ವಿಜಯಪುರ (ಜುಲೈ 20); ಅಸ್ಪೃಶ್ಯತೆ ಮತ್ತು ವಿನಾಃ ಕಾರಣ ದಲಿತರ ಮೇಲಿನ ಹಲ್ಲೆ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಅಧಿಕವಾಗುತ್ತಲೇ ಇದೆ. ಇದೇ ರೀತಿಯ ಅಮಾನವೀಯ ಘಟನೆಗೆ ಇದೀಗ ವಿಜಯಪುರ ಜಿಲ್ಲೆ ಸಾಕ್ಷಿಯಾಗಿದೆ. ಕೇವಲ ಬೈಕ್ ಮುಟ್ಟಿದ್ದನ್ನೆ ನೆಪವಾಗಿಟ್ಟುಕೊಂಡು ದಲಿತ ಯುವಕನನ್ನು ಸವರ್ಣಿಯ ಗುಂಪೊಂದು ಅರೆಬೆತ್ತಲುಗೊಳಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಅಮಾನವೀಯ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲ್ಲೂಕಿನ ಮಿಣಜಗಿ ಗ್ರಾಮದಲ್ಲಿ ಜರುಗಿದೆ.
ಜುಲೈ 18ರ ಶನಿವಾರ ಘಟನೆ ನಡೆದಿದ್ದು, ಸಂತ್ರಸ್ತನ ತಂದೆ ಯಂಕಪ್ಪ ಹುಸೇನಪ್ಪ ತಳವಾರರವರ ನೀಡಿದ ದೂರಿನ ಮೇರೆಗೆ 13ಕ್ಕೂ ಹೆಚ್ಚು ಸವರ್ಣಿಯ ಮಂದಿಯ ಮೇಲೆ ತಾಳಿಕೋಟಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಒಬ್ಬನ್ನನ್ನು ಮಾತ್ರ ವಿಚಾರಣೆ ನಡೆಸಿರುವುದರಿಂದ ಆರೋಪಿಗಳನ್ನು ಬಂಧಿಸುವಂತೆ ಜಿಲ್ಲೆಯ ಪ್ರಜ್ಞಾವಂತರು ಇದೀಗ ಒತ್ತಾಯಿಸಿದ್ದಾರೆ.
ಘಟನೆಯ ವಿವರ:
28 ವರ್ಷದ ದಲಿತ ಯುವಕ ಕಾಶಿನಾಥ ತಳವಾರ ತನ್ನ ತಂದೆ ಯಂಕಪ್ಪ ಹುಸೇನಪ್ಪ ತಳವಾರರವರ ಜೊತೆ ಜುಲೈ 18ರಂದು ಬೆಳಿಗ್ಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾಗ 25ಕ್ಕೂ ಹೆಚ್ಚು ಜನರಿದ್ದ ಸವರ್ಣಿಯರ ಗುಂಪು ಆತನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದೆ.
ವೈರಲ್ ಆಗಿರುವ ಮನಕಲಕುವ ವಿಡಿಯೋದಲ್ಲಿರುವಂತೆ, ಕಾಶಿನಾಥನನ್ನು ಪ್ಯಾಂಟ್ ಕಿತ್ತು ಆತನ ಮೇಲೆ ಕೋಲು ಮತ್ತು ಚಪ್ಪಲಿಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಆತ ಸಹಾಯಕ್ಕಾಗಿ ಅಂಗಲಾಚುತ್ತಿದ್ದರೂ ಸಹ 30ಕ್ಕೂ ಹೆಚ್ಚು ಜನ ಹಲ್ಲೆಯನ್ನು ನಿಂತು ನೋಡುತ್ತಿದ್ದಾರೆಯೇ ಹೊರತು ಯಾರೋಬ್ಬರೂ ಸಹ ಆತನ ಸಹಾಯಕ್ಕೆ ಬಂದಿಲ್ಲ. ಮುಂದೆ ಹೋಗುತ್ತಿದ್ದ ಯುವಕನ ತಂದೆ ಓಡಿಬಂದು ತನ್ನ ಮಗನ್ನನ್ನು ಬಿಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸವರ್ಣಿಯ ಜಾತಿಗೆ ಸೇರಿದ ಮಹಾಂತೇಶ, ಮುತ್ತಣ್ಣ ಮಹಾದೇವಪ್ಪ, ಶರಣಗೌಡ, ಸಂಗನಗೌಡ ಮುಂತಾದವರು ತನ್ನ ಗಾಡಿ ಮುಟ್ಟಿ ಮೈಲಿಗೆ ಮಾಡಿದ್ದಾನೆ ಎಂಬ ನೆಪವಿಟ್ಟುಕೊಂಡು ಸಣ್ಣ ಜಾತಿಯವರು ನೀವು ಎಂದು ಕೆಟ್ಟದಾಗಿ ನಿಂದಿಸಿ ಜಾತಿನಿಂದನೆ ಮಾಡಿದ್ದಾರೆ. ನಿಮ್ಮನ್ನು ಜೀವ ಸಹಿತ ಇರಲು ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿದ್ದಾರೆ. ನನ್ನ ಮಗನನ್ನು ಬಿಡಿಸಿಕೊಳ್ಳಲು ಹೋದಾಗ ನನ್ನ ಮತ್ತು ನನ್ನ ಕುಟುಂಬದವರ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎಂದು ಯಂಕಪ್ಪ ಹುಸೇನಪ್ಪ ತಳವಾರ ಆರೋಪಿಸಿದ್ದಾರೆ.
ಆ ಸಮಯದಲ್ಲಿ ಅದೇ ದಾರಿಯಲ್ಲಿ ಮುದ್ದೇಬಿಹಾಳ ಸಿಪಿಐರವರು ಬಂದ ಕಾರಣ ಆರೋಪಿಗಳು ಓಡಿ ಹೋದರು. ನಂತರ ಆಂಬುಲೆನ್ಸ್ನಲ್ಲಿ ನನ್ನ ಮಗನನ್ನು ಮುದ್ದೇಬಿಹಾಳ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ದೂರಿನ ಆಧಾರದಲ್ಲಿ ಸೆಕ್ಷನ್ 143,147, 324, 354, 504, 506, 149 ಮತ್ತು ದಲಿತ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ಹಲವು ಸೆಕ್ಷನ್ಗಳಡಿಯಲ್ಲಿ ತಾಳಿಕೋಟೆ ಪೊಲೀಸರು 13ಕ್ಕೂ ಹೆಚ್ಚು ಜನರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಆದರೆ ಇದುವರೆಗೂ ಅಧಿಕೃತವಾಗಿ ಯಾರನ್ನು ಬಂಧಿಸದಿರುವುದು ದಲಿತ ಮುಖಂಡರಲ್ಲಿ ಆಕ್ರೋಶ ಹುಟ್ಟುಹಾಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ