ಶಿವಮೊಗ್ಗ(ಅಕ್ಟೋಬರ್. 09): ಆಗ ತಾನೆ ಹುಟ್ಟಿದ ಆ ಮರಿಯಾನೆ ತಾಯಿ ಹಂಬಲದಂತೆ ಮೇಲೆ ಏಳಲೇ ಇಲ್ಲ. ಮರಿ ಎದ್ದು ನಿಲ್ಲದಿರುವುದನ್ನು ಕಂಡ ತಾಯಿ ಸೊಂಡಿಲಿನಿಂದ ತಿವಿದು ಮೇಲೇರಿಸುವ ಪ್ರಯತ್ನ ಮಾಡಿದೆ. ಆದರೆ, ಮರಿಯಾನೆ ಮೇಲೆ ಏಳಲೇ ಇಲ್ಲ. ಕೊನೆಗೆ ತಾಯಿ ಆನೆ, ಮರಿಯಾನೆಯನ್ನು ತೊರೆದು ಹೋಯಿತು. ಅನಾಥವಾದ ಮರಿಯಾನೆ ಇದ್ದ ಸ್ಥಳದಲ್ಲೇ ಒದ್ದಾಡುವಾಗ, ಅರಣ್ಯಾಧಿಕಾರಿಗಳು ಸೂಕ್ತ ಚಿಕಿತ್ಸೆ ಕೊಡಿಸಿ, ಈಗ ಸಕ್ರೆಬೈಲು ಹಾರೈಕೆ ಕೇಂದ್ರಕ್ಕೆ ಕಳುಹಿಸಿದ್ದಾರೆ. ಮರಿಯಾನೆಯನ್ನು ಉಳಿಸಿಕೊಳ್ಳಲು ಸಿಬ್ಬಂದಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ. ಹುಟ್ಟಿದ ಮರಿಯಾನೆ ಎದ್ದು ನಿಲ್ಲಲೇ ಇಲ್ಲ. ಎದ್ದು ನಿಲ್ಲದ ಮರಿಯನ್ನು ತೊರೆದು ಕಾಡಿನ ಕಡೆಗೆ ಪ್ರಯಾಣ ಮಾಡಿತು ತಾಯಿ ಆನೆ. ತಬ್ಬಲಿಯಾದ ಮರಿಯಾನೆಯನ್ನು ಸಕ್ರೆಬೈಲ್ ಬಿಡಾರಕ್ಕೆ ಕರೆತಂದು ಆರೈಕೆ ಮಾಡಲಾಗುತ್ತಿದೆ. ಹಾಸನ ಜಿಲ್ಲೆಯ ಮಳಲಿ ಗ್ರಾಮದ ಕಾಫಿ ತೋಟದಲ್ಲಿ ಕಳೆದ 10 ದಿನಗಳ ಹಿಂದೆ ಆನೆಯೊಂದು ಗಂಡು ಮರಿಗೆ ಜನ್ಮ ನೀಡಿದೆ. ಆದರೆ ಹುಟ್ಟಿದ ಮರಿ ಆನೆ ಸಕಾಲದಲ್ಲಿ ಎದ್ದು ನಿಲ್ಲದಿದ್ದಾಗ ತಾಯಿ ಆನೆ ಮರಿಯಾನೆಯನ್ನು ಎದ್ದೇಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡಿದೆ.
ಅದರೆ ಮರಿಯಾನೆ ಮಾತ್ರ ಮೇಲೆ ಏಳಲೇ ಇಲ್ಲ. ಕಾಡಾನೆಗಳ ಕಾಡು ನೀತಿ ಬೇರೆಯದ್ದೇ ಇದೆ. ಕಾಡು ನಿಯಮದಂತೆ ಹುಟ್ಟಿದ ಮರಿ ತಕ್ಷಣ ಏಳದಿದ್ದರೆ. ಎದ್ದು ತಾಯಿ ಹಾಲು ಕುಡಿಯದಿದ್ದರೆ, ಸಹಜವಾಗಿ ತಾಯಿ ಮರಿಯನ್ನು ತೊರೆದು ಹೋಗುವುದು ಸಾಮಾನ್ಯ. ಅದೇ ರೀತಿ ಮಳಲಿ ತೋಟದಲ್ಲೂ ಹುಟ್ಟಿದ ಮರಿ ಏಳದಿದ್ದಾಗ ತಾಯಿ ಆನೆ ತೊರೆದು ಹೋಗಿದೆ. ನಂತರ ಆರಣ್ಯ ಇಲಾಖೆ ಸಿಬ್ಬಂದಿಗಳು ಮರಿ ಆನೆಯನ್ನು ರಕ್ಷಣೆ ಮಾಡಿದ್ದಾರೆ. ಮರಿಯಾನೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಸಕ್ರೆಬೈಲಿಗೆ ಕಳುಹಿಸಲಾಗಿದೆ.
ಸಕ್ರೆಬೈಲಿಗೆ ಕರೆತಂದ ನಂತರ ಡಾಕ್ಟರ್ ವಿನಯ್ ಮರಿಯಾನೆಯ ಆರೋಗ್ಯದ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಾರೆ. ಮರಿಯಾನೆಗೆ ಹುಟ್ಟಿನಿಂದಲೇ ನರ ದೌರ್ಬಲ್ಯವಿರುವುದು ಪ್ರಾಥಮಿಕ ಆರೋಗ್ಯ ಪರೀಕ್ಷೆಯಿಂದ ತಿಳಿದು ಬಂದಿದೆ. ಅಲ್ಲದೆ ಹುಟ್ಟಿದ ಮರಿ ಆನೆ ತಾಯಿ ಹಾಲನ್ನು ಕುಡಿದಿಲ್ಲ. ನರ ದೌರ್ಬಲ್ಯ ಇರುವುದರಿಂದ ಮರಿ ಆನೆ ಎದ್ದೇಳಲು ಆಗುತ್ತಿಲ್ಲ. ಹೀಗಾಗಿ ಆನೆಗೆ ಹೆಚ್ಚಿನ ಚಿಕಿತ್ಸೆ ಮತ್ತು ಆರೈಕೆ ಮಾಡಲಾಗುತ್ತಿದೆ.
ಇದನ್ನೂ ಓದಿ : ಮಾಸ್ಕ್ ಇಲ್ಲ ಸ್ಯಾನಿಟೈಸರ್ ಕೊಡುತ್ತಿಲ್ಲ ; ವಠಾರ ಶಾಲೆಯ ಮುಖ್ಯ ಶಿಕ್ಷಕರ ಗೋಳು
ತಾಯಿಯಿಂದ ತಬ್ಬಲಿಯಾದ ಮರಿಯಾನೆಗಳಿಗೆ ಚಿಕಿತ್ಸೆ ನೀಡುವುದು ಒಂದು ಸವಾಲಾದರೆ. ಕಾಲುಗಳು ಸ್ವಾಧೀನ ಕಳೆದುಕೊಂಡ ಮರಿಯಾನೆಗೆ ಚಿಕಿತ್ಸೆ ನೀಡುವುದು ನಿಜಕ್ಕೂ ದೊಡ್ಡ ಸವಾಲಿನ ಕೆಲಸವಾಗಿದೆ. ಸಕ್ರೆಬೈಲು ಆನೆ ಬಿಡಾರದಲ್ಲಿ ತಬ್ಬಲಿಯಾದ ಮರಿಯಾನೆಗಳ ಹಾರೈಕೆಯನ್ನು ಸವಾಲಿನ ರೂಪದಲ್ಲಿ ಸ್ವೀಕರಿಸಿ, ಅವುಗಳಿಗೆ ಜೀವದಾನ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ