುಟುಂಬಸ್ಥರು ಹಾಗೂ ಸಂಬಂಧಿಕರು ಶವದ ಹತ್ತಿರ ಸುಳಿಯದೆ ಕೆಲವರು ದೂರದಿಂದಲೇ ಅಂತ್ಯಕ್ರಿಯೆ ಕಾರ್ಯ ನೋಡಿದರು. ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಎಂ.ಕೂರ್ಮರಾವ್, ಈ ಬಗ್ಗೆ ಗಮನಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

First published: